ಮಾದಕದ್ರವ್ಯ ಸಮಾಜಕ್ಕೆ ಮಾರಕ

KannadaprabhaNewsNetwork |  
Published : Jun 25, 2026, 02:45 AM IST
(ಫೋಟೊ24ಬಿಕೆಟಿ1,(1) ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಮಾದಕದ್ರವ್ಯ ಮಾರಾಟ ಮತ್ತು ಸೇವನೆ ಅಪರಾಧ ಕ್ರಿಯೆಗಳಾಗಿವೆ. ಮಾದಕದ್ರವ್ಯ ಸೇವನೆ ವ್ಯಕ್ತಿಗತ ವ್ಯಸನವಾದರೂ ಇದು ಸಮಾಜಕ್ಕೆ ಮಾರಕ ಎಂದು ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಾದಕದ್ರವ್ಯ ಮಾರಾಟ ಮತ್ತು ಸೇವನೆ ಅಪರಾಧ ಕ್ರಿಯೆಗಳಾಗಿವೆ. ಮಾದಕದ್ರವ್ಯ ಸೇವನೆ ವ್ಯಕ್ತಿಗತ ವ್ಯಸನವಾದರೂ ಇದು ಸಮಾಜಕ್ಕೆ ಮಾರಕ ಎಂದು ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ ಹೇಳಿದರು.

ನಗರದ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಶತಾಬ್ಧಿ ಸಭಾಭವನದಲ್ಲಿ ಬುಧವಾರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಾದಕದ್ರವ್ಯ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇನ್ನೋರ್ವ ಅತಿಥಿ ಜಿಲ್ಲಾ ಪೊಲೀಸ್ ವರಿಷ್ಠ ಸಿದ್ಧಾರ್ಥ ಗೊಯಲ್ ಮಾತನಾಡಿ, ಮಾದಕದ್ರವ್ಯಗಳಲ್ಲಿ ಕೊಕೆನ್ ಸೇವಿಸುವವರ ಪ್ರಮಾಣ ಹೆಚ್ಚು. ಆತ್ಮವಿಶ್ವಾಸದ ಕೊರತೆ ವಿದ್ಯಾರ್ಥಿಗಳನ್ನು ಮಾದಕದ್ರವ್ಯಗಳ ವ್ಯಸನಿಯಾಗಿಸುತ್ತಿದೆ. ಈ ವ್ಯಸನ ನಿಮ್ಮ ಗುರಿ, ಕನಸು ಮತ್ತು ಭವಿಷ್ಯಕ್ಕೆ ಮಾರಕ. ಪೊಲೀಸ್ ಇಲಾಖೆಯ ಮೂಲಕ ಶಾಲಾ, ಕಾಲೇಜುಗಳಿಗೆ ನಿರಂತರ ಭೇಟಿ ನೀಡಿ ಮಾದಕ ದ್ರವ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಉತ್ತಮ ಸ್ನೇಹಿತರ ಸಹವಾಸ ಮೈಗೂಡಿಸಿಕೊಳ್ಳಿ ಮತ್ತು ಮಾದಕದ್ರವ್ಯದ ವ್ಯಸನದಿಂದ ದೂರವಿರಿ ಎಂದು ಸಲಹೆ ನೀಡಿದರು.

ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾದಕದ್ರವ್ಯ ವ್ಯಸನದ ಅಪಾಯಗಳ ಕುರಿತು ಜಾಗೃತಿ ಮೂಡಿಸುತ್ತಿರುವ ನವನಗರ ಪೊಲೀಸ್ ಇಲಾಖೆಯ ಪ್ರಯತ್ನ ಶ್ಲಾಘನೀಯ. ಈ ವ್ಯಸನದಿಂದ ಯುವಶಕ್ತಿ ಎಂದೇ ಪರಿಗಣಿತರಾದ ವಿದ್ಯಾರ್ಥಿಗಳನ್ನು ರಕ್ಷಿಸುವುದು ಅಗತ್ಯವಾಗಿದೆ. ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರಿಂದ ಮಾದಕದ್ರವ್ಯ ವ್ಯಸನದಿಂದ ದೂರವಿರಲು ಸಾಧ್ಯ. ಎಲ್ಲರೂ ಜೊತೆಯಾಗಿ ಮಾದಕದ್ರವ್ಯಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.

ಇದೇ ವೇಳೆ ಮಾದಕದ್ರವ್ಯ ಮಾರಾಟ ಮತ್ತು ಸೇವನೆ ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಲು ಅನುಕೂಲವಾಗುವಂತೆ ಕ್ಯೂ ಆರ್ ಕೋಡ್ ಬಿಡುಗಡೆಗೊಳಿಸಲಾಯಿತು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿದ್ಧಾರ್ಥ ಗೊಯಲ್ ಹೇಳಿದರು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಡಾ.ನಾರಾಯಣ ಮುತಾಲಿಕ ನಿರೂಪಿಸಿದರು. ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಅತಿಥಿಗಳನ್ನು ಸ್ವಾಗತಿಸಿದರು. ಡಿವೈಎಸ್ಪಿ ಗಜಾನನ ಸುತಾರ ಪ್ರಾಸ್ತಾವಿಕ ಮಾತನಾಡಿದರು. ಡಾ.ವಿನೋದ ಅಕ್ಕಸಾಲಿ ನಶಾಮುಕ್ತ ಭಾರತ ಕುರಿತು ಉಪನ್ಯಾಸ ನೀಡಿದರು. ಪಿ.ಎಸ್.ಐ ಮಧು ಅವರು ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಜ್ಞಾವಿಧಿ ಬೋಧಿಸಿದರು.

ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ, ಪ್ರಾಚಾರ್ಯರಾದ ಡಾ.ರವಿರಾಜ ದೇಸಾಯಿ, ಡಾ.ದಿಲಿಪ್ ನಾಟೇಕರ್,ಡಾ.ಮಹಾಂತೇಶ ಬಿರಡಿ, ಮೆಡಿಕಲ್, ಡೆಂಟಲ್, ನರ್ಸಿಂಗ್ ಮತ್ತು ಫಿಜಿಯೋಥೆರಪಿ ಕಾಲೇಜುಗಳ ಬೋಧಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾದಕದ್ರವ್ಯ ಮಾರಾಟ ಮತ್ತು ಸೇವನೆ ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ರವಾನಿಸಲು ಅನುಕೂಲವಾಗುವಂತೆ ಕ್ಯೂ ಆರ್ ಕೋಡ್ ಬಿಡುಗಡೆ ಮಾಡಲಾಯಿತು.

ತಂತ್ರಜ್ಞಾನದ ಬೆಳವಣಿಗೆಯಿಂದ ಇಂದಿನ ದಿನಗಳಲ್ಲಿ ಡ್ರಗ್ಸ್ ಸೇವನೆ ಪತ್ತೆ ಹಚ್ಚುವುದು ಸುಲಭವಾಗಿದೆ. ವಿದ್ಯಾರ್ಥಿಗಳಲ್ಲಿ ಒತ್ತಡ, ಕುತೂಹಲ ಮತ್ತು ಮಾದಕದ್ರವ್ಯ ವ್ಯಸನಿ ಸ್ನೇಹಿತರ ಪ್ರಭಾವದಿಂದ ಮಾದಕದ್ರವ್ಯ ಸೇವನೆ ಹೆಚ್ಚುತ್ತಿದೆ. ಒತ್ತಡ ನಿವಾರಣೆಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮಾದಕದ್ರವ್ಯ ಮಾರಾಟ ಮತ್ತು ಸೇವನೆ ನಿಮ್ಮ ಗಮನಕ್ಕೆ ಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಡ್ರಗ್ಸ್ ಸೇವನೆ ತಡೆಗಟ್ಟಿದರೆ ಅದರ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಾಧ್ಯ. -ಸಂದೀಪ ಪಾಟೀಲ, ಪೊಲೀಸ್ ಮಹಾನಿರೀಕ್ಷಕ, ಬೆಳಗಾವಿ ಉತ್ತರ ವಲಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಹೋರಾತ್ರಿ ಧರಣಿ ಸ್ಥಳಕ್ಕೆ ಎಂಎಲ್ಸಿ ನಿರಾಣಿ ಭೇಟಿ
20 ವರ್ಷದ ಸಮಸ್ಯೆ ಪರಿಹರಿಸಿ