ಗೋಕರ್ಣ: ತದಡಿ ಬಂದರಿನಲ್ಲಿ ಕಳೆದ ಫೆಬ್ರವರಿಯಲ್ಲಿ ₹೨.೬೫ ಕೋಟಿ ವೆಚ್ಚದಲ್ಲಿ ನಡೆಸಲಾದ ಹೂಳೆತ್ತುವ ಕಾಮಗಾರಿ ಅಸಮರ್ಪಕವಾದ ಕಾರಣ ಕಾಮಗಾರಿ ಕುರಿತಂತೆ ಬೋಟ್ ನಿರ್ವಾಹಕರು, ಮೀನುಗಾರರು ಮತ್ತು ವಿವಿಧ ಮೀನುಗಾರಿಕೆ ಸಂಘಟನೆಗಳಿಂದ ವ್ಯಾಪಕ ತಕರಾರು ವ್ಯಕ್ತವಾಗಿದ್ದರಿಂದ ತದಡಿ ಬಂದರಿನಲ್ಲಿ ಅಧಿಕಾರಿಗಳ ಜತೆ ವಿಶೇಷ ಸಭೆ ನಡೆಯಿತು.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಬೋಟುಗಳು ಅಳಿವೆ ಪ್ರದೇಶದಲ್ಲಿ ಸಿಲುಕಿಕೊಂಡು ಹಾನಿಯಾಗುವುದನ್ನು ತಪ್ಪಿಸಲು ಕಳೆದ ಫೆಬ್ರವರಿ ತಿಂಗಳಲ್ಲಿ ಹೂಳೆತ್ತುವ ಕಾರ್ಯವನ್ನು ಬಂದರು ಇಲಾಖೆಯ ನಿರ್ವಹಣೆಯಲ್ಲಿ ಕೇರಳದ ಮೆ. ಎಸಿಇ ಕಂಪನಿ ವಹಿಸಿಕೊಂಡಿತ್ತು. ಸ್ಥಳೀಯ ಮೀನುಗಾರಿಕಾ ಧುರೀಣರನ್ನು ಹಾಗೂ ಸಂಬಂಧಿಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತನಗಿಷ್ಟ ಬಂದಂತೆ ಅವೈಜ್ಞಾನಿಕ ಕಾಮಗಾರಿ ಮಾಡಿ ಮುಗಿಸಿ ನಾಪತ್ತೆಯಾಗಿದ್ದಾರೆ. ಅಲ್ಲಲ್ಲಿ ಬೇಡದ ಮಣ್ಣಿನ ಗುಡ್ಡೆ ರಾಶಿ ಹಾಗೆ ಬಿಟ್ಟಿದ್ದು, ಬೋಟ್ ಸಂಚಾರಕ್ಕೆ ತೊಂದರೆಯಾಗಿದೆ. ಇಲಾಖೆ ಮುತುವರ್ಜಿ ವಹಿಸಿ ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.ಪರ್ಷಿಯನ್ ಬೋಟ್ ಯೂನಿಯನ್ ಅಧ್ಯಕ್ಷ ಸುರೇಶ ಹರಿಕಂತ್ರ, ಕಾರ್ಯದರ್ಶಿ ಪ್ರಕಾಶ ಮೂಡಂಗಿ, ಬೋಟ್ ಮಾಲೀಕ ಜಗದೀಶ ಮೂಡಂಗಿ ಇನ್ನೂ ಮುಂತಾದವರು ಕಾಮಗಾರಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆ ಪಡೆದ ಕಂಪನಿಯು ಸ್ಥಳೀಯರ ಆಕ್ರೋಶಕ್ಕೆ ಮಣಿದು ಬಂದರು ಇಲಾಖೆಯ ನಿರ್ದೇಶನದಂತೆ ಕಾಮಗಾರಿ ಸರಿಪಡಿಸುವ ಭರವಸೆ ನೀಡಿತು.
ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ತಳೇಕರ್ ಅಧ್ಯಕ್ಷತೆ ವಹಿಸಿದ್ದರು. ಇಲಾಖೆಯ ಸಹ ನಿರ್ದೇಶಕ ಸಚಿನ್ ಪುತ್ರನ್, ಎಂಜಿನಿಯರ್ ಅನಂತ ಪಟಗಾರ್, ಬಂದರು ಇಲಾಖೆಯ ಹಿರಿಯ ಅಧಿಕಾರಿ ಜಿ.ಎಂ. ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.