ಅಲೋಪತಿ ವೈದ್ಯ ಪದ್ದತಿಯೊಂದೇ ಖಾಯಿಲೆ ಗುಣಪಡಿಸದು: ರವೀಂದ್ರ

KannadaprabhaNewsNetwork | Updated : Jun 25 2024, 05:33 AM IST

ಸಾರಾಂಶ

ನಿವೃತ್ತ ಐಎಎಸ್‌ ಅಧಿಕಾರಿ ಡಾ.ಡಿ.ಎಸ್. ವಿಶ್ವನಾಥ್‌ ಅವರ ಆರೋಗ್ಯ ಮತ್ತು ಚಿಕಿತ್ಸೆಗಳು ಕುರಿತ ಮೂರು ಕೃತಿಗಳ ಲೋಕಾರ್ಪಣೆ

 ಬೆಂಗಳೂರು : ಖಾಯಿಲೆಗಳನ್ನು ಗುಣಪಡಿಸಲು ಅಲೋಪತಿ ವೈದ್ಯ ಪದ್ಧತಿಯಿಂದ ಮಾತ್ರ ಸಾಧ್ಯ ಎನ್ನುವ ಮನೋಭಾವನೆಯಿಂದ ಜನರು ಹೊರ ಬರಬೇಕು ಎಂದು ಇಶಾನ್‌ ಸಂಸ್ಥಾಪಕ ಎಂ.ವಿ. ರವೀಂದ್ರ ಅಭಿಪ್ರಾಯಪಟ್ಟರು.

ಸೋಮವಾರ ಕನ್ನಡಭವನದ ನಯನ ಸಭಾಂಗಣದಲ್ಲಿ ಶ್ರೀ ಗಣೇಶ್‌ ಪಬ್ಲಿಕೇಶನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಡಿ.ಎಸ್. ವಿಶ್ವನಾಥ್‌ ಅವರ ಆರೋಗ್ಯ ಮತ್ತು ಚಿಕಿತ್ಸೆಗಳು ಕುರಿತ ಮೂರು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು,

ಚೀನಾದ ಸಾಂಪ್ರದಾಯಿಕ ಚಿಕಿತ್ಸಾ ಕ್ರಮ (ಆಕ್ಯುಪ್ರೆಶರ್‌) ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನ ಅನ್ವಯಿಸಿಕೊಂಡು ಚೀನಾ, ಜಪಾನ್‌ ಹಾಗೂ ಕೋರಿಯಾ ದೇಶಗಳಲ್ಲಿ ಜನರು ಕ್ಯಾನ್ಸರ್‌ನಂತಹ ಭೀಕರ ಖಾಯಿಲೆ ಗುಣಪಡಿಸಿಕೊಳ್ಳುತ್ತಾರೆ. ಇಂತಹ ಪರಿಣಾಮಕಾರಿ ಪುರಾತನ ನೈಸರ್ಗಿಕ ಚಿಕಿತ್ಸೆಗಳು ಭಾರತೀಯ ವೈದ್ಯ ಪರಂಪರೆಯಲ್ಲಿಯೂ ಇದೆ ಎಂಬ ಅರಿವು ಜನರಲ್ಲಿ ಮೂಡಿಸಬೇಕಿದೆ ಎಂದರು.

ಆಯುರ್ವೇದ ವೈದ್ಯೆ ಡಾ.ಎಂ.ಎನ್‌. ಸುಧಾ ಮಾತನಾಡಿ, ಆರೋಗ್ಯ ಮತ್ತು ನೆಮ್ಮದಿ ಒಂದು ನಾಣ್ಯದ ಎರಡು ಮುಖಗಳು. ನೆಮ್ಮದಿಯ ಜೀವನ ಆರೋಗ್ಯ ವೃದ್ಧಿಗೆ ಸಹಕಾರಿಯಾದರೆ, ಉತ್ತಮ ಆರೋಗ್ಯದಿಂದ ಜೀವನದಲ್ಲಿ ನೆಮ್ಮದಿ ನೆಲೆಸಿರುತ್ತದೆ. ಜಗತ್ತಿನ ಅತಿ ಹೆಚ್ಚು ಕ್ಯಾನ್ಸರ್‌ ಹಾಗೂ ಸಕ್ಕರೆ ಖಾಯಿಲೆಯ (ಡಯಾಬಿಟಿಸ್‌) ರೋಗಿಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಇಂತಹ ರೋಗ ಗುಣಪಡಿಸುವ ಶಕ್ತಿ ಹೋಮಿಯೋಪತಿ ಹಾಗೂ ಆಯುರ್ವೇದ ಚಿಕಿತ್ಸೆಗಳಲ್ಲಿ ಇದೆ. ಆದರೆ, ಈ ಚಿಕಿತ್ಸೆಗಳ ಬಗ್ಗೆ ಜನರಿಗೆ ಮಾಹಿತಿ ಕೊರತೆ ಮತ್ತು ನಂಬಿಕೆ ಇಲ್ಲದಿರುವುದು ದುರದೃಷ್ಟಕರ ಸಂಗತಿ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಉಪಸ್ಥಿತರಿದ್ದರು.

Share this article