ಮಾದಕ ವ್ಯಸನದಿಂದ ಎಲ್ಲರ ನೆಮ್ಮದಿ ಹಾಳು

KannadaprabhaNewsNetwork | Published : Jun 25, 2025 1:17 AM

ಮಾದಕ ವ್ಯಸನಕ್ಕೆ ಬಲಿಯಾದ ವ್ಯಕ್ತಿಗಳು, ಹಣ ಸಿಗದಿದ್ದರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ನಂತರ ಪೊಲೀಸರಿಗೆ ಸಿಕ್ಕಿಬಿದ್ದು, ಕಷ್ಟ, ಅವಮಾನ ಅನುಭವಿಸುವ ಜತೆಗೆ ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಜತೆಗೆ ಕುಟುಂಬದ ನೆಮ್ಮದಿಯೂ ಹಾಳುಗುತ್ತದೆ. ಆದ್ದರಿಂದ ಎಲ್ಲರ ನೆಮ್ಮದಿಯ ಜೀವನಕ್ಕಾಗಿ ಮಾದಕ ವ್ಯಸನಕ್ಕೆ ಯಾರೂ ಬಲಿಯಾಗಬಾರದು ಎಂದು ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್‌ಪಿ ಶಾಲೂ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಮಾದಕ ವ್ಯಸನಕ್ಕೆ ಬಲಿಯಾದ ವ್ಯಕ್ತಿಗಳು, ಹಣ ಸಿಗದಿದ್ದರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ನಂತರ ಪೊಲೀಸರಿಗೆ ಸಿಕ್ಕಿಬಿದ್ದು, ಕಷ್ಟ, ಅವಮಾನ ಅನುಭವಿಸುವ ಜತೆಗೆ ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಜತೆಗೆ ಕುಟುಂಬದ ನೆಮ್ಮದಿಯೂ ಹಾಳುಗುತ್ತದೆ. ಆದ್ದರಿಂದ ಎಲ್ಲರ ನೆಮ್ಮದಿಯ ಜೀವನಕ್ಕಾಗಿ ಮಾದಕ ವ್ಯಸನಕ್ಕೆ ಯಾರೂ ಬಲಿಯಾಗಬಾರದು ಎಂದು ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್‌ಪಿ ಶಾಲೂ ಎಚ್ಚರಿಸಿದರು. ಪಟ್ಟಣದ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಮಾದ ಕದ್ರವ್ಯ ವಿರೋಧಿ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಯಾವುದೇ ಹಳ್ಳಿಗಳಲ್ಲಿ ಗಾಂಜಾ, ಅಫೀಮು, ಮದ್ಯ ಸೇರಿದಂತೆ ಯಾವುದೇ ಮಾದಕ ವಸ್ತುಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುವುದು ಕಂಡು ಬಂದರೆ ತಕ್ಷಣ ಪೊಲೀಸರಿಗೆ ತಿಳಿಸಿ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ ಮತ್ತು ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದರು. ನಾಗರಿಕರ ನೆಮ್ಮದಿಯ ಜೀವನಕ್ಕಾಗಿ ಪೊಲೀಸ್ ಇಲಾಖೆ ಕೈಗೊಳ್ಳುವ ಜನಪರ ಕಾರ್ಯಗಳಲ್ಲಿ ಕೈಜೋಡಿಸುವ ಜತೆಗೆ ಪ್ರತಿಯೊಬ್ಬರೂ ತಪ್ಪದೇ ಕಾನೂನು ಪಾಲನೆ ಮಾಡಬೇಕೆಂದು ಸಲಹೆ ನೀಡಿದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ ಮಾತನಾಡಿ, ಮಾದಕ ವ್ಯಸನಕ್ಕೆ ದಾಸರಾದವರು ಆರೋಗ್ಯ, ನೆಮ್ಮದಿ, ಹಣ ಆಸ್ತಿಪಾಸ್ತಿ ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಭಂಗಿಸೊಪ್ಪನ್ನು ಬೆಳೆದು ಮಾರಾಟ ಮಾಡುವವರನ್ನು ಪೊಲೀಸರು ಹಿಡಿದು ಕ್ರಮ ಜರುಗಿಸಿದ್ದಾರೆ. ಯಾವುದೇ ಜಮೀನಿನಲ್ಲಿ ಭಂಗಿ ಸೊಪ್ಪನ್ನು ಬೆಳೆದಿದ್ದರೆ ಪೊಲೀಸರಿಗಾಗಲಿ, ಕಂದಾಯ ಇಲಾಖೆಯ ಅಧಿಕಾರಿಗಳಿಗಾಗಿ ಆಗಲಿ ತಿಳಿಸಿ. ಮಾದಕ ವ್ಯಸನಕ್ಕೆ ತುತ್ತಾಗಬೇಡಿ. ಸಮಾಜದಲ್ಲಿ ಒಳ್ಳೆಯವರಾಗಿ ಬದುಕು ರೂಪಿಸಿಕೊಳ್ಳಿ ಇದರಿಂದ ಜನರು ಗೌರವಿಸುತ್ತಾರೆ ಎಂದರು. ಪುರಸಭಾಧ್ಯಕ್ಷ ಪ್ರಸನ್ನ, ವೃತ್ತ ನಿರೀಕ್ಷಕ ಪ್ರದೀಪ್, ನಗರ ಠಾಣೆ ಪಿಎಸ್ಸೈ ಅಭಿಜಿತ್, ಗ್ರಾಮಾಂತರ ಠಾಣೆ ಪಿಎಸ್ಸೈ ರಮೇಶ್, ಬಿಇಒ ಸೋಮಲಿಂಗೇಗೌಡ, ತಾ.ಪಂ. ಇಒ ಮುನಿರಾಜು, ಆರೋಗ್ಯ ಇಲಾಖೆಯ ಜೆ.ಟಿ.ಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೃಥ್ವಿ, ಅಗ್ನಿಶಾಮಕ ಠಾಣೆಯ ಅಧಿಕಾರಿ ಸೋಮಶೇಖರ್, ಮುಖಂಡರಾದ ಜೈಪ್ರಕಾಶ್, ಜವರೇಗೌಡ, ಇತರರು ಇದ್ದರು.