ಕನ್ನಡಪ್ರಭ ವಾರ್ತೆ ಯಳಂದೂರು
ಗ್ರಾಮದ ಈ ವಾರ್ಡುಗಳಲ್ಲಿ ಕಳೆದ ಒಂದು ತಿಂಗಳಿಂದಲೂ ನೀರಿನ ಸಮಸ್ಯೆ ಇದೆ. ಗ್ರಾಮ ಪಂಚಾಯಿತಿಗೆ ಈ ಸಂಬಂಧ ಹಲವು ಬಾರಿ ದೂರನ್ನು ನೀಡಲಾಗಿದೆ. ಇಲ್ಲಿ ನೀರಿನ ತೊಂಬೆಯನ್ನು ನಿರ್ಮಿಸಲಾಗಿದೆ. ಆದರೆ ಇದು ತುಂಬುವುದೇ ಇಲ್ಲ. ಈ ಪ್ರದೇಶ ಎತ್ತರವಾಗಿದ್ದು ನೀರು ಬಿಟ್ಟರೆ ಇಲ್ಲಿಗೆ ಬರುವುದೇ ಇಲ್ಲ. ಇಲ್ಲಿರುವ ಕೈ ಪಂಪು ಕೆಟ್ಟು ಹಲವು ವರ್ಷಗಳೇ ಕಳೆದಿವೆ. ಇದನ್ನು ದುರಸ್ಥಿ ಪಡಿಸಿ, ಇಲ್ಲಿಗೆ ಮೋಟಾರು ಅಳವಡಿಸಿ ನೀರನ್ನು ಬಿಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಕೂಡ ಪಂಚಾಯಿತಿ ಸ್ಪಂದಿಸುತ್ತಿಲ್ಲ. ಅಲ್ಲದೆ ಇಲ್ಲಿಗೆ ಜಲಜೀವನ್ ಮಿಷನ್ ಯೋಜನೆಯಡಿ ಹಾಕಲಾಗಿರುವ ನೀರಿನ ನಲ್ಲಿಗಳಲ್ಲಿ ನೀರೇ ಬರುತ್ತಿಲ್ಲ. ಪಂಚಾಯಿತಿಗೆ ದೂರು ನೀಡಿದರೆ ಇಲ್ಲಸಲ್ಲದ ಸಬೂಬು ನೀಡಿ ವಾಪಸ್ಸು ಕಳುಹಿಸಲಾಗುತ್ತಿದೆ. ಈಗ ಬೇಸಿಗೆಯಾಗಿದ್ದು ನೀರಿನ ಹಾಹಾಕಾರ ಹೆಚ್ಚಾಗಿದೆ. ನೀರು ಸಿಗದೆ ದೂರದಿಂದ ಬಿಸಿಲಿನಲ್ಲಿ ನೀರು ತರುವುದು ಕಷ್ಟವಾಗುತ್ತದೆ. ಮಹಿಳೆಯರು, ಒಬ್ಬಂಟಿ ಇರುವ ವಯೋವೃದ್ಧರು ಹೆಚ್ಚಿನ ಬವಣೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಹೊಸದಾಗಿ ನೀರಿನ ಪಂಪ್ ಅಳವಡಿಸಿ ಪ್ರತ್ಯೇಕವಾಗಿ ನಿರಂತರವಾಗಿ ನೀರನ್ನು ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಇಲ್ಲಿನ ವಾಸಿಗಳು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಪಿಡಿಒ ಶಿವಕುಮಾರ್ ಮಾತನಾಡಿ, ನಾನು ಈ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಈ ಬಡಾವಣೆ ಎತ್ತರ ಪ್ರದೇಶದಲ್ಲಿದ್ದು ನೀರು ಏರುತ್ತಿರಲಿಲ್ಲ. ಇದರ ಬಳಿ ಇರುವ ಬೋರ್ವೆಲ್ಗೆ ಹೊಸ ಮೋಟಾರ್ ಅಳವಡಿಸಿ ಶೀಘ್ರದಲ್ಲೇ ಈ ಸಮಸ್ಯೆ ನೀಗಿಸಲು ಕ್ರಮ ವಹಿಸಲಾಗುವುದು ಎಂದರು.ಗ್ರಾಮದ ನಿರ್ಮಲ, ಶಕುಂತಲಾ, ಮಹದೇವಮ್ಮ. ಕೆಂಪಮ್ಮ, ಸಿದ್ದರಾಜು, ಮಹದೇವಮ್ಮ, ಚಂದ್ರಶೇಖರ್ ಸೇರಿದಂತೆ ಅನೇಕರ ಇದ್ದರು.