ಒಂದೇ ದಿನ 13 ಮನೆಗಳಿಗೆ ಹಾನಿ । ನೆರೆ ಪೀಡಿತ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಸತತ 6 ದಿನಗಳ ಕಾಲ ಬಿಡುವಿಲ್ಲದೆ ಧಾರಾಕಾರವಾಗಿ ಸುರಿದ ಮಳೆ ಶನಿವಾರ ಅಲ್ಪ ಬಿಡುವು ನೀಡಿತ್ತು. ಆದರೆ, ಹಾನಿ ಮಾತ್ರ ಮುಂದುವರಿದಿತ್ತು. ಒಂದೇ ದಿನ 13 ಮನೆಗಳಿಗೆ ಹಾನಿಯಾಗಿದ್ದರೆ, ಬಾಬಾಬುಡನ್ ಗಿರಿ ರಸ್ತೆ ಸೇರಿದಂತೆ ಜಿಲ್ಲೆಯ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಜಿಲ್ಲೆಯ ಮಲೆನಾಡಿನಲ್ಲಿ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಭೂ ಕುಸಿತ, ಸೇತುವೆಗಳ ಹಾನಿಯನ್ನು ವೀಕ್ಷಿಸಿದರು. ಅತಿವೃಷ್ಟಿಯಿಂದ ಮಲೆನಾಡ ತಾಲೂಕು ಗಳಾದ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್. ಪುರ ತಾಲೂಕಿನಲ್ಲಿ ಭಾರಿ ಹಾನಿ ಸಂಭವಿಸಿದೆ. ಹಲವಡೆ ಗುಡ್ಡ ಕುಸಿದಿದ್ದರೆ ಇನ್ನೂ ಕೆಲವೆಡೆ ರಸ್ತೆಗಳಲ್ಲಿಯೇ ಬಿರುಕು ಕಾಣಿಸಿಕೊಂಡಿದೆ. ತೂಗು ಸೇತುವೆಗಳಿಗೂ ಭಾರಿ ಪ್ರಮಾಣದ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ಶೃಂಗೇರಿಯ ಗಾಂಧಿ ಮೈದಾನ, ನೆಮ್ಮಾರ್ ತೂಗು ಸೇತುವೆ, ಶೃಂಗೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹೀಗೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಶೀಘ್ರ ಯಾವ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿತು.
ಅತಿ ಹೆಚ್ಚು ಮಳೆ ಬೀಳುತ್ತಿದ್ದ ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ ಹಾಗೂ ಎನ್.ಆರ್.ಪುರ, ಚಿಕ್ಕಮಗಳೂರು ತಾಲೂಕು ಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮಳೆ ಬಿಡುವು ನೀಡಿತ್ತು. ಮೋಡ ಕವಿದ ವಾತಾವರಣ, ಆಗಾಗ ಒಂದೆರಡು ಬಾರಿ ತುಂತುರು ಮಳೆ ಬಂದಿದೆ. ಕಡೂರು ಹಾಗೂ ತರೀಕೆರೆ, ಅಜ್ಜಂಪುರ ತಾಲೂಕಿನಲ್ಲೂ ಮಳೆ ಇಳಿಮುಖವಾಗಿತ್ತು.ಮನೆಗಳಿಗೆ ಹಾನಿ:ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 13 ಮನೆಗಳಿಗೆ ಹಾನಿ ಸಂಭವಿಸಿದ್ದು, ಈ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 6, ಕಡೂರು 2, ಎನ್.ಆರ್.ಪುರ ತಾಲೂಕಿನಲ್ಲಿ 3 ಹಾಗೂ ಕಳಸದಲ್ಲಿ 2 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.
ಕಳಸ ತಾಲೂಕಿನ ಮಾವಿನಹೊಲ ಗ್ರಾಮದಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಎಮ್ಮೆಯೊಂದು ನೀರು ಪಾಲಾಗಿದೆ. ಈ ಎಮ್ಮೆ ದಡದಲ್ಲಿದ್ದಾಗ ಅದನ್ನು ಅಲ್ಲಿಂದ ಓಡಿಸಿ ಅದರ ಪ್ರಾಣ ಉಳಿಸಬಹುದಾಗಿತ್ತು. ಆದರೆ, ಎಮ್ಮೆ ಹಳ್ಳದ ನೀರಿನಲ್ಲಿ ಕೊಚ್ಚಿ ಕೊಂಡು ಹೋಗುತ್ತಿರುವುದನ್ನು ವಿಡಿಯೋ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಸರಾಸರಿ 17.2 ಮಿ.ಮೀ ಮಳೆ ಆಗಬೇಕಾಗಿತ್ತು. ಆದರೆ, ಕಳೆದ 24 ಗಂಟೆಗಳಲ್ಲಿ ಸರಾಸರಿ 39 ಮಿ.ಮೀ. ಮಳೆಯಾಗಿದೆ.
--- ಬಾಕ್ಸ್ ---ಚಾರ್ಮಾಡಿ ಘಾಟಿಗೆ ಅಧಿಕಾರಿಗಳ ತಂಡ ಭೇಟಿ : ರಸ್ತೆ ಪರಿಶೀಲನೆಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಭೇಟಿ ನೀಡಿ ರಸ್ತೆಯ ಸ್ಥಿತಿಗತಿ ಪರಿಶೀಲಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ತಡೆಗೋಡೆ ಕುಸಿತ, ಬಿರುಕು ಮತ್ತಿತರ ಸಮಸ್ಯೆ ಗಮನಕ್ಕೆ ಬಂದಿದ್ದು, ಅದನ್ನು ಪರಿಶೀಲಿಸಲು ಬಂದಿದ್ದೇವೆ. ಹಾಗೆಯೇ ಮಡಿಕೇರಿ, ಸಕಲೇಶಪುರ ಮಾರ್ಗದಲ್ಲಿ ಗುಡ್ಡ ಕುಸಿತದ ಹಿನ್ನಲೆಯಲ್ಲಿ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಂಡು ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲು ನಿರ್ಧಾರ ತೆಗೆದು ಕೊಳ್ಳಲಿದ್ದೇವೆ ಎಂದರು.
ಹಗಲಿನಲ್ಲಿಯೇ ಹೆಚ್ಚು ವಾಹನ ಬಿಡಲು ಕ್ರಮಕೈಗೊಳ್ಳಲಾಗುವುದು, ಈಗಾಗಲೇ ಭಾರೀ ಘನ ವಾಹನಗಳಿಗೆ ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಲು ಹಿಂದಿನಿಂದಲೂ ನಿಷೇಧವಿದೆ. ಸರ್ಕಾರಿ ಬಸ್, ಗೂಡ್ಸ್ ವಾಹನ, ಲಘು ವಾಹನಗಳಿಗೆ ಸಂಚರಿಸಲು ಅವಕಾಶವಿದೆ. ಆದರೆ, ಮತ್ತೊಮ್ಮೆ ಕೊಡಗು, ಹಾಸನ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಜನರ ಅನುಕೂಲತೆ ಮೇರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಹೊತ್ತಲ್ಲಿ ಮಳೆಯ ಹಿನ್ನಲೆಯಲ್ಲಿ ವಾಹನ ಸಂಚಾರ ನಿಷೇಧಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ, ಶಿರಾಡಿ ಘಾಟ್ ಬಂದ್ ಆದ ಹಿನ್ನಲೆಯಲ್ಲಿ ಚಾರ್ಮಾಡಿ ಮಾತ್ರ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಸಂಚಾರ ನಿಷೇಧದ ಬಗ್ಗೆ ನಿರ್ಧಾರ ಸಧ್ಯಕ್ಕೆ ಕೈಗೊಂಡಿಲ್ಲ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಮಾತನಾಡಿ, ಕಳಪೆ ಕಾಮಗಾರಿ ಆಗಿಲ್ಲ .2019 ರಲ್ಲಿ ಭೂ ಕುಸಿತದಿಂದ ಅರ್ಧ ರಸ್ತೆಯೇ ಕುಸಿದಿತ್ತು. ಅದನ್ನು ಕೆಳಗಿನಿಂದಲೇ ರಿವಿಟ್ ಮೆಂಟ್ ಮಾಡಿ ರಸ್ತೆ ಸರಿಪಡಿಸ ಲಾಗಿದೆ. ತಡೆಗೋಡೆ ಮಾಡಿ ಬಳಿಕ ಎರಡೂವರೆ ಮೀಟರ್ ಸ್ಲ್ಯಾಬ್ ಹಾಕಲಾಗಿದೆ. ಅದನ್ನು ಸಮತಟ್ಟು ಮಾಡಲು ರೋಲರ್ ನಿಂದ ಕಷ್ಟ ಸಾಧ್ಯ. ಹಾಗಾಗಿ ಸ್ಲ್ಯಾಬ್ ಜಗ್ಗಿದೆ, ಅದಕ್ಕೆ ವೆಟ್ ಮಿಕ್ಸ್ ಹಾಕಿ ಸರಿಪಡಿಸಲಾಗಿದೆ. ಬೇಸಿಗೆಯಲ್ಲಿ ಮತ್ತೊಮ್ಮೆ ಕಾಮಗಾರಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು. ಚರಂಡಿ ಕಾಮಗಾರಿ ಹಾಗೂ ಜಂಗಲ್ ಕಟ್ಟಿಂಗ್ ಬಗ್ಗೆ ವ್ಯವಸ್ಥೆ ಮಾಡಲಾಗುವುದು. ಲಘು ಹಾಗೂ ಸಾಮಾನ್ಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಈ ರಸ್ತೆ ಯೋಗ್ಯವಾಗಿದೆ ಎಂದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ, ಎಇಇ ಕಾಂಬ್ಳೆ, ಎಇ ಸಂತೋಷ್, ಮೂಡಿಗೆರೆ ಇನ್ ಸ್ಪೆಕ್ಟರ್ ಸೋಮೇಗೌಡ, ಬಣಕಲ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಇದ್ದರು. 20 ಕೆಸಿಕೆಎಂ 5ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಕೀರ್ತನಾ ಚಾರ್ಮಾಡಿ ಘಾಟ್ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ಜಯಣ್ಣ ಹಾಗೂ ಇತರೆ ಅಧಿಕಾರಿಗಳು ಇದ್ದರು.