ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಶಿಕ್ಷಣ, ಕಠಿಣ ಪರಿಶ್ರಮ ಯಶಸ್ಸಿನ ಕೀಲಿ ಕೈ: ಸಚಿವ ಕೃಷ್ಣಬೈರೇಗೌಡ

KannadaprabhaNewsNetwork | Updated : Jun 25 2024, 05:32 AM IST

ನಮ್ಮೂರ ಹೆಮ್ಮೆ ಕಾರ್ಯಕ್ರಮದ ಅಡಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾ ಪುರಸ್ಕಾರ.

 ಬ್ಯಾಟರಾಯನಪುರ : ಶಿಕ್ಷಣ ಮತ್ತು ಕಠಿಣ ಪರಿಶ್ರಮ ಯಶಸ್ಸಿನ ಕೀಲಿ ಕೈಗಳಿದ್ದಂತೆ. ವಿದ್ಯಾರ್ಥಿಗಳು ಇವುಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ಸಚಿವ ಕೃಷ್ಣಬೈರೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಮ್ಮೂರ ಹೆಮ್ಮೆ ಕಾರ್ಯಕ್ರಮದ ಅಡಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಬ್ಯಾಟರಾಯನಪುರ ಕ್ಷೇತ್ರದ ಕುವೆಂಪುನಗರ ವಾರ್ಡ್, ದೊಡ್ಡಬೊಮ್ಮಸಂದ್ರ ವಾರ್ಡ್ ಮತ್ತು ವಿದ್ಯಾರಣ್ಯಪುರ ವಾರ್ಡ್ ವ್ಯಾಪ್ತಿಯ ಸುಮಾರು 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಾನುವಾರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ ನಂತರ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣದಲ್ಲಾಗಲಿ, ಕ್ರೀಡೆ ಅಥವಾ ಸಾಂಸ್ಕೃತಿಕ ಕಲೆಗಳಲ್ಲೇ ಆಗಲಿ ಅತ್ಯುತ್ತಮ ಸಾಧನೆ ಮಾಡಿದರೆ ಅದು ಕೇವಲ ಅವರಿಗಷ್ಟೇ ಹೆಮ್ಮೆಯ ಸಂಗತಿಯಲ್ಲ, ಅದು ಅವರು ಓದಿದ ಶಾಲೆಗೆ, ಅವರು ನೆಲೆಸಿರುವ ಗ್ರಾಮಕ್ಕೆ, ಕ್ಷೇತ್ರ, ರಾಜ್ಯ, ದೇಶ ಹೀಗೆ ಎಲ್ಲದಕ್ಕೂ ಹೆಮ್ಮೆಯ ಸಂಗತಿಯಾಗಿರುತ್ತದೆ. ಈ ದಿಸೆಯಲ್ಲಿ ‘ನಮ್ಮೂರ ಹೆಮ್ಮೆ’ ಶೀರ್ಷಿಕೆಯ ಅಡಿಯಲ್ಲಿ ಕಳೆದ ಐದು ವರ್ಷಗಳಿಂದ ಬ್ಯಾಟರಾಯನಪುರ ಕ್ಷೇತ್ರದ ನಿವಾಸಿಗಳಾಗಿರುವ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಐದು ಸಾವಿರ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಾ ಬರಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಶ್ರೇಣಿ ಗಳಿಸಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಸಮಾಜ ಸೇವಕರಾದ ಮೀನಾಕ್ಷಿ ಕೃಷ್ಣಬೈರೇಗೌಡ, ವಿದ್ಯಾರಣ್ಯಪುರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ವಿ.ಹರಿ, ಬಿಬಿಎಂಪಿ ಮಾಜಿ ಸದಸ್ಯೆ ಲಕ್ಷ್ಮಿ ವಿ.ಹರಿ, ನಗರಸಭಾ ಮಾಜಿ ಸದಸ್ಯ ಆರ್.ಎಂ.ಶ್ರೀನಿವಾಸ್, ದೊಡ್ಡಬೊಮ್ಮಸಂದ್ರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ಕುವೆಂಪುನಗರ ವಾರ್ಡ್ ಅಧ್ಯಕ್ಷ ಎನ್.ಎನ್.ಶ್ರೀನಿವಾಸಯ್ಯ, ಕಾಂಗ್ರೆಸ್ ಮುಖಂಡರಾದ ಮಲ್ಯಾದ್ರಿ, ಜನಾರ್ದನ್, ಆಕಾಶ್, ರಾಧಿಕಾ, ಜೈಪ್ರಕಾಶ್, ಸಾಂಬಶಿವಾರೆಡ್ಡಿ, ಮಂಜುನಾಥ್, ಪುರುಷೋತ್ರಮ್, ಕಾರ್ತಿಕ್ ಸೇರಿದಂತೆ ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಕುವೆಂಪುನಗರ ವಾರ್ಡ್‌ಗಳ ಕೆಬಿಜಿ ಸ್ವಯಂ ಸೇವಕರಿದ್ದರು.