ವಿದ್ಯೆ, ಸಂಸ್ಕಾರದಿಂದ ಸಮಾಜಕ್ಕೆ ನೆರಳಾಗಿ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Jun 01, 2025, 01:40 AM IST
ಫೋಟೋ : ೩೧ಕೆಎಂಟಿ_ಎಂಎವೈ_ಕೆಪಿ೨ : ಮೂರೂರು-ಕಲ್ಲಬ್ಬೆ ಪ್ರಗತಿ ವಿದ್ಯಾಲಯದಲ್ಲಿ ನೂತನ ನಿರ್ಮಿತ ಒಳಾಂಗಣ ಕ್ರೀಡಾಂಗಣವನ್ನು ರಾಘವೇಶ್ವರ ಶ್ರೀಗಳು ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಆರ್.ಜಿ.ಭಟ್ಟ, ಪ್ರಸನ್ನ ಹೆಗಡೆ, ವಿದ್ಯಾಧರ ಹೆಗಡೆ ಇತರರು ಇದ್ದರು.  | Kannada Prabha

ಸಾರಾಂಶ

ಶಾಲೆಯಿಂದ ಪಡೆದ ಸಂಸ್ಕಾರದಿಂದ ಸಮಾಜಕ್ಕೆ ನೆರಳಾಗಬೇಕು

ಕುಮಟಾ: ಮಳೆ ಹನಿಯೊಂದು ನೆಲದಾಳಕ್ಕಿಳಿದು ಬೇರಿನ ಮೂಲಕ ಮರದ ಹಸಿರಿನ ನಡುವೆ ಸಮಾಜಕ್ಕಾಗಿ ಫಲವಾಗುವಂತೆ ವಿದ್ಯಾರ್ಥಿಗಳು ಶಿಕ್ಷಕರಿಂದ ಪಡೆದ ವಿದ್ಯೆ, ಶಾಲೆಯಿಂದ ಪಡೆದ ಸಂಸ್ಕಾರದಿಂದ ಸಮಾಜಕ್ಕೆ ನೆರಳಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ನುಡಿದರು.

ವಿದ್ಯಾನಿಕೇತನ ಸಂಸ್ಥೆ ಮೂರೂರು-ಕಲ್ಲಬ್ಬೆಯ ಪ್ರಗತಿ ವಿದ್ಯಾಲಯದಲ್ಲಿ ಪೂರ್ಣಾಕ್ಷರ ಕಟ್ಟಡದ ಮೊದಲ ಮಹಡಿ ಹಾಗೂ ಒಳಾಂಗಣ ಕ್ರೀಡಾಂಗಣ ಕೊಠಡಿ ಲೋಕಾರ್ಪಣೆ, ಎಸ್.ಎಸ್.ಎಲ್.ಸಿ ಸಾಧಕರಿಗೆ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನಗೈದರು.

ಮಕ್ಕಳಲ್ಲಿ ದೇಹದ ಜತೆಗೆ ಬುದ್ಧಿಯ ಬೆಳವಣಿಗೆಯನ್ನು ಮಾಡುವಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಾಲೆಯು ವಿದ್ಯೆಯೊಟ್ಟಿಗೆ ಸಂಸ್ಕಾರವನ್ನೂ ನೀಡುತ್ತದೆ. ಜ್ಞಾನದ ಸಂಕ್ರಾಂತಿಯಾಗುತ್ತದೆ. ಪ್ರಗತಿ ವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಳದೊಂದಿಗೆ ಜ್ಞಾನ ಹರಿವೂ ಹೆಚ್ಚಿದೆ. ಇದರಿಂದಾಗಿ ಸಾಧನೆಗಳು ವಿಸ್ತರಿಸುತ್ತಿರುವುದು ಸಂತಸದ ವಿಷಯ ಎಂದರು.

ಮುಖ್ಯ ಅತಿಥಿ ಜಾಸ್ಮಿನ್ ಅಪೆರಲ್ಸ್‌ನ ಎಂ.ಡಿ. ವಿದ್ಯಾಧರ ಹೆಗಡೆ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಜವಾಬ್ದಾರಿ. ಹಾಗೇ ಯುವಕರಿಗೆ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಬೇಕು. ಪ್ರಗತಿ ವಿದ್ಯಾಲಯವು ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಉದ್ಯೋಗದ ಭರವಸೆ ನೀಡಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಐಟಿಐಎಲ್ ಕಂಪನಿಯ ಎಂಡಿ ಪ್ರಸನ್ನ ಹೆಗಡೆ ಹುಣಸೆಮಕ್ಕಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಸವಾಲಾಗಿ ಸ್ವೀಕರಿಸಬೇಕಾಗಿದೆ. ಹಾಗೆಯೇ ಮೂರೂರು-ಕಲ್ಲಬ್ಬೆ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಗಮನಾರ್ಹ ಬೆಳವಣಿಗೆ ಸಂತಸ ನೀಡಿದೆ ಎಂದರು. ನಿವೃತ್ತ ಪ್ರಾಚಾರ್ಯ ಕಡತೋಕಾ ಎಸ್ . ಶಂಭು ಭಟ್ಟ ಇದ್ದರು.

ಪೂರ್ವ ವಿದ್ಯಾರ್ಥಿ ಸಂಘದ ದಶಮಾನೋತ್ಸವದ ರೂಪುರೇಷೆ ಕೈಪಿಡಿಯನ್ನು ಶ್ರೀಗಳು ಅನಾವರಣಗೊಳಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಾಯ ಭಟ್ ಸಂಘದ ಕಾರ್ಯಯೋಜನೆ ವಿವರಿಸಿದರು. ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಅಭಿನಂದಿಸಿ ಪುರಸ್ಕರಿಸಲಾಯಿತು. ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾನಿಕೇತನ ಸಂಸ್ಥೆಯ ಸದಸ್ಯರು, ಊರ ನಾಗರಿಕರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಕಾರ್ಯಧ್ಯಕ್ಷ ಆರ್. ಜಿ. ಭಟ್ ಕಲ್ಲರೆಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಎಸ್.ಹೆಗಡೆ ವಂದಿಸಿದರು. ಶಿಕ್ಷಕ ರಾಘವೇಂದ್ರ ಭಟ್, ಲೋಕೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ