24 ಫಲಾನುಭವಿಗಳಿಗೆ ಬೈರವಿ ಪಂಪ್ಸ್ ಕಂಪನಿಯಿಂದ ಪಂಪ್ ಮೋಟಾರ್ ಸಾಮಗ್ರಿ
ಸಮಾಜದಲ್ಲಿರುವ ಎಲ್ಲಾ ಸಮುದಾಯದವರ ಅಭ್ಯದಯವಾದರೆ ಮಾತ್ರ ಸರ್ಕಾರದ ಆಶಯ ಈಡೇರುತ್ತದೆ. ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಿಂದ ರೈತರ ಆರ್ಥಿಕ ಸಬಲೀಕರಣವಾಗುತ್ತದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 2021-22 ಮತ್ತು 2022-23ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಉಳಿದಿರುವ 24 ಫಲಾನುಭವಿಗಳಿಗೆ ಬೈರವಿ ಪಂಪ್ಸ್ ಪ್ರೈವೇಟ್ ಲಿ. ಏಜೆನ್ಸಿಯವರು ನೀಡಿದ ಪಂಪ್ ಮೋಟಾರ್ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.ಜನರ ಕಲ್ಯಾಣವಾದರೆ ಸರ್ಕಾರದ ಕಲ್ಯಾಣವಾದಂತೆ. ಗಂಗಾ ಕಲ್ಯಾಣ ಯೋಜನೆಯಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬಯಲು ಸೀಮೆಯ ಈ ಭಾಗದ ರೈತರು ಮಳೆಯನ್ನೇ ಆಶ್ರಯಿಸಿ ಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್ ಅವಶ್ಯಕತೆ ಹೆಚ್ಚಾಗಿದ್ದರಿಂದ ಮಹರ್ಷಿ ವಾಲ್ಮೀಕಿ ನಿಗಮದಿಂದ ಕೊರೆದ ಬೋರ್ವೆಲ್ಗಳಿಗೆ ಮೋಟಾರ್ ಪಂಪ್ ವಿತರಿಸಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಂಡು ನೀರಾವರಿಯನ್ನಾಗಿ ಪರಿವರ್ತಿಸಿಕೊಂಡು ವಾಣಿಜ್ಯ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ ಎಂದರು.
ಕೇಬಲ್ ವೈರ್ ನೀಡಲು ಸೂಚನೆ
2019-20ನೇ ಸಾಲಿನಲ್ಲಿ ಮಂಜೂರಾದ ಆಂಬೇಡ್ಕರ್ ಹಾಗೂ ಆದಿಜಾಂಭವ ಅಭಿವೃದ್ಧಿ ನಿಗಮದ ವತಿಯಿಂದ ಕೊರೆಯಲಾದ 16 ಬೋರ್ವೆಲ್ಗಳಿಗೆ ಮಾರುತಿ ಏಜೆನ್ಸಿಯವರು ಮೋಟಾರ್ ಪಂಪ್ ಮತ್ತು ಪೈಪ್ ಸೇರಿದಂತೆ ಮತ್ತಿತರೆ ಸಾಮಾಗ್ರಿಗಳನ್ನು ಮಾತ್ರ ವಿತರಿಸಲಾಗಿದ್ದು ಕೇಬಲ್ ವೈರ್ ನೀಡದೇ ಇರುವುದರಿಂದ ಕೊಳವೆಬಾವಿಗೆ ಪಂಪ್ ಮೋಟಾರ್ ಅಳವಡಿಸಲು ಕೇಬಲ್ ವೈರ್ ಕೊಡದೇ ಇರುವುದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಸಂಬಂಧಪಟ್ಟ ನಿಗಮದ ಅಧಿಕಾರಿಗಳು ಈ ಬಗ್ಗೆ ಏಜೆನ್ಸಿ ಗಮನಕ್ಕೆ ತಂದು ಈ ಕೂಡಲೇ ಆಯ್ಕೆಯಾದ ಫಲಾನುಭವಿಗಳಿಗೆ ಕೇಬಲ್ ವೈರ್ ವಿತರಣೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.