ಹಲಗೂರು:

ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ ನಡೆದು ಜಗಳ ವಿಕೋಪಕ್ಕೆ ತಿರುಗಿ ಸ್ನೇಹಿತರಿಬ್ಬರು ಮತ್ತೊಬ್ಬ ಸ್ನೇಹಿತನ ಕತ್ತಿನ ಭಾಗಕ್ಕೆ ಬೀಯರ್ ಬಾಟಲ್‌ನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಹಲಗೂರಿನ ಬೈಪಾಸ್ ರಸ್ತೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಮೂಲತಃ ಎಚ್.ಬಸಾಪುರ ಗ್ರಾಮದ ನಾರಾಯಣಿ ಪುತ್ರ ಮಂಜು ಅಲಿಯಾಸ್ ಕಾಶಿ (33) ಮೃತಪಟ್ಟ ಯುವಕ.

ಈತನ ಸ್ನೇಹಿತರಾದ ಹಲಗೂರಿನ ಪ್ರದೀಪನ ಪುತ್ರ ಸಿದ್ದರಾಜು ಮತ್ತು ರಾಜಣ್ಣನ ಪುತ್ರ ಸಿದ್ದರಾಜು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಬಾರ್ ಒಂದರಲ್ಲಿ ಮದ್ಯ ಸೇವಿಸಿದ್ದು, ಬಾರ್ ಬಾಗಿಲು ಹಾಕಿದ ನಂತರ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಪಕ್ಕದ ಸೇತುವೆಯ ಬಳಿ ಖಾಲಿ ಜಾಗಕ್ಕೆ ತೆರಳಿದ್ದಾರೆ. ರಾತ್ರಿ 11 ಗಂಟೆ ಸಮಯದಲ್ಲಿ ಮೂವರು ಮಾತಾನಾಡುತ್ತಾ ಕುಳಿತಿದ್ದಾಗ ಸ್ನೇಹಿತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.


ನಂತರ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಂಜು ಅಲಿಯಾಸ್ ಕಾಶಿ ಕತ್ತಿನ ಭಾಗಕ್ಕೆ ಸ್ನೇಹಿತರಾದ ಸಿದ್ದರಾಜು ಮತ್ತು ಸಿದ್ದರಾಜು ಇಬ್ಬರು ಬಿಯರ್ ಬಾಟಲ್ ನಿಂದ ಬಲವಾಗಿ ಚುಚ್ಚಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಸಂಬಂಧ ಮೃತನ ಅಕ್ಕ ಗೀತಾ ದೂರು ನೀಡಿದ ಅನ್ವಯ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹಲಗೂರು ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಭೇಟಿ ನೀಡಿ, ಮೇಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ‌.ಶೋಭರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀಧರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.