- ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ ಅಭಿಮತಫೋಟೋ- 3ಎಂವೈಎಸ್ 2- ಮೈಸೂರಿನ ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವನ್ನು ಹೆಚ್ಚುವರಿ ಎಸ್ಪಿ ಡಾ.ಬಿ.ಎಸ್. ನಂದಿನಿ ಉದ್ಘಾಟಿಸಿದರು. ಪ್ರಾಂಶುಪಾಲರಾದ ಪ್ರೊ. ಸಾಯಿನಾಥ ಮಲ್ಲಿಗೆಮಾಡು, ನಯನಕುಮಾರಿ, ಉಪನ್ಯಾಸಕಿಯರಾದ ಸಿ. ಜಯಲಕ್ಷ್ಮಿ, ಶಾಯಿಸ್ತಾ ಸಿರಾಜ್, ಮೆಹರ್ ಬಾನು ಶೇಖ್ ಮೊದಲಾದವರು ಇದ್ದರು.
---ಕನ್ನಡಪ್ರಭ ವಾರ್ತೆ ಮೈಸೂರು
ಶೈಕ್ಷಣಿಕ ಪ್ರಗತಿಯೊಂದಿಗೆ ಆರ್ಥಿಕ ಬೆಳವಣಿಗೆಯೂ ಕೂಡ ಮುಖ್ಯ ಎಂದು ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ ಹೇಳಿದರು.ನಗರದ ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯೊಂದಿಗೆ ಮಾನವೀಯ ಮೌಲ್ಯಗಳು ಕೂಡ ಅತೀ ಮುಖ್ಯ. ಮಾನವೀಯತೆ ಇಲ್ಲದ ವಿದ್ಯೆಯು ಮೌಢ್ಯಕ್ಕೆ ಸಮ. ಆತ್ಮಸಾಕ್ಷಾತ್ಕಾರವೇ ಶಿಕ್ಷಣ. ಒಂದು ಹೆಣ್ಣು ಕಲಿತರೆ ಶಾಲೆಯೇ ತೆರೆದಂತೆ ಎಂಬ ನಾಣ್ಣುಡಿ ಕಲಿಕೆಯ ಮಹತ್ವವನ್ನು ತಿಳಿಸುತ್ತದೆ ಎಂದರು.
ಕೇವಲ ವಿದ್ಯೆಯೊಂದಿದ್ದರೆ ಸಾಲದು, ವಿದ್ಯೆ ಜೊತೆಗೆ ಸರಳತೆ, ಪರೋಪಕಾರವೂ ಮುಖ್ಯ. ಆಸೆಗಳು ಕಡಿಮೆ ಆದಂತೆ ಲೋಭತೆ ಕಡಿಮೆ ಆಗುತ್ತದೆ. ವಿದ್ಯೆಯ ಹಂಬಲಕ್ಕೆ ಮೊಬೈಲ್, ಟಿವಿ, ಮಾಧ್ಯಮಗಳಿಂದ ದೂರವಿರುವುದು ಅಗತ್ಯ. ಪೋಷಕರ ನಂಬಿಕೆ ಉಳಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಆದ್ಯ ಕರ್ತ್ಯವ್ಯ. ಆಧುನೀಕರಣ, ನಗರೀಕರಣದಿಂದ ಆಗುವ ದುಷ್ಟಪರಿಣಾಮದ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಿದರು.ವಿಶೇಷ ಅತಿಥಿಯಾಗಿದ್ದ ಡಿಡಿಪಿಯು ಎಂ. ಮರಿಸ್ವಾಮಿ ಮಾತನಾಡಿ, ಪಿಯುಸಿ ಹಂತ ವಿದ್ಯಾರ್ಥಿಗಳ ಅತ್ಯುನ್ನತ ಉತ್ತಮ ಹಂತ. ಕಲಿಕೆಯ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಸ್ವದೇಶಿ ಹಾಗೂ ವಿದೇಶಿ ಕಲಿಕೆ ವ್ಯತ್ಯಾಸವನ್ನು ತಿಳಿಸಿದರು. ವಿದೇಶದಲ್ಲಿ ಶಿಕ್ಷಣದ ಮೌಲ್ಯದ ಜೊತೆಗೆ ಮಾನವೀಯ ಮೌಲ್ಯ, ದೇಶಪ್ರೇಮ, ವಿದ್ಯಾರ್ಥಿಗಳ ಕೊಡುಗೆ, ಪಾತ್ರಗಳ ಬಗ್ಗೆ ತಿಳಿಸಿಕೊಡುತ್ತಾರೆ. ನಮ್ಮ ದೇಶದಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರದ ಮೌಲ್ಯವನ್ನು ತಿಳಿಸಿಕೊಡಲಾಗುತ್ತದೆ. ಗುರುಹಿರಿಯರ ಗೌರವವನ್ನು ನಮ್ಮ ದೇಶದಲ್ಲಿ ವಿದ್ಯೆಯೊಂದಿಗೆ ಕಲಿಸಲಾಗುತ್ತದೆ. ಇಂದಿನ ಯುಗ ಮಾಧ್ಯಮದ ಯುಗ. ಮಾಧ್ಯಮಗಳ ಬಳಕೆಯ ದುಷ್ಪರಿಣಾಮ ತಿಳಿಸಿ, ದೇಶಪ್ರೇಮ, ದೇಶಕ್ಕಾಗಿ ಹೊರಾಡಿದ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ಒದುವ ಬಗ್ಗೆ ತಿಳಿಸಿದರು.ಎಂಎಂಕೆ ಮತ್ತು ಎಸ್.ಡಿ.ಎಂ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಾಯಿನಾಥ್ಮಲ್ಲಿಗೆ ಮಾಡು ಮಾತನಾಡಿ, ಜೀವನದ ತೊಡಕು ನಿವಾರಣೆಗೆ ಶಿಕ್ಷಣ ಅವಶ್ಯಕ. ಪೋಷಕರ ಪಾತ್ರ ಹಿರಿದಾದಾಗ ತೊಡಕು ಇರಲು ಸಾಧ್ಯವೇ ಇರುವುದಿಲ್ಲ. ಗುರಿ ತಲುಪಲು ಹಲವು ಮಾರ್ಗಗಳಿವೆ. ಅವಕಾಶಗಳನ್ನು ಹುಡುಕುವುದು ತಡವಾದರೂ, ತಾಳ್ಮೆಗೆಡದೆ ಮುಂದುವರೆದಲ್ಲಿ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ನಯನ ಕುಮಾರಿ ಕಾಲೇಜಿನ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಅವಕಾಶಗಳ ಸದ್ಭಳಕೆ ಮಾಡಿಕೊಂಡು ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ, ಅವರಿಗೆ ಅಭಿನಂದನೆಗಳು. ಪರೀಕ್ಷೆಗಳ ಒತ್ತಡದ ನಡುವೆ ಕಾರ್ಯಕ್ರಮದಲ್ಲೂ ಭಾಗಿಯಾಗಿರುವುದು ಬಹಳ ಸಂತೋಷ ತಂದಿದೆ ಎಂದರು.ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸಿ. ಜಯಲಕ್ಷ್ಮಿ ಇದ್ದರು. ವಿದ್ಯಾರ್ಥಿನಿ ಅಮೂಲ್ಯ ಭಾಸ್ಕರ್, ಲಕ್ಷ್ಯ ಹೆಗ್ಡೆ ಪ್ರಾರ್ಥಿಸಿದರು. ಅಧಿತಿ ಭಾರದ್ವಾಜ್ ಸ್ವಾಗತಿಸಿದರು, ಸುಶ್ಮಿತಾ ಶುಭ ಸಂದೇಶ ವಾಚಿಸಿದರು.