ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಸಬಲೀಕರಣ: ಶಾಸಕ ಟಿ.ಡಿ ರಾಜೇಗೌಡ

KannadaprabhaNewsNetwork |  
Published : Jan 22, 2024, 02:15 AM IST
೨೧ಬಿಹೆಚ್‌ಆರ್ ೧: ಬಾಳೆಹೊನ್ನೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಪ್ರಕಾಶ್‌ರಾವ್, ದಿಲೀಪ್‌ಕುಮಾರ್, ಮಧುರಾ, ಶ್ರೀಮೂರ್ತಿ ಶೆಟ್ಟಿ, ಮಧುಸೂದನ್, ಮೋಹನ್ ಇದ್ದರು. | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯ ಧಾರ್ಮಿಕ ಕಾರ್ಯಕ್ರಮವನ್ನು ಶಾಸಕ ಉದ್ಘಾಟಿಸಿದರು. ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಪುರುಷರೊಂದಿಗೆ ಸರಿಸಮಾನರಾಗಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯಲ್ಲಿ ಸದಸ್ಯರಾಗುವ ಮೂಲಕ ಮಹಿಳೆಯರು ಇಂದು ಬ್ಯಾಂಕ್ ವ್ಯವಹಾರ ಹಾಗೂ ಇನ್ನಿತರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆರ್ಥಿಕ ಸಬಲೀಕರಣ ಸಾಧಿಸುತ್ತಿದ್ದಾರೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಪಟ್ಟಣದ ನಾರಾಯಣ ಗುರು ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆ ಬಿ.ಕಣಬೂರು ಮತ್ತು ಬಾಳೆಹೊನ್ನೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳು ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಪುರುಷರೊಂದಿಗೆ ಸರಿಸಮಾನರಾಗಿ ವ್ಯವಹಾರ ನಡೆಸುತ್ತಿದ್ದಾರೆ. ಮಹಿಳೆಯರಿಂದ ಕ್ರಾಂತಿಕಾರಕ ಬದಲಾವಣೆಯಾಗಿದ್ದು, ಕೃಷಿ ವ್ಯವಸಾಯ, ಆರೋಗ್ಯ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಜಾಗೃತಿಗೊಳ್ಳುತ್ತಿದ್ದಾರೆ, ಆರ್ಥಿಕ ವ್ಯವಹಾರದ ಅರಿವು ಇಲ್ಲದ ಮಹಿಳೆಯರು ಇಂದು ಆರ್ಥಿಕ ಸಬಲೀಕರಣ ಸಾಧಿಸಿದ್ದಾರೆ. ಸಂಘದಲ್ಲಿ ತೊಡಗಿಸಿಕೊಂಡ ಹಿನ್ನೆಲೆ ಬ್ಯಾಂಕ್, ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದು ಸ್ವಉದ್ಯೋಗ ಮಾಡಿಕೊಂಡಿದ್ದಾರೆ. ಪರಿಸರ ಸಂರಕ್ಷಣೆ, ಧಾರ್ಮಿಕ ಕಾರ್ಯಕ್ರಮದಿಂದ ಸಹಬಾಳ್ವೆ ಸಾಮರಸ್ಯ ಮೂಡಲು ಸಹಕಾರಿಯಾಗಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ, ರಾಜ್ಯದಲ್ಲಿ 20 ಸಾವಿರ ಹಳ್ಳಿಗಳಲ್ಲಿ 6.5 ಲಕ್ಷ ಸಂಘಗಳಿದ್ದು 54 ಲಕ್ಷ ಫಲಾನುಭವಿಗಳು ಯೋಜನೆಗೆ ಒಳಪಟ್ಟಿದ್ದಾರೆ. ಸದಸ್ಯರು ನೀಡಿದ ಶುಲ್ಕ ಇಂದು ₹3 ಸಾವಿರ ಕೋಟಿ ಠೇವಣಿಯಾಗಿದೆ. ಬ್ಯಾಂಕಿನಿಂದ ₹1ಲಕ್ಷ ಕೋಟಿ ಪ್ರಗತಿನಿಧಿ ಪಡೆದು ಸಾಲವನ್ನು ನೀಡಲಾಗುತ್ತಿದೆ. ಧಾರ್ಮಿಕ ಸಭೆ ನಡೆಸುವುದರಿಂದ ಎಲ್ಲರೂ ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಇಂದು ಮನುಷ್ಯನಲ್ಲಿ ಮಾನಸಿಕ ಆರೋಗ್ಯ ಸ್ಥಿತಿ ಸರಿ ಇಲ್ಲದೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗಳು ನಡೆಯುತ್ತಿದೆ. ಮಿತಿಮೀರಿದ ಭ್ರಷ್ಟಾಚಾರ, ಅತ್ಯಾಚಾರ ನಡೆಯುತ್ತಿದ್ದು ಈ ಬಗ್ಗೆ ಅರಿತುಕೊಳ್ಳಬೇಕಿದೆ. ಭಾರತದಲ್ಲಿನ ಒಂದೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯತೆಯಿದ್ದು, ಸಾಂಪ್ರದಾಯ ಸಂಸ್ಕೃತಿ ದೇಶದ ಜೀವನಾಡಿಯಾಗಿದೆ ಎಂದರು.

ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಧಾರ್ಮಿಕ ವಿಚಾರಗಳೊಂದಿಗೆ ಕಾನೂನಿನ ಅರಿವನ್ನು ತಿಳಿದುಕೊಂಡಿರಬೇಕು. ತಂತ್ರಜ್ಞಾನದ ಭರಾಟೆಯಲ್ಲಿ ದೇಶದಲ್ಲಿ ಮೋಸ ಮಾಡುವ ಜಾಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಪರಿಚಿತರು ದೂರವಾಣಿ ಕರೆ ಮಾಡಿ ದಾಖಲೆ, ಬ್ಯಾಂಕ್ ಮಾಹಿತಿ ಕೇಳಿದರೆ ನೀಡಬಾರದು ಹಾಗೂ ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂದರು.

ಉಪನ್ಯಾಸಕಿ ಮಧುರಾ ಮಂಜುನಾಥ್, ತಾಲೂಕು ಯೋಜನಾಧಿಕಾರಿ ಶ್ರೀಮೂರ್ತಿ ಶೆಟ್ಟಿ, ಗ್ರಾಪಂ ಸದಸ್ಯ ಬಿ.ಕೆ.ಮಧುಸೂದನ್, ವಲಯ ಮೇಲ್ವಿಚಾರಕ ಮೋಹನ್, ಪ್ರಮುಖರಾದ ಕ್ಯಾಪ್ಟನ್ ಪ್ರದೀಪ್, ರಮೇಶ್ ಭಟ್, ದಿನೇಶ್ ಹೆಗ್ಡೆ, ಬಿ.ಸಿ.ಸಂತೋಷ್ ಕುಮಾರ್, ಕುಮಾರಚಂದ್ರ ನಾಯಕ್, ಶಕುಂತಲಾ, ಕಾರ್ತಿಕ್ ಕಾರ್‌ಗದ್ದೆ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ