ಸಿದ್ದಾಪುರ: ಕಾಂಗ್ರೆಸ್ ನೀಡಿದ ಕೊಡುಗೆ ಜನತೆಗೆ ತಿಳಿಸಿದರೆ ಹೊಸ ಪ್ರಚಾರದ ಅವಶ್ಯಕತೆ ಇರುವುದಿಲ್ಲ, ಪಕ್ಷದ ಬಗ್ಗೆ ಯುವಕರಲ್ಲಿ ತಿಳಿವಳಿಕೆ ನೀಡಿದಾಗ ಪಕ್ಷ ಬಲಗೊಳ್ಳುತ್ತದೆ. ಸಂಘಟನೆಯಾಗುತ್ತದೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಜಿ.ಟಿ. ನಾಯ್ಕ ಮಣಕಿನಕುಳಿ ಹೇಳಿದರು.
ಜಿಪಂ ಮಾಜಿ ಸದಸ್ಯ ವಿ.ಎನ್. ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ, ಯುವ ಕಾಂಗ್ರೆಸ್ಗೆ ಆಯ್ಕೆಯಾದ ಯುವ ನಾಯಕರಿಗೆ ಕಾಂಗ್ರೆಸ್ ಇತಿಹಾಸ, ಕಾಂಗ್ರೆಸ್ನ ಕೊಡುಗೆಗಳ ಬಗ್ಗೆ ಪರಿಣತ ನಾಯಕರಿಂದ ತಿಳಿವಳಿಕೆ ತರಬೇತಿ ಆಯೋಜನೆ ಮಾಡಬೇಕು. ಪಕ್ಷದ ಬಗ್ಗೆ ತಿಳಿವಳಿಕೆ ಇದ್ದರೆ ಮಾತನಾಡಲು ಉತ್ಸಾಹ ಬರುತ್ತದೆ. ನಾಯಕನಿಗೆ ಭಾಷಣ ಕಲೆ ಅತಿ ಮುಖ್ಯ. ಪಕ್ಷದ ಕೊಡುಗೆಯ ಬಗ್ಗೆ ತಿಳಿದುಕೊಂಡಾಗ ಧೈರ್ಯದಿಂದ ಮಾತನಾಡಬಹುದು. ಹಾಗಾಗಿ ಭಾಷಣದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು.
ಹಿರಿಯ ವಕೀಲ ಎನ್.ಡಿ. ನಾಯ್ಕ್ ಐಸೂರ್ ಮಾತನಾಡಿ, ಜೀವನದಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ನಾಯಕರಾಗಿ ಹೊರಹೊಮ್ಮಿ ಎಂದರು.ದೊಡ್ಮನೆ ಗ್ರಾಪಂ ಸದಸ್ಯ ಬೀರಾ ಗೌಡ, ಜಿಪಂ ಮಾಜಿ ಸದಸ್ಯೆ ಇಂದಿರಾ ನಾಯ್ಕ, ಪ್ರಮುಖರಾದ ಸಿ.ಆರ್. ನಾಯ್ಕ, ಎನ್.ಎಸ್.ಯು.ಐ. ಜಿಲ್ಲಾ ಅಧ್ಯಕ್ಷ ವಿಶ್ವ ಗೌಡ ಮಾತನಾಡಿದರು. ವಾಜಗೋಡು ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ಎಸ್.ಎಂ. ಭಟ್ಟ, ಸದಸ್ಯ ಸುರೇಶ್ ನಾಯ್ಕ, ಸದಸ್ಯೆ ಲಲಿತ ಹಸ್ಲರ್ ಮತ್ತಿತರರು ಉಪಸ್ಥಿತರಿದ್ದರು.
ವಾಜಗೋಡು ಪಂಚಾಯಿತಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಐ.ಕೆ. ನಾಯ್ಕ ಸ್ವಾಗತಿಸಿದರು. ಉದಯ ಕಾರ್ಯಕ್ರಮ ನಿರ್ವಹಿಸಿದರು.