ಇಂದಿನಿಂದ ರಂಗಾಯಣದಲ್ಲಿ ನಾಟಕೋತ್ಸವ: ಡಿ.ಪ್ರಸನ್ನ

KannadaprabhaNewsNetwork |  
Published : Sep 21, 2024, 02:02 AM IST
ಪೊಟೋ: 19ಎಸ್‌ಎಂಜಿಕೆಪಿ04ಶಿವಮೊಗ್ಗದ ರಂಗಾಯಣದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾಟಕೋತ್ಸವದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಅಶೋಕನಗರದಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ನಾಟಕೋತ್ಸವದ ಸಂದರ್ಭದಲ್ಲಿ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ರಂಗಾಯಣವು ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಸೆ.21, 22, ಮತ್ತು 23 ರಂದು ಮೂರು ದಿನಗಳ ‘ನಾಟಕೋತ್ಸವ’ ಹಮ್ಮಿಕೊಂಡಿದೆ ಎಂದು ಶಿವಮೊಗ್ಗ ರಂಗಾಯಣದ ನೂತನ ನಿರ್ದೇಶಕ ಡಿ.ಪ್ರಸನ್ನ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೂರು ದಿನಗಳ ಕಾಲ ನಾಟಕೋತ್ಸವವನ್ನು ಇಲ್ಲಿಯ ಅಶೋಕನಗರದಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದೆ ಎಂದರು.

ಸೆ.21 ರಂದು ಸಂಜೆ 6.30ಕ್ಕೆ ರಂಗಸಮಾಜದ ಸದಸ್ಯರು ಮತ್ತು ರಂಗಕರ್ಮಿಗಳಾದ ಮಹಾಂತೇಶ್ ಗಜೇಂದ್ರಗಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಂಗಸಮಾಜದ ಸದಸ್ಯ ರಾಜಪ್ಪ ದಳವಾಯಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ.ಸಾಗರ ವಹಿಸಲಿದ್ದಾರೆ. ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ.ಸಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭದ ನಂತರ ಸುಸ್ಥಿರ ಪ್ರತಿಷ್ಠಾನ, ಬೆಂಗಳೂರು ಇವರ ಪ್ರಸ್ತುತಿಯ ಜೋಸೆಫ್ ಜಾನ್ ನಿರ್ದೇಶನದ ‘ಸರಸ ವಿರಸ ಸಮರಸ’ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.22ರಂದು ಸಂಜೆ 6.30ಕ್ಕೆ ಆಟಮಾಟ ಸಾಂಸ್ಕೃತಿಕ ಪಥ ಧಾರವಾಡ ಇವರ ಪ್ರಸ್ತುತಿಯ ಮಹಾದೇವ ಹಡಪದ ಇವರ ರಂಗರೂಪ ಮತ್ತು ಪರಿಕಲ್ಪನೆಯ ವಿಶ್ವರಾಜ ರಾಜಗುರು ಅಭಿನಯದ ‘ನಾ ರಾಜಗುರು’ ನಾಟಕ ಪ್ರದರ್ಶನವು ನಡೆಯಲಿದೆ ಎಂದರು.

ಸೆ.23 ರಂದು ಸಂಜೆ 6.30ಕ್ಕೆ ಒಡೋಲಗ ರಂಗಪರ್ಯಟನ, ಹಿತ್ಲಕೈ ಪ್ರಸ್ತುತಿ ಮತ್ತು ಅವರದೇ ನಿರ್ದೇಶನದ ವಿವೇಕ ಶಾನಬೋಗ ರಚನೆಯ ‘ಬಹುಮುಖಿ’ ನಾಟಕವು ಪ್ರದರ್ಶನಗೊಳ್ಳಲಿದೆ. ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಪ್ರತಿ ನಾಟಕಕ್ಕೆ 30 ರು. ಪ್ರವೇಶ ಶುಲ್ಕವಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ರಂಗಾಯಣ ಜನ ರಂಗಾಯಣವಾಗಬೇಕು. ತಾವು ಅಧಿಕಾರ ವಹಿಸಿಕೊಂಡ ಬಳಿಕ ಹೊಸ ಪ್ರಯೋಗಗಳನ್ನು ಮಾಡುವ ಚಿಂತನೆ ನಡೆದಿದೆ. ವೃತ್ತಿ ಹಾಗೂ ಹವ್ಯಾಸಿ ರಂಗ ತಂಡಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಜನರು ಹೆಚ್ಚು ಹೆಚ್ಚು ನಾಟಕಗಳನ್ನು ನೋಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.

ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ರಂಗಾಸಕ್ತರಿಂದ ದೇಣಿಗೆ ಬೆಂಬಲವನ್ನೂ ಅಪೇಕ್ಷಿಸುತ್ತೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾ, ರಂಗಕರ್ಮಿ ಕಾಂತೇಶ ಕದರಮಂಡಲಗಿ ಉಪಸ್ಥಿತರಿದ್ದರು.

---------

ಪೊಟೋ: 19ಎಸ್‌ಎಂಜಿಕೆಪಿ04:

ಶಿವಮೊಗ್ಗದ ರಂಗಾಯಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾಟಕೋತ್ಸವದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ