ಯಾವುದೇ ಕ್ಷೇತ್ರದಲ್ಲಿ ಸಾಧನೆಗೆ ಶಿಕ್ಷಣ ಅವಶ್ಯ: ಸುಶೀಲಕುಮಾರ

KannadaprabhaNewsNetwork | Updated : Nov 11 2024, 01:11 AM IST

ಸಾರಾಂಶ

ಸಮಾಜದಲ್ಲಿ ಬಡತನವಿದೆ. ಆದರೆ ಅದು ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂದರು. ಸತತವಾಗಿ 5 ದಿನಗಳ ಕಾಲ ಜಾತ್ರೆ ಮಾಡುವುದು ಹೆಮ್ಮೆಯ ವಿಷಯವಾಗಿದೆ

ಕನ್ನಡಪ್ರಭ ವಾರ್ತೆ ಜಮಖಂಡಿ

ಶಿಕ್ಷಣದಿಂದ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಣ ವಂಚಿತರು ಸಮಾಜದಲ್ಲಿ ಕಷ್ಟ ಪಡಬೇಕಾಗುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಹೇಳಿದರು.

ತಾಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ನಡೆದ ದುರ್ಗಾದೇವಿ ಶಿಖರ ಹಾಗೂ ಪಂಚ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬಡತನವಿದೆ. ಆದರೆ ಅದು ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂದರು. ಸತತವಾಗಿ 5 ದಿನಗಳ ಕಾಲ ಜಾತ್ರೆ ಮಾಡುವುದು ಹೆಮ್ಮೆಯ ವಿಷಯವಾಗಿದೆ. ಜಾತಿ, ಮತ, ಭೇದ-ಭಾವಗಳನ್ನು ಮರೆತು ಎಲ್ಲರೂ ಒಂದಾಗಿ ಹಬ್ಬ-ಹರಿದಿನ ಆಚರಿಸಬೇಕು ಎಂದರು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪಾಲಕರು ನೋಡಿಕೊಳ್ಳಬೇಕು ಎಂದರು.

ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ ಮಾತನಾಡಿ, ಸಮಾಜ ಒಂದಾಗಿದರೆ ಮಾತ್ರ ಸುಧಾರಣೆಯಾಗಲು ಸಾಧ್ಯ. ಸದಾಶಿವ ಆಯೋಗ ಜಾರಿಗೆ ಬರಲು ಸಮಾಜದ ಒಗ್ಗಟ್ಟು ಕಾರಣವಾಗಿದೆ. ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವುದು ಬಹಳ ಮುಖ್ಯ. ಶಿಕ್ಷಣದಿಂದ ಉನ್ನತ ಸ್ಥಾನದಲ್ಲಿ ಬರಲು ಸಾಧ್ಯವಾಗುತ್ತದೆ. ರಾಜಕೀಯ ಮತ್ತು ಸರ್ಕಾರದ ಮೇಲೆ ಯಾರು ಅವಲಂಬನೆಯಾಗದೆ ಎಲ್ಲ ಕ್ಷೇತ್ರದಲ್ಲಿ ನಮ್ಮ ಸಮಾಜ ಮುಂದಕ್ಕೆ ತರಲು ಶ್ರಮಿಸಬೇಕು ಎಂದರು.

ಮಾಜಿ ತಾಪಂ ಅಧ್ಯಕ್ಷ ಶಿವಪ್ಪ ಅತಾಲಟ್ಟಿ ಮಾತನಾಡಿ, ಸುಮಾರು ವರ್ಷಗಳ ಕಾಲದಿಂದ ಇರುವ ದೇವಿಯ ದೇವಸ್ಥಾನ ಅಭಿವೃದ್ಧಿ ಮಾಡಬೇಕೆಂದು ಸಮಾಜ ಮುಖಂಡರ ಕನಸು ಕಂಡಿದ್ದರು. ಅದರಂತೆ ಇಂದು ದೇವಿಯ ಕಳಸಾರೋಹಣ ನೇರೆವೇರಿದೆ. ಸಮಾಜದಲ್ಲಿ ಮೊದಲ ಶಿಕ್ಷಣದಿಂದ ಮುಂದೆ ಬಂದರೆ ಮಾತ್ರ ಇಂತಹ ಅಭಿವೃದ್ಧಿ ಪರ ಕೆಲಸಗಳು ಆಗಲು ಸಾಧ್ಯ ಎಂದರು. ಬಿಇಒ ಅಶೋಕ ಬಸನ್ನವರ ಮಾತನಾಡಿ, ಜಾತ್ರೆ ಮಾಡುವುದರಲ್ಲಿ ಸಮಾಜ ಬಹಳ ಮುಂದೆ ಇದೆ. ಜೊತೆಗೆ ಧಾರ್ಮಿಕ ಮೌಲ್ಯವನ್ನು ಕಳೆದುಕೊಳ್ಳಬಾರದು. ಜಾತ್ರೆಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ದಿವಾಳಿಯಾಗದೆ ಮುಂದೆ ಬರಬೇಕಾಗಿದೆ. ಮಕ್ಕಳಿಗೆ ಇಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದರು.

ಮುಖ್ಯ ಶಿಕ್ಷಕಿ ಸುಮಂಗಲಾ ಮಾದರ, ಆನಂದ ಪತ್ತಾರ, ರಾಘವೇಂದ್ರ ಎನ್ನಾರಪೂರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶಿವಾನಂದ‌ ಬಿರಾದರ, ಮಾದೇವಿ ಐಗಳಿ, ನಾಗರಾಜ ಶೇಗುಣಸಿ, ಆನಂದ ಪತ್ತಾರ, ಆನಂದ ಸಸಾಲಟ್ಟಿ, ಸುಮಂಗಲಾ ಜಡರಾಯ, ಮಲ್ಲಿಕಾರ್ಜುನ ಸವದಿ, ಸಂಗಪ್ಪ ಚಿಮ್ಮಡ, ಸುರೇಶ ಕುರಣಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

ತಮ್ಮಣ್ಣ ಅರ್ದಾರ ಸ್ವಾಗತಿಸಿದರು. ರವಿ ಐಗಳಿ ನಿರೂಪಿಸಿ, ಕಾಶಿರಾಯ ಜಂಗನ್ನವರ ವಂದಿಸಿದರು.

Share this article