ಕುರುಗೋಡು: ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಿ ಕನ್ನಡಾಭಿಮಾನ ಮೆರೆಯಬೇಕು ಅನ್ಯಭಾಷೆಗಳನ್ನು ಗೌರವಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.
ಮಕ್ಕಳಿಗೆ ಮೊಬೈಲ್ ಕೊಡಬೇಡಿ. ಪೋಷಕರು ಟಿವಿ ನೋಡಬೇಡಿ; ಬದಲಾಗಿ ಮಕ್ಕಳ ಎದುರು ವೃತ್ತಪತ್ರಿಕೆ, ಬೈಬಲ್, ಕುರಾನ್, ರಾಮಾಯಣ, ಮಹಾಭಾರತದಂತಹ ಪುಸ್ತಕಗಳನ್ನು ಓದುವ ಮೂಲಕ ಅವರಲ್ಲಿ ಓದುವ ಹವ್ಯಾಸ ಬೆಳೆಸಿ ಎಂದು ಸಲಹೆ ನೀಡಿದರು.
ತೃತೀಯಲಿಂಗಿಯೊಬ್ಬರನ್ನು ಅಕಾಡೆಮಿಗೆ ಅಧ್ಯಕ್ಷೆಯನ್ನಾಗಿ ಮಾಡಿ ಗೌರವಿಸಿದ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೊದಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಕೃತಿಯ ನಿಯಮದಂತೆ ಹೆಣ್ಣು ಗಂಡಾಗಿ, ಗಂಡು ಹೆಣ್ಣಾಗಿ ಪರಿವರ್ತನೆಗೊಂಡಿರುತ್ತಾರೆ. ಅವರನ್ನು ಗೌರವಿಸಿ, ಪ್ರೀತಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.ಪ್ರಬುದ್ಧ ಫೌಂಡೇಶನ್ ಅಧ್ಯಕ್ಷ ಗಾದಿ ಗೆಣಿಕೆಹಾಳು ಮಾತನಾಡಿ, ಅಂಬೇಡ್ಕರ್ ವಿಚಾರಧಾರೆಗಳನ್ನು ಮನ-ಮನೆಗಳನ್ನು ತಲುಪಿಸುವ ಉದ್ದೇಶ ದಿಂದ ಶಾಲಾ, ಕಾಲೇಜಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಬುದ್ಧ ಫೌಂಡೇಶನ್ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುವುದರಿಂದ ಅಗತ್ಯವಿರುವ ವಸ್ತುಗಳನ್ನು ಕೊಡಿಸುವವರೆಗೆ ಸೇವೆ ಮಾಡುತ್ತಿದೆ. ಮಕ್ಕಳಲ್ಲಿ ಸುಪ್ತವಾಗಿರುವ ಕಲೆಯನ್ನು ಪ್ರೋತ್ಸಾಹಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ನರಸಪ್ಪ ತಹಶೀಲ್ದಾರ್, ಪಿಎಸ್ಐ ಸುಪ್ರಿತ್, ಸಿರುಗುಪ್ಪ ರಕ್ತ ಭಂಡಾರದ ಲೋಕೇಶ್, ಗಂಗಾಧರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ವಾಗೀಶ್, ಪತ್ರಕರ್ತರಾದ ಕೆ.ಭೀಮಣ್ಣ, ಪಂಪನಗೌಡ, ನಿರೂಪಕಿ ರೇಖಾ, ಸುಂಕಪ್ಪ ದೇಸಾಯಿ, ಗುತ್ತಿಗನೂರು ಶೇಖರ್, ಗಿರಿಯಪ್ಪ, ದೇವಪುತ್ರ, ಹಂಪೆ ಬಸವರಾಜ, ಹುಲೆಪ್ಪ, ಮಲ್ಲಿಕಾರ್ಜುನ ಇದ್ದರು.