ಬಂದಾಯ್ತು ಬರ, ರೈತಗೆ ತಡವಾದ ವರುಣನ ವರ

KannadaprabhaNewsNetwork |  
Published : Jul 23, 2026, 01:30 AM IST
22ಕೆಪಿಆರ್‌ಸಿಆರ್ 01: | Kannada Prabha

ಸಾರಾಂಶ

ಒಂದು ಕಡೆ ಆವರಿಸಿರುವ ಬರ ಛಾಯೆ, ಮತ್ತೊಂದೆಡೆ ಬೇಡದ ವರವನ್ನು ಕರುಣಿಸಿರುವ ವರುಣದೇವ. ಹೀಗೆ ದ್ವಂದ್ವ ಸನ್ನಿವೇಶಕ್ಕೆ ರಾಯಚೂರು ಜಿಲ್ಲೆ ಸಾಕ್ಷಿಯಾಗಿ ನಿಂತಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಒಂದು ಕಡೆ ಆವರಿಸಿರುವ ಬರ ಛಾಯೆ, ಮತ್ತೊಂದೆಡೆ ಬೇಡದ ವರವನ್ನು ಕರುಣಿಸಿರುವ ವರುಣದೇವ. ಹೀಗೆ ದ್ವಂದ್ವ ಸನ್ನಿವೇಶಕ್ಕೆ ರಾಯಚೂರು ಜಿಲ್ಲೆ ಸಾಕ್ಷಿಯಾಗಿ ನಿಂತಿದೆ.

ಕಳೆದ ಆರು ತಿಂಗಳಿನಿಂದ ಬೇಸಿಗೆ, ಅತೀ ಬೇಸಿಗೆ, ಶೆಖೆಯ ಅನುಭವ, ಬತ್ತಿದ ಅಂತರ್ಜಲ, ನದಿ, ಭಾವಿ, ಹಳ್ಳ- ಕೊಳ್ಳ, ಕೆರೆ-ಕಟ್ಟೆ, ಬರಡು ಭೂಮಿ ಹಾಗೂ ಒಣಗಿದ ಬೆಳೆ ಗಳನ್ನೇ ಕಾಣುತ್ತಿರುವ ಜನ ಸಾಮಾನ್ಯರು ವಾರದಿಂದ ಮಳೆ, ಮೋಡ ಕವಿದ ವಾತಾವರಣ,ತಪ್ಪು ಹಾಗೂ ಚಳಿಯ ಅನುಭೂತಿಯನ್ನು ಅನುಭವಿಸಲಾರಂಭಿಸಿದ್ದಾರೆ.

ಇಷ್ಟು ದಿನ ಮಳೆ ಕೊರತೆ, ಬರದ ಛಾಯೆ ಪಸರಿಸುತ್ತಿದ್ದ ವೇಳೆಯಲ್ಲಿ ನಿರಂತರವಾಗಿ ಸುರಿದ ಮಳೆಯು ವಾರದಲ್ಲಿಯೇ ಸಂಪೂರ್ಣ ವಾತಾವರಣವನ್ನು ಬದಲಾಯಿಸಿದೆ. ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸುರಿಯುತ್ತಿರುವ ಮಳೆಯು ಇದು ಮಳೆಗಾಲವೇ ಬಿಡಿ ಎನ್ನುವುದನ್ನು ನೆನಪಿಸುವಂತೆ ಮಾಡಿದೆ.

ಮೇಲ್ಭಾಗದಲ್ಲಿ ಸಹ ಮಳೆಯಾಗುತ್ತಿರುವುದರಿಂದ ಜಲಾಶಯಗಳ ಮುಖಾಂತರ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ನೀರಿನ ಅರಿವು ಹೆಚ್ಚಾಗ ತೊಡಗಿದ್ದು, ಸಮಯಕ್ಕೆ ಸರಿಯಾಗಿ ಸುರಿಯದ ಮಳೆಯಿಂದಾಗಿ ಮುಂಗಾರು ಹಂಗಾಮಿನ ಆರಂಭದಲ್ಲಿ ಬಿತ್ತಿದ್ದ ಬೆಳೆಗಳು ಕೈಕೊಟ್ಟಿದ್ದರಿಂದ ನಷ್ಟದ ನೊಗೆಯನ್ನು ಹೊತ್ತುಕೊಂಡ ಅನ್ನದಾತರರು ಪರ್ಯಾಯ ಬೆಳೆಗಳತ್ತ ಮುಖಮಾಡುತ್ತಿದ್ದಾರೆ.

ಕರಗುತ್ತಿದೆ ಮಳೆ ಕೊರತೆ ಪ್ರಮಾಣ : ತೀವ್ರ ಮಳೆಯ ಕೊರತೆಯನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆಯು ಕೊರತೆ ಪ್ರಮಾಣವನ್ನು ಕರಗು ವಂತೆ ಮಾಡುತ್ತಿದೆ. ಮುಂಗಾರು ಹಂಗಾಮಿನಲ್ಲಿಯೇ ಶೇ.45 ರಷ್ಟು ಮಳೆಯ ಕೊರತೆ ಉಂಟಾಗಿ ಕೃಷಿ ಚಟುವಟಿಕೆಗಳಿಗೆ ತೀರಾ ಹಿನ್ನಡೆ, ನಗರ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿತ್ತು. ಇದೀಗ ಕಳೆದ ಜು.14 ರಿಂದ ಜು.22 ವರೆಗೆ ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಶೇ.63 ಮಿಮೀ, ಲಿಂಗಸುಗೂರಿನಲ್ಲಿ 30, ಮಾನ್ವಿಯಲ್ಲಿ 53, ರಾಯಚೂರಿನಲ್ಲಿ 79, ಸಿಂಧನೂರಿನಲ್ಲಿ 17, ಮಸ್ಕಿಯಲ್ಲಿ 16,ಸಿರವಾದಲ್ಲಿ 33 ಮತ್ತು ಅರಕೇರಾ ತಾಲೂಕಿನಲ್ಲಿ ಶೇ.41 ಮಿಮೀ ನಷ್ಟು ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ವಾರದಲ್ಲಿ ವಾಡಿಕೆ ರೀತ್ಯ 23 ಮಿಮೀನಲ್ಲಿ 42 ಮಿಮೀ ನಷ್ಟು ಮಳೆ ಸುರಿದಿದ್ದು ಶೇ.83 ಮಿಮೀ ಮಳೆಯಾಗಿದೆ.

ಶೇ.19ಕ್ಕೆ ಕುಸಿದ ಕೊರತೆ : ಪ್ರಸಕ್ತ ಸಾಲಿನ ಮುಂಗಾರಿನ ಆರಂಭದಿಂದ ಕಳೆದ ಜೂ.1 ರಿಂದ ಜು.10 ವರೆಗೆ ಶೇ.67 ರಷ್ಟು ಮಳೆಯ ತೀವ್ರ ಕೊರತೆಯಿದ್ದ ಸನ್ನಿವೇಶವು ಇದೀಗ ಶೇ.19ಕ್ಕೆ ಬಂದು ತಲುಪಿದೆ. ಜೂ.1 ರಿಂದ ಜು.22 ವರೆಗೆ ಜಿಲ್ಲೆಯಾದ್ಯಂತೆ ವಾಡಿಕೆ ರೀತ್ಯ 145 ಮಿಮೀ ಮಳೆಯಾಗಬೇಕಾಗಿತ್ತು, ಅದರಲ್ಲಿ 117 ಮಿಮೀ ಮಳೆ ಯಾಗಿದ್ದು ಶೇ.19 ರಷ್ಟು ಮಾತ್ರ ಕೊರತೆ ಎದುರಾಗಿದ್ದು, ಭವಿಷ್ಯದಲ್ಲಿ ಇದು ಸಹ ಕುಸಿತ ಕಾಣಲಿದೆ ಎಂದು ವಾಹಮಾನ ಇಲಾಖೆಯು ನೀಡಿದ ಮುನ್ಸೂಚನೆಯಲ್ಲಿ ತಿಳಿಸಿದೆ.

ಮುಂಗಾರು ಸಂಪೂರ್ಣ ವಿಫಲ ಬರ ಘೋಷಣೆಗೆ ಆಗ್ರಹ : ಮಳೆಯಾಶ್ರಿತ ಪ್ರದೇಶದಲ್ಲಿ ಅರೆಬರೆ ಬಿತ್ತನೆಯಾದರು ಆಗಿದೆ ಆದರೆ ನೀರಾವರಿ ಪ್ರದೇಶದ ಜಮೀನುಗಳಲ್ಲಿ ಬಿತ್ತನೆ ಮಾಡಿಲ್ಲ.ಮುಂಗಾರು ಸಂಪೂರ್ಣ ವಿಫಲ, ಮಳೆ ಅಭಾವದಿಂದ ಆವರಿಸಿರುವ ಬರ ಪರಿಸ್ಥಿತಿನ ನಡುವೆಯೂ ಕೇವಲ ಶೇ.44 ರಷ್ಟು ಮಾತ್ರ ಮುಂಗಾರು ಬಿತ್ತನೆ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಒಟ್ಟಾರೆ 5,72,375 ಹೆಕ್ಟೇರ್ ಕೃಷಿ ಭೂಮಿಯ್ಲಲಿ ಕೇವಲ 2,50,711 ಹೆಕ್ಟೇರ್‌ ಬಿತ್ತನೆಯಾಗಿದ್ದು, ಇದರಲ್ಲಿ ಖುಷ್ಕಿ 3,10,225 ಹೆಕ್ಟೇರ್‌ ಗುರಿಯಲ್ಲಿ 2,02,743 (ಶೇ.66) ರಷ್ಟು ಬಿತ್ತನೆ ಮಾಡಲಾಗಿದೆ. ನೀರಾವರಿ ಪ್ರದೇಶದಲ್ಲಿ ಒಟ್ಟು 2,62,150 ಹೆಕ್ಟೇರ್‌ ಗುರಿಯಲ್ಲಿ ಕೇವಲ 47,968 (ಶೇ.18) ರಷ್ಟು ಮಾತ್ರ ಬಿತ್ತೆಯಾಗಿದೆ.

ತಡವಾಗಿ ಸುರಿದ ಮಳೆಯ ಸದುಪಯೋಗ ಪಡೆದುಕೊಳ್ಳಲು ಕೆಲ ಅನ್ನದಾತರು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳತ್ತ ಮುಖ ಮಾಡುವ ಆಲೋಚನೆಯಲ್ಲಿ ಬಿದಿದ್ದಾರೆ. ತಮ್ಮ ತಮ್ಮ ಅನುಕೂಲಕ್ಕೆ ಹತ್ತಿ, ಕಾಯಿಪಲ್ಲೆ ಮತ್ತು ತೋಟಗಾರಿಕೆ ಸೇರಿ ಇತರರೆ ಸಣ್ಣ-ಪುಟ್ಟ ಇಳುವರಿಯ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದರೇ, ಕೆಲವರು ಹಿಂಗಾರು ಹಂಗಾಮಿನಲ್ಲಿ ಬೆಳೆಯನ್ನು ಬಿತ್ತುವ ಆಲೋಚನೆಯಲ್ಲಿದ್ದಾರೆ.

ಬರ ಘೋಷಿಸಿ ಪರಿಹಾರ ಕೊಡಿ:

ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ, ಸೂಕ್ತ ಪರಿಹಾರವನ್ನು ನೀಡಬೇಕು ಎನ್ನುವ ಒತ್ತಡವು ಹೆಚ್ಚಾಗಿದೆ. ಈ ವಿಚಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕಾಲಕ್ಕೆ ಕ್ರಮ ವಹಿಸಬೇಕು, ಜಂಟಿ ಸಮೀಕ್ಷೆಯನ್ನು ನಡೆಸಿ, ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಮೊತ್ತವನ್ನು ಪುನರ್‌ ಪರಿಶೀಲಿಸಿ ಹೆಚ್ಚಿನ ಪರಿಹಾರವನ್ನು ನೀಡಬೇಕು, ತಕ್ಷಣವೇ ಬಿವಿಜಿ ರಾಮ್‌ ಜಿ ಯೋಜನೆಯಡಿ ಕಾಮಗಾರಿಗಳನ್ನು ಗುರುತಿಸಿ ಕೆಲಸ ಒದಗಿಸಿಕೊಡುವುದರ ಮುಖಾಂತರ ಮಹಾಗುಳೆಯನ್ನು ತಪ್ಪಿಸಬೇಕು ಎನ್ನುವ ಕೂಗಿ ಬಲವಾಗಿದೆ.

ರಾಯಚೂರು ಸೇರಿ ರಾಜ್ಯದ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಮಳೆಯ ತೀವ್ರ ಅಭಾವ ಸೃಷ್ಠಿಯಾಗಿ ಮುಂಗಾರು ಹಂಗಾಮು ವೈಫಲ್ಯಗೊಂಡಿದೆ. ಇದರಿಂದಾಗಿ ರೈತರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ತಕ್ಷಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬರ ಪ್ರದೇಶವೆಂದು ಘೋಷಣೆ ಮಾಡಿ ಪರಿಷ್ಕೃತ ಪರಿಹಾರ ಒದಗಿಸಬೇಕು ಅದರ ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಕೆಲಸ ಕೊಡುವುದರ ಮುಖಾಂತರ ಗುಳೆ ತಪ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲಾ ಮಕ್ಕಳಿಗಿಲ್ಲ ಪಠ್ಯಪುಸ್ತಕ ಭಾಗ್ಯ!
ಯುಗ್ಮಾ ಟೆಕ್‌ಫೆಸ್ಟ್- ರಾಷ್ಟ್ರಮಟ್ಟದ ಎಐ ಹ್ಯಾಕಥಾನ್‌