ವಿಚ್ಛೇದಿತ ಪತ್ನಿ ಸೇರಿದಂತೆ ಆಕೆಯ ಸಂಬಂಧಿಕರ ಮೇಲೆ ಮಾಜಿ ಪತಿ ಆ್ಯಸಿಡ್ ಎರಚಿ ಪರಾರಿ ಆಗಿರುವ ಘಟನೆ ಗುರುವಾರ ಚಿತ್ರದುರ್ಗ ಹೊರವಲಯದ ಮಾಳಪ್ಪನಹಟ್ಟಿ ವಿದ್ಯಾನಗರದಲ್ಲಿ ನಡೆದಿದೆ. ಘಟನೆಯಲ್ಲಿ ಮಾಜಿ ಪತ್ನಿ, ನಾಲ್ಕು ವರ್ಷದ ಮಗು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ
ಚಿತ್ರದುರ್ಗ : ವಿಚ್ಛೇದಿತ ಪತ್ನಿ ಸೇರಿದಂತೆ ಆಕೆಯ ಸಂಬಂಧಿಕರ ಮೇಲೆ ಮಾಜಿ ಪತಿ ಆ್ಯಸಿಡ್ ಎರಚಿ ಪರಾರಿ ಆಗಿರುವ ಘಟನೆ ಗುರುವಾರ ಚಿತ್ರದುರ್ಗ ಹೊರವಲಯದ ಮಾಳಪ್ಪನಹಟ್ಟಿ ವಿದ್ಯಾನಗರದಲ್ಲಿ ನಡೆದಿದೆ. ಘಟನೆಯಲ್ಲಿ ಮಾಜಿ ಪತ್ನಿ, ನಾಲ್ಕು ವರ್ಷದ ಮಗು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಮಾಜಿ ಪತ್ನಿ ತಾಸೀನಾ, ಮಗು ನೇಹಾ (4) ಜೊತೆಗೆ ತಾಸೀನಾ ಅವರ ಸಂಬಂಧಿಕರಾದ ಬಾನು, ನಗ್ಮಾ, ಇಕ್ರಾ, ಫಾತಿಮಾ, ಗಾಯಗೊಂಡಿದ್ದಾರೆ. ಎಲ್ಲರನ್ನೂ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಸಹೋದರಿ ಮನೆಗೆ ಮಾಜಿ ಪತ್ನಿ ತಾಸೀನಾ ಹಾಗೂ ಕುಟುಂಬಸ್ಥರು ಬಂದಾಗ ಈ ಘಟನೆ
ರಂಜಾನ್ ಹಬ್ಬಕ್ಕೆ ಸಹೋದರಿ ಮನೆಗೆ ಮಾಜಿ ಪತ್ನಿ ತಾಸೀನಾ ಹಾಗೂ ಕುಟುಂಬಸ್ಥರು ಬಂದಾಗ ಈ ಘಟನೆ ನಡೆದಿದೆ. ಆ್ಯಸಿಡ್ ಎಸೆದ ಮಾಜಿ ಪತಿ ಮಹಮದ್ ಸುಹೇಲ್ ಬಾಷಾ ಪರಾರಿ ಆಗಿದ್ದಾನೆ. ಕಳೆದ ಹಲವು ವರ್ಷಗಳಿಂದ ಸುಹೇಲ್-ತಾಸೀನ್ ಜಗಳವಾಡುತ್ತಿದ್ದರು. ನಂತರದಲ್ಲಿ ದಂಪತಿ ವಿಚ್ಛೇದನ ಪಡೆದಿದ್ದರು. ಗಲಾಟೆ ಹಿನ್ನೆಲೆಯಲ್ಲಿ ಸುಹೇಲ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಕಾರಣಕ್ಕೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆ್ಯಸಿಡ್ ದಾಳಿ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಲ್ಕು ಜನರ ಮೇಲೆ ಆ್ಯಸಿಡ್
ಈ ವೇಳೆ ಮಾದ್ಯಮಗಳಿಗೆ ಮಾಹಿತಿ ನೀಡಿ ಅವರು, ಮಾಜಿ ಪತ್ನಿ ತಹಸೀನ್ ಬಾನು ಅವರ ಮೇಲೆ ಪತಿ ಮಹಮದ್ ಸುಹೇಲ್ ಆ್ಯಸಿಡ್ ದಾಳಿ ಮಾಡಿದ್ದು, ಆ ವೇಳೆ ನಾಲ್ಕು ಜನರ ಮೇಲೆ ಆ್ಯಸಿಡ್ ಬಿದ್ದಿದೆ. ಯಾರಿಗೂ ಕೂಡ ಅಪಾಯ ಇಲ್ಲ. ಮಚ್ಚಿನಿಂದ ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಗಾಯಾಳುಗಳನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆರೋಪಿ ಸುಹೇಲ್ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

