ಸರ್ಕಾರ-ಜನಪ್ರತಿನಿಧಿಗಳ ದ್ವಂದ್ವ ನಿಲುವಿನಿಂದ ಸಮಾಜಕ್ಕೆ ಅನಾರೋಗ್ಯ: ಶ್ಯಾಮ್‌ಪ್ರಸಾದ್

KannadaprabhaNewsNetwork |  
Published : Jun 26, 2024, 12:31 AM IST
೨೫ಕೆಎಂಎನ್‌ಡಿ-೬ಮಂಡ್ಯದ ಧ್ವನಿ ಸಂಸ್ಥೆ ಆವರಣದಲ್ಲಿ ನಡೆದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯನ್ನು ವಿಶ್ರಾಂತ ನ್ಯಾಯಮೂರ್ತಿ ಶ್ಯಾಮ್ ಪ್ರಸಾದ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರ್ಕಾರಗಳು ಪ್ರಜೆಗಳಿಗೆ ಉತ್ತಮ ವಾತಾವರಣ, ಮೂಲಭೂತ ಸೌಲಭ್ಯ, ಶಿಕ್ಷಣ, ಆರೋಗ್ಯವನ್ನು ನೀಡಬೇಕು. ಆದರೆ, ಇಂತಹ ಕೆಲಸವನ್ನು ಮಾಡದೆ ನಮ್ಮ ನಾಯಕರೆನಿಸಿಕೊಂಡವರು ಒಂದು ಕಡೆ ಮದ್ಯಪಾನ ಮಾಡಿ ಎನ್ನುವುದು, ಮತ್ತೊಂದು ಕಡೆ ಮದ್ಯಮುಕ್ತ ಭಾರತ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜನಪ್ರತಿನಿಧಿಗಳು ಹಾಗೂ ಸರ್ಕಾರದ ದ್ವಂಧ್ವ ನಿಲುವಿನಿಂದ ಸ್ವಾಸ್ಥ್ಯ ಸಮಾಜ ಅನಾರೋಗ್ಯಕ್ಕೆ ಒಳಗಾಗುತ್ತಿದೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದರೆ, ಸಿರಿವಂತರು ಶ್ರೀಮಂತರಾಗಿಯೇ ಮುಂದುವರಿಯುತ್ತಿದ್ದಾರೆ ಎಂದು ವಿಶ್ರಾಂತ ನ್ಯಾಯಮೂರ್ತಿ ಶ್ಯಾಮ್ ಪ್ರಸಾದ್ ವಿಷಾದಿಸಿದರು.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ನಿಶಾ ಮುಕ್ತ ಭಾರತ ಅಭಿಯಾನ, ಧ್ವನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಧ್ವನಿ ಸಂಸ್ಥೆ ಆವರಣದಲ್ಲಿ ನಡೆದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರ್ಕಾರಗಳು ಪ್ರಜೆಗಳಿಗೆ ಉತ್ತಮ ವಾತಾವರಣ, ಮೂಲಭೂತ ಸೌಲಭ್ಯ, ಶಿಕ್ಷಣ, ಆರೋಗ್ಯವನ್ನು ನೀಡಬೇಕು. ಆದರೆ, ಇಂತಹ ಕೆಲಸವನ್ನು ಮಾಡದೆ ನಮ್ಮ ನಾಯಕರೆನಿಸಿಕೊಂಡವರು ಒಂದು ಕಡೆ ಮದ್ಯಪಾನ ಮಾಡಿ ಎನ್ನುವುದು, ಮತ್ತೊಂದು ಕಡೆ ಮದ್ಯಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುವುದು. ಇದರಿಂದಾಗಿ ಜನತೆ ಗೊಂದಲಕ್ಕೊಳಗಾಗಿ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಕೊರೋನಾ ಲಾಕ್‌ಡೌನ್ ನಂತರದ ದಿನಗಳಲ್ಲಿ ಜನ ದಿನಸಿ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲಲಿಲ್ಲ. ಬದಲಿಗೆ ಮದ್ಯದಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದನ್ನು ನೋಡಿದ್ದೇವೆ. ಒಂದು ಕಡೆ ಕುಡಿಸುವುದು, ಮತ್ತೊಂದು ಕಡೆ ತಪ್ಪಿಸುವಂತಹ ಇಬ್ಬಗೆಯ ನೀತಿ ಸರಿಯಲ್ಲ. ಈ ಬಗ್ಗೆ ಸರ್ಕಾರ ಬೇರೆಯದ್ದೇ ಚಿಂತನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಮಹಾತ್ಮಗಾಂಧಿ ಅವರು ಸ್ವಾತಂತ್ರ ಹೋರಾಟದ ಸಂದರ್ಭದಲ್ಲೂ ಕುಡಿತ ಮುಕ್ತ ಸಮಾಜ ಮಾಡಲು ಶ್ರಮಿಸಿದರು. ಅಂತಹ ಮಹನೀಯರ ಆದರ್ಶಗಳನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ. ಸ್ವಾತಂತ್ರ್ಯ ಬಂದು ವರ್ಷ ಮುಗಿಯುವುದರೊಳಗೆ ನಾವು ಅವರನ್ನು ಕಳೆದುಕೊಳ್ಳಬೇಕಾಯಿತು ಎಂದು ನೊಂದು ನುಡಿದರು.

ಮಕ್ಕಳನ್ನು ಸಮಾಜದ ಸತ್ಪ್ರಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ. ನಮ್ಮ ಮಕ್ಕಳು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಆ ಮೂಲಕ ಸಮಾಜ ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂಬುದನ್ನು ನೋಡಬೇಕು ಎಂದು ಸಲಹೆ ನೀಡಿದರು.

ಕ್ರೀಡೆಯಲ್ಲಿ ಗೆಲುವು ಸಾಧಿಸಬೇಕೆಂಬ ಹುಟ್ಟಾಸೆಯಿಂದ ಮಾದಕ ವಸ್ತುಗಳನ್ನು ಸೇವಿಸುವುದು, ವೈದ್ಯಕೀಯ ರಂಗ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಮಕ್ಕಳು ಹೆಚ್ಚು ದಾರಿ ತಪ್ಪುವಂತಹ ಘಟನೆಗಳನ್ನು ನೋಡಿದ್ದೇವೆ. ಇದು ತಪ್ಪಬೇಕು. ಪೋಷಕರು ಎಲ್ಲೋ ನಮ್ಮ ಮಕ್ಕಳು ಉತ್ತಮ ವ್ಯಾಸಂಗ ಮಾಡಲಿ ಎಂದು ಕಳುಹಿಸಿದ್ದೆ, ಮಕ್ಕಳು ಅದನ್ನು ಸ್ವೇಚ್ಚಾಚಾರವಾಗಿ ಬಳಸಿಕೊಳ್ಳಬಾರದು ಎಂದರು.

ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಜೊತೆಗೆ ತಮ್ಮದೇ ಆದ ಜೀವನ ಇರುತ್ತದೆ. ಕುಟುಂಬವೂ ಇರುತ್ತದೆ. ಅದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ದುಶ್ಚಟಗಳಿಗೆ ದಾಸರಾಗದೆ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಆದಿಚುಂಚನಗಿರಿ ಸಮುದಾಯ ಆರೋಗ್ಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಜಯ್ ಎಸ್.ಹೂಗಾರ್ ಮಾತನಾಡಿ, ಆರೋಗ್ಯ ವಂತರ ಪುರುಷನ ಆರೋಗ್ಯವನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದು ವೈದ್ಯನ ಮೊದಲ ಕೆಲಸವಾಗಿದೆ. ಅದೇ ರೀತಿ ಸಮಾಜದ ಪ್ರತಿಯೊಬ್ಬರಿಗೂ ಒಂದೊಂದು ಜವಾವಾಬ್ದಾರಿ ಇದ್ದುಘಿ, ಎಲ್ಲರೂ ಅದನ್ನು ಸರಿಯಾಗಿ ನಿರ್ವಹಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಿಸಿದರು.

ಮನುಷ್ಯನಿಗೆ ವಿವೇಚನೆ ಇದೆ. ಚಿಂತನೆ ಮಾಡುವ ಶಕ್ತಿ ಇದೆ. ಇದನ್ನು ಒಳ್ಳೆಯದಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಅದು ಬಿಟ್ಟು ಮಾದಕ ವ್ಯಸನಿಗಳಾಗಬಾರದು ಎಂದ ಅವರು, ಬಾಲ್ಯಾವಸ್ಥೆಯಲ್ಲಿದ್ದಾಗ ಪೋಷಕರು ನೋಡಿಕೊಳ್ಳುತ್ತಾರೆ. ಹದಿಹರೆಯದ ವಯಸ್ಸಿಗೆ ಬಂದಾಗ ದೈಹಿಕ ಮತ್ತು ಮಾನಸಿಕ, ಬೌದ್ಧಿಕ ಬೆಳವಣಿಗೆಯಾಗುತ್ತೆ. ಬೆಳವಣಿಗೆ ಹೊಂದುತ್ತಾರೆ. ಹಾಗಾಗಿ ಸ್ವಲ್ಪ ಸ್ವಾತಂತ್ರ್ಯ ನೀಡುತ್ತಾರೆ. ಇದನ್ನು ದುಶ್ಚಟಗಳ ಬಳಕೆಗೆ ಉಪಯೋಗಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಸಿ.ಪ್ರಭುದೇವ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್, ಸಂಸ್ಥೆ ಕಾರ್ಯದರ್ಶಿ ಡಿ.ಸುಜಾತ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ