ದೇವನಹಳ್ಳಿ: ತಿಗಳ ಸಮುದಾಯ ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ದ್ರೌಪದಮ್ಮ ಜಯಂತ್ಯುತ್ಸವ ಸರ್ಕಾರದಿಂದಲೇ ಆಚರಿಸುವಂತಾಗಬೇಕು ಎಂದು ವಹ್ನಿಕುಲ ಕ್ಷತ್ರಿಯ ಸಂಘದ ರಾಜ್ಯ ಉಪಾಧ್ಯಕ್ಷ ಶಾಮಣ್ಣ ಒತ್ತಾಯಿಸಿದ್ದಾರೆ.
ಪಟ್ಟಣದ ಮರಳು ಬಾಗಿಲಿನಲ್ಲಿರುವ ಮೌಕ್ತಿಕಾಂಭ ದೇವಾಲಯದ ಅವರಣದಲ್ಲಿ ತಾಲೂಕು ತಿಗಳ ಸಂಘ ಮತ್ತು ಮೌಕ್ತಿಕಾಂಭ ವಹ್ನಿಕುಲ ಕ್ಷತ್ರಿಯ ತಿಗಳ ಸಂಘ ಹಮ್ಮಿಕೊಂಡಿದ್ದ ದ್ರೌಪದಮ್ಮ ಜಯಂತ್ಯುತ್ಸವ ದೇವರ ಉತ್ಸವಕ್ಕೆ ಚಾಲನೆ ನೀಡಿ, ತಿಗಳ ಸಮಾಜದ ಆರಾಧ್ಯ ದೈವ ಕುಲದೇವತೆ ದ್ರೌಪದಮ್ಮತಾಯಿ ಜಯಂತ್ಯುತ್ಸವ ಪ್ರತಿವರ್ಷದಂತೆ ಈ ವರ್ಷವು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ದ್ರೌಪದಮ್ಮ ದೇವಿಯು ಎಲ್ಲರಿಗು ಒಳಿತು ಮಾಡಲಿ, ಕಾಲ ಕಾಲಕ್ಕೆ ಮಳೆ ಬೆಳೆಯಾಗಲಿ ಎಂದರು.ಮೌಕ್ತಿಕಾಂಭ ವಹ್ನಿಕುಲ ಕ್ಷತ್ರಿಯ ತಿಗಳ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ತಿಗಳ ಸಮುದಾಯ ೪೦ ಲಕ್ಷದಿಂದ ೪೫ ಲಕ್ಷ ಜನಸಂಖ್ಯೆ ಹೊಂದಿದೆ. ಹಿಂದುಳಿದ ವರ್ಗದ ಪಟ್ಟಿಯಲ್ಲಿ ತಿಗಳ ಸಮುದಾಯವಿದ್ದು ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದೆ. ನಮ್ಮ ಬಹುದಿನಗಳ ಕನಸಾಗಿರುವ ದ್ರೌಪದಮ್ಮ ಜಯಂತ್ಯುತ್ಸವವನ್ನು ಸರ್ಕಾರದ ಮಟ್ಟದಲ್ಲಿ ಆಚರಿಸುವಂತೆ ಆಗಬೇಕು. ತಿಗಳ ಸಮುದಾಯ ಆರ್ಥಿಕ ಹಾಗೂ ಶೈಕ್ಷಣಿಕ ರಾಜಕೀಯ ರಂಗದಲ್ಲಿ ಮುಂದೆ ಬರಬೇಕಾದರೆ ಸರ್ಕಾರ ನಮ್ಮ ಸಮುದಾಯಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದರು.
ಈ ವೇಳೆ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ವಹ್ನಿಕುಲ ಕ್ಷತ್ರಿಯ ತಿಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ವಿಜಯ್ಕುಮಾರ್, ತಾಲೂಕು ತಿಗಳ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಗೀತಾರಾಣಿ, ಮುಖಂಡರಾದ ಶಾಮಣ್ಣ, ಅಶ್ವತಪ್ಪ, ಗೌಡರಅಶ್ವಥಪ್ಪ, ಮಂಜು, ಗೋಪಾಲಪ್ಪ ಚನ್ನರಾಯಪ್ಪ, ಮುನೀಂದ್ರ, ಕಾಂತರಾಜು, ಜಿ.ಮುನಿರಾಜು, ಮಂಜುನಾಥ್. ಕೆ.ಉಮೇಶ್, ಗಜೇಂದ್ರ, ರಾಮಕೃಷ್ಣಪ್ಪ, ಮೋಟಪ್ಪ, ಪೂಜಾರಿ ಉಮೇಶ್, ಗಣಾಚಾರಿ ನಾರಾಯಣಸ್ವಾಮಿ ಇತರರಿದ್ದರು.೧೪ ದೇವನಹಳ್ಳಿ ೦೧ಚಿತಸುದ್ದಿ:
ದ್ರೌಪದಮ್ಮ ದೇವಿಯ ಪಲ್ಲಕ್ಕಿ ಹಾಗೂ ಕಳಸಗಳ ಉತ್ಸವಕ್ಕೆ ತಿಗಳ ಸಮುದಾಯ ಮುಖಂಡರು ಚಾಲನೆ ನೀಡಿದರು.