ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಕೆಟ್ಟ ಗುಣಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಮನುಷ್ಯನ ಮನಸ್ಸನ್ನು ಪರಿವರ್ತಿಸುವ ಶಕ್ತಿ ನಾಟಕ ಕಲೆಯಲ್ಲಿ ಅಡಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಅಭಿಪ್ರಾಯಪಟ್ಟರು.ತಾಲೂಕಿನ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರಾಮಹೋತ್ಸವದಂಗವಾಗಿ ಬುಧವಾರ ರಾತ್ರಿ ಯಮನೂರೇಶ್ವರ ನಾಟ್ಯ ಸಂಘ ಹಮ್ಮಿಕೊಂಡಿದ್ದ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾಜುನ ಸಾಮಾಜಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಜಾತ್ರೆಯಂತಹ ಸಂದರ್ಭದಲ್ಲಿ ನಾಟಕ ಪ್ರದರ್ಶನಗಳು ಇನ್ನೂ ಜೀವಂತವಾಗಿವೆ. ನಾಟಕಗಳಿಂದ ಜನರು ಮನರಂಜನೆ ಪಡೆಯುವ ಜೊತೆಗೆ ನೈತಿಕ ಮೌಲ್ಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಸಾಮಾಜಿಕ ವಿಡಂಬಣೆಯನ್ನು ನಾಟಕದ ಮೂಲಕ ಬಿಂಬಿಸಿ ಒಳ್ಳೆಯ ಆಚಾರ-ವಿಚಾರಗಳನ್ನು ಬದುಕು ಕಲಿಸುವ ಸಾಮಾಜಿಕ ನಾಟಕಗಳು ಇನ್ನೂ ಜೀವಂತವಾಗಿರಿಸಿಕೊಂಡಿವೆ. ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಪಡೋಣ ಎಂದು ಹೇಳಿದರು.ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ, ಮಾನವೀಯ ಮೌಲ್ಯಗಳ ಬಗ್ಗೆ ನಾಟಕಗಳಿಂದ ತಿಳಿದುಕೊಳ್ಳಬಹುದು. ಕವಿಯ ಕಾಲ್ಪನಿಕ ಹಿಂದಿರುವ ರಹಸ್ಯ ಸಾಮಾಜಿಕ ಜೀವನದ ಸಂದೇಶ ನೀಡುವ ನೆಲೆಯಾಗಿದೆ. ನಾಟಕದ ಕೆಲವು ಸನ್ನಿವೇಶಗಳಿಂದ ನಮ್ಮ ಬದುಕನ್ನು ಬದಲಾಯಿಸುವ ಶಕ್ತಿ ಅದರಲ್ಲಿ ಅಡಗಿದೆ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಾಟಕ ಗ್ರಾಮೀಣ ಭಾಗದ ಕಲೆ. ನಿಜ ಜೀವನದಲ್ಲಿ ಕೆಲವು ಮೌಲ್ಯಗಳನ್ನು ಬೆಳೆಸುತ್ತೇವೆ. ಒಳ್ಳೆಯ ಮೌಲ್ಯಗಳು ಬದುಕಿನ ಭವಿಷ್ಯತ್ತಿಗೆ ಬುನಾದಿಯಾಗಬೇಕು. ನಾಗೂರ ಗ್ರಾಮದ ರಂಗಭೂಮಿ ಕಲಾವಿದ ದಿ.ಬಸಲಿಂಗಯ್ಯ ಹಿರೇಮಠ ಅವರು ಇತ್ತೀಚೆಗೆ ಯುಟ್ಯೂಬ್ ಮೂಲಕ ಗೋಡಂಬಿ ಕಾಕಾ ಎಂದೇ ರಾಜ್ಯದ ಜನರಿಗೆ ಚಿರಪರಿಚಿತರಾಗಿದ್ದರು. ಇವರ ಅಕಾಲಿಕ ನಿಧನವು ನಾಗೂರ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ. ಇಂತಹ ಕಲಾವಿದ ಈ ಗ್ರಾಮದಲ್ಲಿ ಜನಿಸಿದ್ದು ಹೆಮ್ಮೆ ಪಡುವ ಸಂಗತಿ ಎಂದರು.ಇದೇ ವೇಳೆ ಸಿ.ಎಂ.ಮರೋಳ, ಸಿ.ಐ.ಮುಳವಾಡ ಮಾತನಾಡಿದರು. ಅಧ್ಯಕ್ಷತೆಯನ್ನು ಮಣ್ಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು ಲಮಾಣಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಹೈದರಸಾಬ ಚಪ್ಪರಬಂದ, ಮುಖಂಡರಾದ ದಾದಾಪೀರ ಶೇಖ, ಮಹೇಶ ಮುಳವಾಡ, ಶರಣು ಮರೋಳ, ಅಮರಯ್ಯ ಹಿರೇಮಠ, ಗುರುನಾಥ ದಳವಾಯಿ, ಧರ್ಮಣ್ಣ ಪೂಜಾರಿ, ಮಲ್ಲಪ್ಪ ಆಲಕೊಪ್ಪರ, ಇಬ್ರಾಹಿಂ ಚಪ್ಪರಬಂದ, ರಮೇಶ ನಿಡಗುಂದಿ, ಖಾಜಂಬರ ರಗಟಿ, ಶ್ರೀಶೈಲ ನಿಡಗುಂದಿ, ಯಮನೂರಿ ಕ್ವಾಟಿ ಮುಂತಾದವರು ಹಾಜರಿದ್ದರು. ವೈ.ಎಚ್.ಅಂಗಡಗೇರಿ, ಐ.ಸಿ.ಗೌರ ಕಾರ್ಯಕ್ರಮ ನಿರೂಪಿಸಿದರು.