ರಸ್ತೆ ಕುಸಿದು ಗದುಗಿನ ಒಳ ರಸ್ತೆ ಬಸ್‌ಗಳ ಓಡಾಟ ಬಂದ್‌

KannadaprabhaNewsNetwork | Published : Jun 1, 2025 1:39 AM
ತಾಲೂಕಿಗೆ ಹೊಂದಿಕೊಂಡಿರುವ ಕುರ್ಲಗೇರಿ ಗ್ರಾಮದ ಪಕ್ಕ ಬೆಣ್ಣಿ ಹಳ್ಳದ ಸೇತುವೆ ಪಕ್ಕ ರಸ್ತೆ ಶುಕ್ರವಾರ ಕುಸಿದಿದ್ದರಿಂದ ನರಗುಂದ-ಗದಗ ಒಳ ರಸ್ತೆಗಳಲ್ಲಿ ಬಸಗಳ ಓಡಾಟ ನಿಂತಿದೆ.

ನರಗುಂದ: ತಾಲೂಕಿಗೆ ಹೊಂದಿಕೊಂಡಿರುವ ಕುರ್ಲಗೇರಿ ಗ್ರಾಮದ ಪಕ್ಕ ಬೆಣ್ಣಿ ಹಳ್ಳದ ಸೇತುವೆ ಪಕ್ಕ ರಸ್ತೆ ಶುಕ್ರವಾರ ಕುಸಿದಿದ್ದರಿಂದ ನರಗುಂದ-ಗದಗ ಒಳ ರಸ್ತೆಗಳಲ್ಲಿ ಬಸಗಳ ಓಡಾಟ ನಿಂತಿದೆ.

ಪ್ರತಿ ದಿವಸ ನರಗುಂದದಿಂದ ಜಿಲ್ಲಾ ಕೇಂದ್ರಕ್ಕೆ ನೂರಾರು ಜನರು ತಮ್ಮ ಕೆಲಸ ಕಾರ್ಯಗ‍‍‍ಳಿಗೆ ಬಸ್‌ ಮೂಲಕ ಮತ್ತು ತಮ್ಮ ವಾಹನಗಳ ಮೂಲಕ ಹೋಗುತ್ತಿದ್ದರು, ಅದೇ ರೀತಿ ಪಟ್ಟಣಕ್ಕೆ ನವಲಗುಂದ ತಾಲೂಕಿನ ತಡಹಾಳ, ಕುರಹಟ್ಟಿ, ನಾವಳ್ಳಿ, ನಾಯಕನೂರ ಗ್ರಾಮ ಸೇರಿದಂತೆ ಮುಂತಾದ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಪ್ರತಿ ದಿವಸ ಬರುತ್ತಾರೆ. ಬಸ್‌ಗಳು ಬಂದ್‌ ಆಗಿದ್ದರಿಂದ ಪರದಾಟ ಮಾಡಿದ್ದು ಕಂಡು ಬಂತು.

ಇದೇ ರಸ್ತೆಯಲ್ಲಿ ಓಡಾಟ:ಬೆಣ್ಣಿ ಹಳ್ಳದ ಸೇತುವೆ ಬಳಿ ರಸ್ತೆ ಕುಸಿದಿದೆ. ಇದೇ ರಸ್ತೆಯಲ್ಲಿ ಬೈಕ್‌, ಲಘು ವಾಹನಗಳು ಸಂಚರಿಸುತ್ತಿವೆ. ಆದರೆ ಕುಸಿದ ರಸ್ತೆ ಪಕ್ಕದಲ್ಲಿ ಮತ್ತೆ ಯಾವಾಗ ಕುಸಿಯುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ, ಆದರೆ ಈ ಅಪಾಯದ ರಸ್ತೆಯಲ್ಲಿ ಜನರು ಓಡಾಟ ಮಾಡಿದರೂ ಕೂಡ ಸಂಬಂಧ ಪಟ್ಟ ಇಲಾಖೆಯವರು ಮತ್ತು ಪೊಲೀಸರು ಈ ಸ್ಥಳಕ್ಕೆ ಬಂದು ರಸ್ತೆಯಲ್ಲಿ ವಾಹನ ಸಂಚಾರ ನಿಲ್ಲಿಸದೆ ಜನರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕುರ್ಲಗೇರಿ ಬಳಿಯ ಬೆಣ್ಣಿ ಹಳ್ಳದ ಸೇತುವೆ ಬಳಿ ರಸ್ತೆ ಕುಸಿದಿದ್ದರಿಂದ ನರಗುಂದಿಂದ-ಗದುಗಿಗೆ ಹೋಗುವ ಒಳ ಮಾರ್ಗದಲ್ಲಿ ಓಡಾಟ ಮಾಡುವ ಬಸ್‌ಗಳನ್ನು ಬಂದ್ ಮಾಡಲಾಗಿದೆ. ಶಾಲಾ ಮಕ್ಕಳಿಗೆ ತೊಂದರೆ ಆಗಬಾರದೆಂದು ಕುರ್ಲಗೇರಿ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಪ್ರತಿ ದಿವಸ ಬಸಗಳ ಓಡಾಟದ ಹಾಗೆ ಬಸ್‌ಗಳ ಸಂಚಾರ ಆ ಗ್ರಾಮಕ್ಕೆ ಇದೆ ಎಂದು ಕೆಎಸ್‌ಆರ್‌ಟಿಸಿ ತಾಲೂಕು ವ್ಯವಸ್ಥಾಪಕ ಪರಶುರಾಮ ಪ್ರಭಾಕರ ಹೇಳಿದರು.

ಪ್ರತಿ ದಿವಸ ಜಿಲ್ಲಾ ಕೇಂದ್ರಕ್ಕೆ ಮತ್ತು ನರಗುಂದಕ್ಕೆ ಬೇರೆ ತಾಲೂಕಿನ ವಿದ್ಯಾರ್ಥಿಗಳು ಶಿಕ್ಷಣ ಕಲಿಯುಲು ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಆದ್ದರಿಂದ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ರಸ್ತೆ ಬೇಗ ದುರಸ್ತಿ ಮಾಡಬೇಕು ಎಂದು ಕುರ್ಲಗೇರಿ ಗ್ರಾಮಸ್ಥ ಯಲ್ಲಪ್ಪ ಚಲವಣ್ಣವರ ಹೇಳಿದರು.