ಮಳೆ ಬಂದರೂ ಕುಡಿಯುವ ನೀರಿಗೆ ತತ್ವಾರ!

KannadaprabhaNewsNetwork |  
Published : Jul 29, 2024, 12:48 AM IST
 ಹಾನಗಲ್‌ನಲ್ಲಿ ವಿದ್ಯುತ್ ಕಂಬ ಸರಿಪಡಿಸುತ್ತಿರುವ ವಿದ್ಯುತ್ ಇಲಾಖೆ ಸಿಬ್ಬಂದಿಗಳು | Kannada Prabha

ಸಾರಾಂಶ

ಪಟ್ಟಣಕ್ಕೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ಜನತೆ ನೀರಿಗೆ ಮುಗಿಬಿದ್ದಿದ್ದಾರೆ. ಹತ್ತು ದಿನಗಳಿಂದ ಸಮಸ್ಯೆ ಇದೆ.

ಮುರಳೀಧರ್ ಶಾಂತಳ್ಳಿ

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದರೂ ಸೋಮವಾರಪೇಟೆ ಪಟ್ಟಣಕ್ಕೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿಗೆ ತತ್ವಾರ ಆಗಿದ್ದು, ಪಟ್ಟಣದ ಜನತೆ ೫ ರು. ನೀರಿಗೆ ಮುಗಿಬಿದ್ದಿದ್ದಾರೆ.

ತಾಲೂಕಿನಾದ್ಯಂತ ಈ ಸಾಲಿನಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ಒಂದೆಡೆ ವಿದ್ಯುತ್ ಕೈಕೊಡುತ್ತಿರುವುದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ತೊಂದರೆಯಾಗುತ್ತಿದೆ. ಪಟ್ಟಣಕ್ಕೆ ಸರಬರಾಜಾಗುತ್ತಿರುವ ದುದ್ದುಗಲ್ ಪಂಪ್‌ಹೌಸ್ ಸುತ್ತಮುತ್ತ ಗಾಳಿಗೆ ಮರಗಳು ಬೀಳುತ್ತಿದ್ದು, ಪಂಪ್‌ಹೌಸ್‌ನಿಂದ ಕುಡಿಯುವ ನೀರು ಸರಬರಾಜು ಮಾಡಲು ಲೈನ್ ಟ್ರಿಪ್ ಆಗುತ್ತಿದೆ. ಜತೆಗೆ ಟ್ರಾನ್ಸ್‌ಫಾರ್ಮರ್‌ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಸದ್ಯದಲ್ಲೇ ಹೊಸದನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗುತ್ತೇವೆ, ನಂತರ ಸಮಸ್ಯೆ ನಿವಾರಣೆಯಾಗಬಹುದು ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಮತ್ತೊಂದೆಡೆ ಹಾರಂಗಿಯಿಂದ ಸರಬರಾಜು ಮಾಡಲು ಯಡವನಾಡು ಸಮೀಪ ವಿದ್ಯುತ್ ಮಾರ್ಗದಲ್ಲಿ ತೊಂದರೆಯಾಗುತ್ತಿದ್ದು, ಕಳೆದ ಹತ್ತು ದಿನಗಳಿಂದ ನೀರು ಸರಬರಾಜು ಮಾಡಲು ತೊಡಕಾಗುತ್ತಿದೆ. ಕಳೆದ ಎರಡು ದಿನಗಳಿಂದ ಮಳೆಯೂ ಕೂಡ ಕಡಿಮೆಯಾಗಿರುವುದು ನಿತ್ಯ ಬಳಕೆಗೂ ತೊಂದರೆಯಾಗಿದೆ. ಹೀಗಾಗಿ ಪಟ್ಟಣದ ಜನತೆ ಅನಿವಾರ್ಯವಾಗಿ ಕುಡಿಯುವ ನೀರಿನ ಟ್ಯಾಂಕರ್‌ಗಳಿಂದ ೪೦೦ ರು. ಹಣ ಪಾವತಿಸಿ ನೀರನ್ನು ಪಡೆಯುತ್ತಿದ್ದಾರೆ. ಅಲ್ಲದೇ ಕುಡಿಯವ ನೀರಿಗೆ ೫ ರು. ಪಾವತಿಸಿ ಕುಡಿಯುವ ನೀರು ಕೇಂದ್ರಗಳಿಂದ ಕ್ಯೂನಲ್ಲಿ ನಿಂತು ಕ್ಯಾನ್‌ಗಳಲ್ಲಿ ನೀರು ಕೊಂಡೊಯ್ಯುವ ದೃಶ್ಯ ಕಂಡು ಬರುತ್ತಿದೆ.

ಮೌನವಹಿಸಿದ ಪಪಂ ಸದಸ್ಯರು!

ನಿತ್ಯ ಬಳಕೆಗೆ ಮತ್ತು ಕುಡಿಯುವ ನೀರಿಗೆ ಇಷ್ಟೆಲ್ಲ ತೊಂದರೆಯಾಗಿದ್ದರೂ, ಕಳೆದ 10 ದಿನಗಳಿಂದ ಪಟ್ಟಣ ಪಂಚಾಯಿತಿಯ ಯಾವೊಬ್ಬ ಸದಸ್ಯರೂ ಕೂಡ ಚಕಾರವೆತ್ತದೆ ಮೌನಕ್ಕೆ ಶರಣಾಗಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಲೊಂದಿಗೆ ಕೈಜೋಡಿಸಿ ಸಮಸ್ಯೆ ಪರಿಹರಿಸಲು ಯಾವುದೇ ಸಹಕಾರ ನೀಡುತ್ತಿಲ್ಲ. ಅಧಿಕಾರಿಗಳು ಕೂಡ ವಿದ್ಯುತ್ ಮಾರ್ಗ, ವಿದ್ಯುತ್ ಇಲ್ಲದ ಕಾರಣದ ನೆಪವೊಡ್ಡಿ ತಮ್ಮ ಕೈಲಾದ ಕೆಲಸ ಮಾಡಿಕೊಂಡು ತೆಪ್ಪಗೆ ಕುಳಿತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಒಂದೆಡೆ ವಿದ್ಯುತ್ ಸರಬರಾಜು ಇಲ್ಲದೆ ಕತ್ತಲೆಯಲ್ಲಿ ದಿನದೂಡುತ್ತಿರುವ ಜನತೆಗೆ, ಕುಡಿಯುವ ನೀರು ಇಲ್ಲದೇ ಪರದಾಡುವ ಸ್ಥಿತಿ ಬಂದೊದಗಿರುವುದು ಪ.ಪಂ. ಆಡಳಿತದ ವೈಫಲ್ಯವಾಗಿದೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿಗೆ ತತ್ವಾರವಿದ್ದರೂ ಯಾವೊಬ್ಬ ಪಪಂ ಸದಸ್ಯರೂ ಕೂಡ ಸ್ಪಂದಿಸುತ್ತಿಲ್ಲ. ಅಲ್ಲದೇ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಟ್ಯಾಂಕರ್‌ಗಳಲ್ಲಿ ನೀರನ್ನು ಹಣ ಪಾವತಿಸಿ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ೫ ರು. ಪಾವತಿಸಿ ಕುಡಿಯುವ ನೀರಿನ ಘಟಕದಲ್ಲಿ ಕ್ಯಾನ್ ಮುಖೇನ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿರುವುದು ವಿಷಾದನೀಯ. ಹೀಗಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸೋಮವಾರಪೇಟೆ ಪವಿತ್ರ ಲೋಕೇಶ್ ತಿಳಿಸಿದರು.

ವಿದ್ಯುತ್ ಸಮಸ್ಯೆಯಿಂದಾಗಿ ದುದ್ದುಗಲ್ ಮತ್ತು ಹಾರಂಗಿಯಿಂದ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಸೆಸ್ಕ್‌ನವರು ಗ್ರಾಮೀಣ ಪ್ರದೇಶದಲ್ಲೇ ವಿದ್ಯುತ್‌ಮಾರ್ಗವನ್ನು ಸರಿಪಡಿಸಲು ಹರಸಾಹಸ ಪಡುತ್ತಿರುವುದರಿಂದ ಇತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಅವರು ಸರಿಪಡಿಸಿದ ನಂತರ ನೀರು ಸರಬರಾಜು ಮಾಡಲಾಗುವುದು. ಅಲ್ಲಿವರೆಗೆ ನಾಗರಿಕರು ಸಹಕರಿಸಬೇಕು. ದುದ್ದುಗಲ್ ಸರಬರಾಜು ಕೇಂದ್ರದಲ್ಲಿರುವ ಟ್ರಾನ್ಸ್‌ಫಾರ್ಮರ್‌ ಟ್ರಿಪ್ ಆಗುತ್ತಿರುವುದರಿಂದ ಅಲ್ಲಿಗೆ ನೂತನ ಟ್ರಾನ್ಸ್‌ಫಾರ್ಮರ್‌ ಅಳವಡಿಸಲು ಸೆಸ್ಕ್‌ಗೆ ಮನವಿ ಮಾಡಲಾಗಿದೆ. ಕುಡಿಯುವ ನೀರು ಸರಬರಾಜು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ