ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸಮಾಜದಲ್ಲಿ ಅಸಮಾನತೆ ಎಂಬುದು ನಿರಂತರವಾಗಿದೆ. ವಿದ್ಯೆ ಮತ್ತು ಸಂಘಟನೆಯಿಂದ ಮಾತ್ರ ಇದನ್ನು ನಿವಾರಿಸಲು ಸಾಧ್ಯ ಎಂಬುದನ್ನು ಅರಿತ ನಾರಾಯಣಗುರುಗಳು ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಿದರು ಎಂದು ಉಚ್ಚ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯಾವಾದಿ ಐ.ತಾರಾನಾಥ ಪೂಜಾರಿ ಹೇಳಿದರು.ಅವರು ಇಲ್ಲಿನ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ವತಿಯಿಂದ ನಿರ್ಮಿಸಲ್ಪಟ್ಟ ಹವಾನಿಯಂತ್ರಿತ ಅಮೃತ ಸಭಾಭವನವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ನಂತರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಾರಾಯಣಗುರುಗಳ ಸಮಾನತೆಯ ತತ್ವವೇ ಸಂವಿಧಾನದಲ್ಲಿಯೂ ಅಡಕವಾಗಿದೆ. ಅವರ ವೈಚಾರಿಕ ನಿಲುವು, ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದ ಅವರು, ಇಂದು ಗಳಿಸಿದ ಸಂಪಾದನೆಯಲ್ಲಿ ಶೇ.40ರಷ್ಟನ್ನು ಮೂಢನಂಬಿಕೆಗಳಿಗೆ ಬಳಸುತ್ತಿರುವುದು ಆತಂಕಕಾರಿ. ಮೂಢನಂಬಿಕೆಗಳಿಗೆ ಬಳಸುವ ಹಣವನ್ನು ವಿದ್ಯೆಗೆ ಬಳಸಿ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಪ್ರಕಾಶ್ ಮಲ್ಪೆ ದಿಕ್ಸೂಚಿ ಭಾಷಣ ಮಾಡಿದರು.ರವಿ ಮೂಡುಕೊಣಾಜೆ ರೂಪಿಸಿ ಸಂಘದ ಲೋಗೋವನ್ನು ಬಿಡುಗಡೆಗೊಳಿಸಲಾಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಸುವರ್ಣ ಪ್ರತಿಷ್ಠಾನ ಕರ್ನಿರೆ ಅಧ್ಯಕ್ಷ ಪ್ರಭಾಕರ ಡಿ. ಸುವರ್ಣ, ಬಿಜೆಪಿಯ ಜಿಲ್ಲಾ ಮುಖಂಡ ಸುದರ್ಶನ ಎಂ., ಉದ್ಯಮಿ ನಾರಾಯಣ ಪಿ.ಎಂ. ಶುಭ ಹಾರೈಸಿದರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ವಾರ್ಡ್ ಸದಸ್ಯ ರಾಜೇಶ್ ನಾಯ್ಕ್, ಅತಿಥಿಗಳಾಗಿ ಭಾಗವಹಿಸಿದ್ದರು.ಶ್ರೀ ನಾರಾಯಣಗುರು ಸೇವಾದಳದ ದಿನೇಶ್ ಪೂಜಾರಿ ಮಾರೂರು, ಕೋಶಾಧಿಕಾರಿ ಜಗದೀಶ್ ಪೂಜಾರಿ ಮಿಜಾರು, ಉಪಾಧ್ಯಕ್ಷ ರವೀಂದ್ರ ಕರ್ಕೇರ, ಮಹಿಳಾ ಘಟಕ ಅಧ್ಯಕ್ಷೆ ಸವಿತಾ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹನ್ ಅತಿಕಾರಬೆಟ್ಟು, ಶ್ರೀರಾಜ್ ಸನಿಲ್, ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುಶಾಂತ್ ಕರ್ಕೇರಾ ವಂದಿಸಿದರು.