ಕೃಷಿ, ಕೃಷಿ ಅಧಾರಿತ ಉಪಕಸಬುಗಳು ಕೈಗೊಳ್ಳುವುದರೊಂದಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು
ಗದಗ: ಮಹಿಳೆಯರು ಹೈನುಗಾರಿಕೆಯನ್ನು ಉದ್ಯೋಗವನ್ನಾಗಿ ಮಾಡಿಕೊಂಡು ಆ ಮೂಲಕ ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದಾಗಿದೆ ಎಂದು ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ರಾಮಚಂದ್ರ ಬಿ. ಹೇಳಿದರು.
ಅವರು ನಗರದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ ಹಾಗೂ ಔಟ್ರಿಚ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಔಟ್ರಿಚ್ ಸಂಸ್ಥೆಯ ವಿಸ್ತರಣಾ ಕಾರ್ಯಕರ್ತರಿಗೆ ವೈಜ್ಞಾನಿಕ ಹೈನುಗಾರಿಕೆ 2 ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ, ಕೃಷಿ ಅಧಾರಿತ ಉಪಕಸಬುಗಳು ಕೈಗೊಳ್ಳುವುದರೊಂದಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಆಧುನಿಕತೆಯ ಇಂದಿನ ದಿನಗಳಲ್ಲಿ ಹೈನುಗಾರಿಕೆಗೆ ಉತ್ತಮ ಅವಕಾಶಗಳಿವೆ. ಸ್ವಲ್ಪ ಕಷ್ಟಪಟ್ಟರೆ ಹೆಚ್ಚಿನ ಲಾಭ ಪಡೆಯಬಹುದು ಎಂದರು.
ಡಾ. ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ ಅವರು, ಆಕಳು ಮತ್ತು ಎಮ್ಮೆ ತಳಿಯ ಮಹತ್ವ, ಡಾ. ಮೋಹನ ಪಿ. ಪಶು ಕೃತಕ ಗರ್ಭಧಾರಣೆ, ಡಾ. ಶಿವಾನಂದ ಗೌಡರ ಮೇವು ಉತ್ಪಾದನೆ ಮತ್ತು ನಿರ್ವಹಣೆ, ಡಾ. ಅರುಣ ಸೋಮಗಂಧ ಆಕಳು ಮತ್ತು ಎಮ್ಮೆಗಳ ರೋಗಗಳು ಹಾಗೂ ಹತೋಟಿ, ಡಾ. ಜಗನ್ನಾಥರಾವ್ ಹಾಲು ಮತ್ತು ಹಾಲು ಉತ್ಪನ್ನಗಳು ವಿಷಯವಾಗಿ ಪರಿಣಾಮಕಾರಿ ಉಪನ್ಯಾಸ ನೀಡಿದರು.
ಈ ವೇಳೆ ಔಟ್ರಿಚ್ ಸಂಸ್ಥೆಯ ಹಿರಿಯ ಕಾರ್ಯಕ್ರಮ ಸಂಯೋಜಕ ಗೋವಿಂದಯ್ಯ ಬಿ., ಕಾರ್ಯಕ್ರಮ ಸಂಯೋಜಕ ಲೋಹಿತ್ ಕಾಸರ, ರಿಲಯನ್ಸ್ ಫೌಂಡೇಶನ್ನ ಜೀರೋಂಪಿಯೋ ಉಪಸ್ಥಿತರಿದ್ದರು. ಎರಡು ದಿನಗಳ ವರೆಗೆ ನಡೆದ ತರಬೇತಿ ಶಿಬಿರದಲ್ಲಿ ಔಟ್ರಿಚ್ ಸಂಸ್ಥೆಯ ವಿಸ್ತರಣಾ ಮಹಿಳಾ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಹಲವಾರು ವಿಷಯಗಳನ್ನು ತಿಳಿದುಕೊಂಡರು ಹಾಗೂ ತಜ್ಞರೊಂದಿಗೆ ಸಂವಾದ ನಡೆಸಿ ತಮ್ಮ ಜ್ಞಾನ ಹೆಚ್ಚಿಸಿಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.