ಕನ್ನಡಪ್ರಭ ವಾರ್ತೆ ನವದೆಹಲಿಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಪಾತ್ರವಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ಸಚಿವರಿಗೆ ಕ್ಲೀನ್ ಚಿಟ್ ನೀಡಿದೆ.2016ರ ಜು.17ರಂದು ಡಿವೈಎಸ್ಪಿ ಗಣಪತಿ ಅವರು ಮಡಿಕೇರಿಯ ಲಾಡ್ಜ್ ವೊಂದರಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು. ವಿಡಿಯೋದಲ್ಲಿ ಅಂದು ಗೃಹ ಸಚಿವರಾಗಿದ್ದ ಜಾರ್ಜ್ ಹೆಸರು ಪ್ರಸ್ತಾಪಿಸಿದ್ದರು. ತೀವ್ರ ವಿವಾದ ಹುಟ್ಟಿಸಿದ್ದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. 2019ರಲ್ಲಿ ತನಿಖೆ ನಡೆಸಿದ್ದ ಸಿಬಿಐ, ಪ್ರಕರಣದಲ್ಲಿ ಜಾರ್ಜ್ ಪಾತ್ರವಿಲ್ಲ ಎಂದು ‘ಬಿ’ ರಿಪೋರ್ಟ್ ನೀಡಿತ್ತು. ಈ ತನಿಖಾ ವರದಿಯ ಆಧಾರದಲ್ಲಿ ಕರ್ನಾಟಕ ಹೈಕೋರ್ಟ್ ಕೂಡ ಜಾರ್ಜ್ ಅವರನ್ನು ಆರೋಪಮುಕ್ತಗೊಳಿಸಿತ್ತು.
ಈ ನೆಲದ ಕಾನೂನಿನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯ ಯಾವತ್ತೂ ಸತ್ಯದ ಪರವಾಗಿರುತ್ತದೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ನನ್ನ ವಿರುದ್ಧ ಮಾಡಿದ್ದ ಸುಳ್ಳು ಆರೋಪಗಳಿಂದ ನನಗೆ ಮುಕ್ತಿ ಸಿಕ್ಕಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.