ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬಂದಿಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಅಗಲಿದ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಶ್ರೇಷ್ಠ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದ ಡಾ.ಎಸ್.ಎಲ್.ಭೈರಪ್ಪ ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದರು. ಆದರೆ, ಅದೇಕೋ ಆ ಪ್ರಶಸ್ತಿ ಅವರಿಗೆ ಒಲಿದು ಬರಲೇ ಇಲ್ಲ. ಅವರು ರಚಿಸಿದ ಆವರಣ ಕಾದಂಬರಿ 70 ಮುದ್ರಣ ಕಂಡು ಅಪಾರ ಜನಪ್ರಿಯತೆ ಗಳಿಸಿದೆ. ಒಂದೇ ವರ್ಷದಲ್ಲಿ 15 ಬಾರಿ ಮುದ್ರಣ ಕಂಡ ಅಪರೂಪದ ಕಾದಂಬರಿ ಎನಿಸಿಕೊಂಡಿದೆ. ಅವರ ಅನೇಕ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಆದರೂ ಸರಸ್ವತಿ ಪುತ್ರನಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಲಿಲ್ಲವೆಂಬ ಕೊರಗು ಸಾಹಿತ್ಯ ಪ್ರಿಯರಲ್ಲಿದೆ ಎಂದರು.ಡಾ.ಎಸ್.ಎಲ್ ಭೈರಪ್ಪ ಅವರು ಪಠ್ಯ ಪುಸ್ತಕ ಸಮಿತಿಯಲ್ಲಿ ಇದ್ದ ವೇಳೆ ಇತಿಹಾಸವನ್ನು ಮಕ್ಕಳಿಗೆ ತಪ್ಪಾಗಿ ಹೇಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ರಾಜೀನಾಮೆ ನೀಡಿ ಸಮಿತಿಯಿಂದ ಹೊರ ಬಂದಿದ್ದರು. ಅಷ್ಟೊಂದು ನಿಷ್ಟುರವಾದಿಗಳಾಗಿದ್ದರು. ಭೈರಪ್ಪನವರ ಸಾವು ಕೇವಲ ಕನ್ನಡ ಸಾರಸ್ವತ ಲೋಕಕ್ಕೆ ಮಾತ್ರವಲ್ಲ, ಭಾರತದ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟ ಉಂಟು ಮಾಡಿದೆ. ಅಂತಹ ಸೃಜನಾತ್ಮಕ ಸಾಹಿತಿಗಳ ಸಂಖ್ಯೆ ಪ್ರಸ್ತುತ ಹೆಚ್ಚಾಗಬೇಕಿದೆ. ಅವರ ಬದುಕು, ಆದರ್ಶ, ಬರವಣಿಗೆ ಯುವ ಸಾಹಿತಿಗಳಿಗೆ ಮಾರ್ಗದರ್ಶಕವಾಗಬೇಕು ಎಂದರು.
ಗೃಹಭಂಗ ಮತ್ತು ದಾಟು ಕಾದಂಬರಿಗಳು ಭಾರತದ 14 ಭಾಷೆಗಳಿಗೆ ಅನುವಾದಗೊಂಡಿದೆ. ಭೈರಪ್ಪನವರ ಕಾದಂಬರಿಗಳು ಕನ್ನಡದಿಂದ ಸಂಸ್ಕೃತಕ್ಕೆ ಭಾಷಾಂತರಗೊಂಡಿರುವುದು ವಿಶೇಷವಾಗಿದೆ. ತತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಅವರು ವೈಚಾರಿಕತೆಯನ್ನು ಪರಿಣಾಮಕಾರಿಯಾಗಿ ಕಾದಂಬರಿಗಳಲ್ಲಿ ಪ್ರತಿಪಾದಿಸಿದ್ದರು. ಆದರೆ, ಕೊನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಧರ್ಮದ ಚೌಕಟ್ಟಿಗೆ ಬಂದು ನಿಲ್ಲುತ್ತಿದ್ದುದು ಅಚ್ಚರಿ ಮೂಡಿಸಿತ್ತು ಎಂದರು.
ಶ್ರದ್ಧಾಂಜಲಿ ಸಭೆಯಲ್ಲಿ ಪ್ರೊ.ಮಂಜುನಾಥ್, ಪ್ರೊ.ಎಂ.ಆರ್.ಮಂಜು, ದ.ಕೋ.ಹಳ್ಳಿ ಚಂದ್ರಶೇಖರ್, ಚಂದ್ರಲಿಂಗು, ಪನ್ನೇದೊಡ್ಡಿ ಹರ್ಷ, ಮಹಾದೇವಸ್ವಾಮಿ, ಮಹದೇವಪ್ಪ, ಶಂಕರೇಗೌಡ ಇತರರಿದ್ದರು.