ಆರೋಗ್ಯ ರಕ್ಷಣೆಗೆ ತರಕಾರಿ, ಹಣ್ಣುಹಂಪಲು ಸೇವಿಸಿ

KannadaprabhaNewsNetwork | Published : Nov 11, 2024 1:13 AM

ಸಾರಾಂಶ

ಕ್ರೀಡೆಗಳಿಂದ ತಮ್ಮ ಭವಿಷ್ಯಕ್ಕೆ ಅನುಕೂಲವಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗೆ ಸರ್ಕಾರಿ ಉದ್ಯೋಗದಲ್ಲಿ ಶೇ.೨ ಮೀಸಲಾತಿ ಇರುತ್ತದೆ. ಆರೋಗ್ಯಕ್ಕೆ ಗಮನ ನೀಡಿ. ವಿದ್ಯಾಭ್ಯಾಸಕ್ಕೂ ಅನುಕೂಲವಾಗಲಿದೆ. ಎಷ್ಟು ಬಾರಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೇವೆಂಬುದು ಮುಖ್ಯವಲ್ಲ. ಗುರಿ ಸಾಧಿಸುವುದು ಬಹು ಮುಖ್ಯ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ವಿದ್ಯಾರ್ಥಿಗಳು ಬಾಲ್ಯದಿಂದಲೇ ತರಕಾರಿ, ಹಣ್ಣುಹಂಪಲು, ಒಣಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಮಾಂಸಹಾರ ಸೇವನೆ ಮಾಡುವವರು ಇತಿಮಿತಿಯಲ್ಲಿ ಮಾಂಸಹಾರ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹಕಾರಿಯಾಗುತ್ತದೆಯೆಂದು ನವೀನ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಎ.ಎನ್.ಮುರಳಿ ಕರೆಯಿತ್ತರು.

ನಗರದ ಝಾನ್ಸಿರಾಣಿಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡೋತ್ಸವ ೨೦೨೪ರ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಗುರಿ ಸಾಧಿಸುವುದು ಮುಖ್ಯ

ಒಬ್ಬ ವಿದ್ಯಾರ್ಥಿ ಐ.ಎ.ಎಸ್ ಅಥವಾ ಐ.ಪಿ.ಎಸ್ ಹುದ್ದೆಯನ್ನು ಪಡೆಯಬೇಕಾದರೆ ೨ ರಿಂದ ೫ ಬಾರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಹುದ್ದೆಯನ್ನು ಪಡೆದುಕೊಳ್ಳುತ್ತಾನೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆಯಬೇಕಾದರೆ ಹಲವಾರು ಬಾರಿ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಬೇಕಾಗುತ್ತದೆ. ಎಷ್ಟು ಬಾರಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೇವೆಂಬುದು ಮುಖ್ಯವಲ್ಲ. ಗುರಿ ಸಾಧಿಸುವುದು ಬಹು ಮುಖ್ಯವೆಂದರು.

ಸರ್ಕಾರಿ ಬಾಲಕರ ಕಾಲೇಜಿನ ದೈಹಿಕ ಶಿಕ್ಷಕ ಎಂ.ಪ್ರವೀಣ್ ಮಾತನಾಡಿ, ದೈನಂದಿನ ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಯೆಂಬುದು ಅತ್ಯಗತ್ಯವಾಗಿದೆಯಾದರೂ ಆಟವಾಡುವ ಸಮಯದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಕ್ರೀಡೆಗಳಲ್ಲಿ ಭಾಗವಹಿಸಲು ತೊಂದರೆಯಾಗುತ್ತದೆ. ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆಯೆಂದರು.

ಉದ್ಯೋಗದಲ್ಲಿ ಮೀಸಲು

ಬಿ.ಇ.ಒ ಕಛೇರಿಯ ಟಿ.ಪಿ.ಒ ಫಕೃಸಾಬ್ ಮಾತನಾಡಿ, ಕ್ರೀಡೆಗಳಿಂದ ತಮ್ಮ ಭವಿಷ್ಯಕ್ಕೆ ಅನುಕೂಲವಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗೆ ಸರ್ಕಾರಿ ಉದ್ಯೋಗದಲ್ಲಿ ಶೇ.೨ ಮೀಸಲಾತಿ ಇರುತ್ತದೆ. ಆರೋಗ್ಯಕ್ಕೆ ಗಮನ ನೀಡಿ. ವಿದ್ಯಾಭ್ಯಾಸಕ್ಕೂ ಅನುಕೂಲವಾಗಲಿದೆಯೆಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರೀಡಾಪಟು ಆರ್.ಡಿ.ಮಂಜುನಾಥ, ಹಿರಿಯ ಕ್ರೀಡಾಪಟು ಚೌಡಪ್ಪ, ಮಾತನಾಡಿದರು. ನವೀನ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವಿ.ಎಂ.ರಾಮಲಕ್ಷ್ಮಮ್ಮ, ಮುಖ್ಯಶಿಕ್ಷಕ ಎಸ್.ಶ್ರೀನಿವಾಸ, ದೈಹಿಕ ಶಿಕ್ಷಕ ಕೋದಂಡರಾಮಯ್ಯ ಉಪಸ್ಥಿತರಿದ್ದರು.

Share this article