ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ರೈತ ಭವನದ ಆವರಣದಿಂದ ಆರಂಭವಾದ ರೈತರ ಪ್ರತಿಭಟನೆ ಮೆರವಣಿಗೆಗೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು. ಬಳಿಕ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ರೈತರು, ಮೂರು ದಿನಗಳ ಕಾಲ ಸಂಕೇತಿಕ ಧರಣಿ ಆರಂಭಿಸಿದರು.
ತುಂಗಭದ್ರಾ ಅಣೆಕಟ್ಟು ನಿಮಾರ್ಣದ ಪೂರ್ವದಲ್ಲಿ ವಿಜಯನಗರ ಅರಸರ ಕಾಲದಿಂದಲೂ ರಾಯ, ಬಸವ, ತುರ್ತಾ, ಕಾಳಕಟ್ಟ ಕಾಲುವೆಗಳು ನಿರಂತರ ನೀರು ಒದಗಿಸುವ ಮೂಲಕ ಈ ಭಾಗದ ರೈತರು ಜನ- ಜಾನುವಾರುಗಳಿಗೆ ಆಶ್ರಯವಾಗಿದ್ದವು. ತುಂಗಭದ್ರಾ ಅಣೆಕಟ್ಟುಗಳು ನಿರ್ಮಾಣದ ನಂತರವೂ ವರ್ಷ ೧೧ ತಿಂಗಳು ನೀರು ಬಿಡುವ ಮೂಲಕ ಈ ಭಾಗದ ರೈತರ ಜೀವನಾಡಿಯಾಗಿದ್ದು, ಈ ವರ್ಷ ಈಗಾಗಲೇ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದರಿಂದ ಈ ಭಾಗದ ರೈತರು ಹಾಗೂ ಜನ ಜಾನುವಾರು ಸೇರಿದಂತೆ ರೈತರ ಬೆಳೆಗಳಿಗೂ ನೀರು ಸಿಗದೇ ತೊಂದರೆಯಾಗಿದೆ. ಕೂಡಲೇ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಗೋಸಲ ಭರಮಪ್ಪ ಅವರು, ಅನೇಕ ಬಾರಿ ಮೌಖಿಕವಾಗಿ ಹೇಳಿದರೂ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಸರ್ಕಾರದ ಕ್ರಮವನ್ನು ಖಂಡಿಸಿದರು,