ಶಿಕ್ಷಕ ವೃತ್ತಿ ಪವಿತ್ರವಾದದ್ದು, ನೀವೆಲ್ಲರೂ ಪುಣ್ಯವಂತರು. ಈ ಹಿಂದಿನ ದಶಕಗಳಲ್ಲಿ ಶಿಕ್ಷಕರಲ್ಲಿ ಇರುತ್ತಿದ್ದ ವ್ಯಕ್ತಿತ್ವ, ಪ್ರಭಾವವು ಇತ್ತೀಚಿನ ಶಿಕ್ಷಕರಲ್ಲಿ ಕಂಡು ಬರುತ್ತಿಲ್ಲ.
ಹಳಿಯಾಳ: ವಿದ್ಯಾರ್ಥಿಗಳಲ್ಲಿ ಉಜ್ವಲ ಭವಿಷ್ಯದ ಕನಸು ಬಿತ್ತುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹಳಿಯಾಳ ಮತ್ತು ದಾಂಡೇಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಮೇಲೆ ವಿಶ್ವಾಸವಿಟ್ಟುಕೊಂಡು ಬಡವರು, ಕಾರ್ಮಿಕರು, ಶೋಷಿತರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡುತ್ತಾರೆ. ಹೀಗಿರುವಾಗ ಅವರ ಮಕ್ಕಳು ಮುಂದೆ ಬೆಳೆದು ಬಡವರಾಗಿಯೇ, ಕಾರ್ಮಿಕರಾಗಿಯೇ ಮುಂದುವರಿದರೆ ನೀವು ಕಲಿಸಿಯೂ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಶಿಕ್ಷಕ ವೃತ್ತಿ ಪವಿತ್ರವಾದದ್ದು, ನೀವೆಲ್ಲರೂ ಪುಣ್ಯವಂತರು. ಈ ಹಿಂದಿನ ದಶಕಗಳಲ್ಲಿ ಶಿಕ್ಷಕರಲ್ಲಿ ಇರುತ್ತಿದ್ದ ವ್ಯಕ್ತಿತ್ವ, ಪ್ರಭಾವವು ಇತ್ತೀಚಿನ ಶಿಕ್ಷಕರಲ್ಲಿ ಕಂಡು ಬರುತ್ತಿಲ್ಲ. ಶಿಕ್ಷಕರಿಗೆ ಸರ್ಕಾರ ಯಾವುದನ್ನೂ ಕಡಿಮೆ ಮಾಡಲಿಲ್ಲ. ಗೌರವಯುತ ವೇತನವನ್ನು ಸರ್ಕಾರವು ನೀಡುತ್ತಿರುವಾಗ ಉತ್ತಮ ಶಿಕ್ಷಣ ನೀಡುವುದು ನಿಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆಯಾದವರನ್ನು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಹಳಿಯಾಳ ಬಿಇಒ ಪ್ರಮೋದ ಮಹಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಇಒ ವಿಲಾಸರಾಜ್ ಪ್ರಸನ್ನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿರಶಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಬಾವಕೇರಿ, ತಾಲೂಕು ಅಧ್ಯಕ್ಷ ಪ್ರಶಾಂತ ನಾಯ್ಕ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಉದಯ ನಾಯ್ಕ, ಮಂಜು ಗುನಗಾ, ವೆಂಕಟೇಶ ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಕೀರ ಜಂಗೂಬಾಯಿ, ಅಕ್ಷರ ದಾಸೋಹ ಅಧಿಕಾರಿ ನೂಲಿನ, ಹಾಗೂ ಬಿಆರ್ಸಿ ಕೇಂದ್ರದ ಜ್ಯೋತಿಪ್ರಭಾ, ಎಂ.ಎಸ್. ಚೌಗುಲಾ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಮಾಜಿ ಉಪಾಧ್ಯಕ್ಷ ಫಯಾಜ ಶೇಖ್, ರವಿ ತೋರಣಗಟ್ಟಿ ಇತರರು ಇದ್ದರು. ಜನಾರ್ದನ ಪೂಜಾರಿ ಹಾಗೂ ಸರೋಜಾ ತೋರಸ್ಕರ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.