ಗುರುರಾಜ ಗೌಡೂರು
ಮಳೆಗಾಲದಲ್ಲಿ ಮಳೆ ಬಾರದೇ ತಿಂಗಳುಗಳೇ ಉರುಳಿವೆ. ಬರದ ಬಾಧೆ ಒಂದಡೆಯಾದರೇ ರಣ ಬಿಸಿಲಿಗೆ ಜನ-ಜಾನುವಾರಗಳ ಬದುಕು ಬೇಯುತ್ತಿದೆ. ಬಿಸಿಲು ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಸಾಂಕ್ರಾಮಿಕ ರೋಗಳಿಂದ ಜನರು ತಲ್ಲಣಗೊಂಡಿದ್ದಾರೆ.
ತಾಲೂಕಿನ ನಾಲ್ಕು ಕಂದಾಯ ಹೋಬಳಿ ಪೈಕಿ ಮುದಗಲ್ ಹೋಬಳಿ ಖುಷ್ಕಿ ಪ್ರದೇಶ, ಮಳೆ ಇಲ್ಲದೇ ಬೆಳೆಗಳು ಸಂಪೂರ್ಣ ಕೈಕೊಟ್ಟಿವೆ. ಬಿಸಿಲು ಹೆಚ್ಚಿದ್ದು ಬೆಳೆ ಗಳು ಒಣಗಲು ಆರಂಭಿಸಿವೆ. ಹತ್ತಿ ನೆತ್ತಿಯಿಂದ ಒಣಗಿವೆ. ಬರದಿಂದ ಬಹುತೇಕ ಹಳ್ಳಿಗಳಲ್ಲಿ ಕೂಲಿಕಾರರು ಗುಳೇ ಹೋಗಿದ್ದು, ಅತ್ತಿ ಬಿಡಿಸಲು ಕೂಲಿಕಾರರು ಸಿಗು ತ್ತಿಲ್ಲ. ಮಳೆ ಇಲ್ಲದೇ ಬಿಸಿಲ ತಾಪಮಾನ ಏರುಮುಖದಿಂದ ವಾತಾವರಣ ಬೇಸಿಗೆಯಂತಾಗಿದೆ. ಇನ್ನೂ ಗುರುಗುಂಟಾ ಭಾಗದ ಕೆಲ ಹಳ್ಳಿಗಳಲ್ಲಿ ಬಲದಂಡೆ ನಾಲೆ ನೀರಾವರಿ ಇದೆ. ಇನ್ನೂ ಗುಡ್ಡಗಾಡು ಪ್ರದೇಶದ ಹಳ್ಳಿಗಳಲ್ಲಿ ಬದುಕು ಸಂಪೂರ್ಣ ಮುರಿದು ಬಿದ್ದಿದೆ. ಮುಂಗಾರು ಬೆಳೆಗಳಾದ ಸಜ್ಜೆ, ತೊಗರಿ, ಹತ್ತಿ ಬೆಳೆಗಳು ದುಸ್ಥಿತಿಗೆ ಸಿಲುಕಿವೆ. ಮಳೆ ಇಲ್ಲದ ಪರಿಣಾಮ ಮೇವು ಕಮರಿ ಹೋಗಿದೆ. ಒಣ ನೆಲದಲ್ಲಿ ತಲೆ ಬಗ್ಗಿಸಿ ಮೇವಿಗೆ ಅರಸುವ ಮೂಕ ಪ್ರಾಣಿಗಳ ವೇದನೆ ಭೀಕರ ವಾಗಿದೆ. ಕುರಿಗಾಹಿಗಳು ಗದಗ, ರೋಣ, ನರಗುಂದ, ನವಲಗುಂದ, ಬಾಗಲಕೋಟೆ, ಜಮಖಂಡಿ, ಬೀಳಗಿ ಸೇರಿದಂತೆ ಕುರಿಗಳನ್ನು ಮೇಯಿಸಲು ಹೊಡೆದು ಕೊಂಡು ಹೋಗಿದ್ದಾರೆ.ಲಿಂಗಸುಗೂರು ಹೋಬಳಿ ಸುತ್ತಮುತ್ತಲ ಜಮೀನುಗಳಿಗೆ ಬಲದಂಡೆ ನಾಲೆ, ರಾಂಪುರ ಏತ ನೀರಾವರಿ ನಾಲೆಗಳ ನೀರು ಸ್ವಲ್ಪ ಜೀವ ಜಲ ನೀಡಿದೆ. ಬೆಳೆಗಳು ಹಸಿರಾಗಿವೆ. ಆದರೆ ಬಿಸಿಲಿನ ತಾಪಮಾನ ಏರುತ್ತಿರುವುದರಿಂದ ನಾಲೆಗಳಿಂದ ಬೆಳೆಗಳಿಗೆ ದಿನಾಲು ನೀರು ಹರಿಸಬೇಕಿದೆ. ಇನ್ನೂ ನಾಗರಾಳ ಹೋಬಳಿಯಲ್ಲೂ ಪರಸ್ಥಿತಿ ಭಿನ್ನವಾಗಿಲ್ಲ.
ಬರದಿಂದ ಬದುಕು ದುರ್ಬರವಾಗುತ್ತಿದೆ. ಅಲ್ಲೊಂದು ಇಲ್ಲೊಂದು ಎನ್ನುವಂತೆ ಜಿ ರಾಮ ಜಿ ಉದ್ಯೋಗ ಖಾತರಿ ಕೆಲಸಗಳು ನಡೆದಿವೆ. ಜನರಿಗೆ ನೆರವಾಗುವ ಯಾವುದೇ ಸರ್ಕಾರಿ ಯೋಜನೆಗಳು ಜನರ ನೆರವಿಗೆ ಬಂದಿಲ್ಲ.
ಮಳೆ ಇಲ್ಲದೇ ಬೀಕರ ಬರ ಆವರಿಸಿದ ಕೆಟ್ಟ ಕಾಲವಾಗಿದೆ. ದುರ್ದಿನಗಳಲ್ಲಿ ಆಡಳಿತ ನೆರವಿಗೆ ಧಾವಿಸಬೇಕು. ರೈತರಿಗೆ ನೆರವಾಗುವ ಯೋಜನೆಗಳು ಕಾರ್ಯ ರೂಪಕ್ಕೆ ತರಬೇಕು. ಒಣ ಘೋಷಣೆ ಹೇಳಿಕೆಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ. ಕೂಡಲೇ ಬಡಜನರು, ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಗೌಡೂರು ರೈತ ರಾಚಯ್ಯಸ್ವಾಮಿ ಗಣಾಚಾರಿ ಹೇಳಿದರು.