ಪಹಲ್ಗಾಮ್ ಉಗ್ರರ ದಾಳಿಗೆ ಡಿವೈಎಫ್ಐ, ಎಸ್ಎಫ್ಐ ಆಕ್ರೋಶ

KannadaprabhaNewsNetwork | Published : Apr 24, 2025 12:06 AM

ಸಾರಾಂಶ

ನಮ್ಮ ರಾಜ್ಯದ ಮಂಜುನಾಥ್ ಹಾಗೂ ಭರತ್ ಭೂಷಣ್ ಸೇರಿದಂತೆ 28 ಜನ ಪ್ರವಾಸಿಗರನ್ನು ಬಲಿ ಪಡೆದಿರುವ ಭಯೋತ್ಪಾದಕರ ಪೈಶಾಚಿಕ ಕ್ರೌರ್ಯವನ್ನು ತೀವ್ರವಾಗಿ ಖಂಡಿಸಲಾಯಿತು.

ಹಾವೇರಿ: ಕಾಶ್ಮೀರದ ಪಹಲ್ಗಾಮ್ ಸಮೀಪದಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ 28 ಜನರನ್ನು ಬಲಿ ಪಡೆದ ಭಯೋತ್ಪಾದಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು.

ನಗರದ ಜಿ.ಎಚ್ ಕಾಲೇಜು ಎದುರು ಬುಧವಾರ ಡಿವೈಎಫ್ಐ, ಎಸ್ಎಫ್ಐ ಸಂಘಟನೆಗಳ ನೇತೃತ್ವದಲ್ಲಿ ಭಯೋತ್ಪಾದನೆ ದಾಳಿ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ನಮ್ಮ ರಾಜ್ಯದ ಮಂಜುನಾಥ್ ಹಾಗೂ ಭರತ್ ಭೂಷಣ್ ಸೇರಿದಂತೆ 28 ಜನ ಪ್ರವಾಸಿಗರನ್ನು ಬಲಿ ಪಡೆದಿರುವ ಭಯೋತ್ಪಾದಕರ ಪೈಶಾಚಿಕ ಕ್ರೌರ್ಯವನ್ನು ತೀವ್ರವಾಗಿ ಖಂಡಿಸಿದರು. ಇದರ ವಿರುದ್ಧ ಜನತೆ ಐಕ್ಯತೆಯಿಂದ ಪ್ರತಿರೋಧಿಸಬೇಕು ಎಂದರು.

ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯು ಆಘಾತಕಾರಿಯಾದುದು. ಹೃದಯವಿದ್ರಾವಕ ಘಟನೆಯಲ್ಲಿ ಮಡಿದ ಕುಟುಂಬಗಳಿಗೆ ಡಿವೈಎಫ್ಐ- ಎಸ್ಎಫ್ಐ ಸಂತಾಪಗಳನ್ನು ಸಲ್ಲಿಸುತ್ತವೆ. ಅಮಾಯಕರ ಮೇಲೆ ಹೀನ ದಾಳಿಗೈದು ಅಮೂಲ್ಯ ಜೀವಗಳನ್ನು ಕೊಲೆಗೈದ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಕಟ್ಟುನಿಟ್ಟಿನ ಕ್ರಮವನ್ನು ಕೇಂದ್ರ ಸರ್ಕಾರ ಖಾತ್ರಿಪಡಿಸಬೇಕು. ಜಮ್ಮು ಕಾಶ್ಮೀರ ಜನರ ಸಮಸ್ಯೆಗಳಿಗೆ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ರಾಷ್ಟ್ರಕ್ಕೆ ಭದ್ರತೆ ಪ್ರಮುಖವಾಗಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿಯಿದೆ ಎಂದು ಹೇಳುತ್ತಲೇಯಿದೆಯಾದರೂ ವಾಸ್ತವ ಪರಿಸ್ಥಿತಿಯಲ್ಲಿ ಅಲ್ಲಿನ ನಿವಾಸಿಗಳು, ವಲಸೆ ಕಾರ್ಮಿಕರು ಹಾಗೂ ಪ್ರವಾಸಿಗರ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಆದ್ದರಿಂದ ಕೇಂದ್ರ ಸರ್ಕಾರ ಈಗಲಾದರೂ ಜಮ್ಮು ಕಾಶ್ಮೀರದಲ್ಲಿ ಸಹಜಸ್ಥಿತಿ ನೆಲೆಸಲು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಿಂಸೆಯಿಂದ ಎಂದಿಗೂ ನಮ್ಮ ದೇಶದ ಒಗ್ಗಟ್ಟು, ಶಾಂತಿ, ಸಾಮರಸ್ಯವನ್ನು ಒಡೆದು ಹಾಕಲು ಸಾಧ್ಯವಿಲ್ಲ. ದೇಶದ ಐಕ್ಯತೆ, ಸೌಹಾರ್ದತೆಗೆ ಕಂಟಕವಾಗಿರುವ ಈ ಭಯೋತ್ಪಾದನೆ ಪಿಡುಗಿನ ವಿರುದ್ಧ ದೇಶದ ಜನತೆ ಒಟ್ಟಾಗಿ ನಿಲ್ಲುವುದು ಅಗತ್ಯವಿದೆ. ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.ಎಸ್ಎಫ್ಐ ಜಿಲ್ಲಾಧ್ಯಕ್ಷ ದುರುಗಪ್ಪ ಯಮ್ಮಿಯವರ ಮಾತನಾಡಿ, ಭಯೋತ್ಪಾದನೆಗೆ ಅಥವಾ ಅಂತಹ ಅಪರಾಧಗಳಿಗೆ ಸಹಾಯ ಮಾಡುವ ಮತ್ತು ಸಹಾಯ ಮಾಡುವ ಶಕ್ತಿಗಳಿಗೆ ಸಹಿಷ್ಣುತೆ ಇರಲು ಸಾಧ್ಯವಿಲ್ಲ. ಜನರು ಮತ್ತು ಸಮುದಾಯಗಳಲ್ಲಿ ವಿಭಾಗಗಳನ್ನು ಸೃಷ್ಟಿಸಲು ಈ ದುರಂತವನ್ನು ಬಳಸಿಕೊಳ್ಳಲು ಕೋಮು ಅಥವಾ ಮೂಲಭೂತವಾದಿ ಅಂಶಗಳ ಯಾವುದೇ ಪ್ರಯತ್ನವನ್ನು ಖಂಡಿಸುತ್ತೇವೆ ಎಂದರು.

ಶ್ರದ್ಧಾಂಜಲಿ: ಪ್ರತಿಭಟನೆಯ ಆರಂಭದಲ್ಲಿ ವಿದ್ಯಾರ್ಥಿಗಳು ಭಯೋತ್ಪಾದನೆಯಲ್ಲಿ ಮಡಿದವರಿಗೆ ಮೌನ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಭಯೋತ್ಪಾದಕರ ದುಷ್ಕೃತ್ಯವನ್ನು ಖಂಡಿಸಿ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಗದಿಗೆಯ್ಯ ಅರಾಧ್ಯಮಠ, ನಿರಂಜನ ಕುಲಕರ್ಣಿ, ಲಿಂಗರಾಜ ಬಣಕಾರ, ಮಾಲತೇಶ ಕರೆಣ್ಣನವರ, ಮಲ್ಲಪ್ಪ ಪೂಜಾರ, ಕುಮಾರ, ಅನು ಕವಲಿ, ಅನಿತಾ ದೇಸಾಯಿ, ಗಂಗಾ ಯಲ್ಲಾಪೂರ, ಗಾಯತ್ರಿ ಹೊಂಬಳಿ, ಮೊನಿಕಾ ಬಸೆಗಣ್ಣಿ, ಧನ್ಯಶ್ರಿ ಸೇರಿದಂತೆ ಇತರರು ಇದ್ದರು.

Share this article