ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವಿವಿ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ನಡೆದ 6ನೇ ಘಟಿಕೋತ್ಸವದಲ್ಲಿ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ನಂತರ ಆಶೀರ್ವಚನ ನೀಡಿದರು.
ಉನ್ನತ ವ್ಯಾಸಂಗ ಮಾಡಿ ಪದವಿ ಪಡೆಯುವ ಯುವ ಜನರು ಸ್ವಾರ್ಥ ಬಿಟ್ಟು ಪೋಷಕರು, ಹಿರಿಯರು ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ನಿಜವಾದ ಜೀವನ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ಸಾಧನೆ ಗುರಿಯೊಂದಿಗೆ ಮಹತ್ವದ ಕನಸು ಕಾಣಬೇಕು ಎಂದರು.ತಂದೆ ತಾಯಿ, ಗುರುಗಳು ಮತ್ತು ಸಮಾಜವನ್ನು ಗೌರವಿಸುವುದು ವಿದ್ಯಾರ್ಥಿ ಹಾಗೂ ಸಾಧಕನ ಮೊದಲ ಹೆಜ್ಜೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ವಿದ್ಯೆ, ಯಶಸ್ಸು, ಬಲ ಮತ್ತು ಜ್ಞಾನವೆಂಬ ನಾಲ್ಕು ಅಂಶಗಳನ್ನು ಪಾಲಿಸಬೇಕು. ವಿದ್ಯೆ ಕೇವಲ ಲೌಕಿಕ ಜ್ಞಾನವಲ್ಲ, ಬದಲಿಗೆ ಮುಕ್ತಿಯನ್ನು ಪಡೆಯಲು ನಿಜವಾದ ಸಾಧನವಾಗಿದೆ. ತಮ್ಮಲ್ಲಿರುವ ಜ್ಞಾನವನ್ನು ಅಡಿಪಾಯವಾಗಿಟ್ಟುಕೊಂಡರೆ ಖಂಡಿತ ಯಶಸ್ಸು ಸಿಗುತ್ತದೆ ಎಂದರು.
ಆದಿಚುಂಚನಗಿರಿ ವಿವಿ ಕೇವಲ ಉಪನ್ಯಾಸ ಕೊಠಡಿ ಕಲ್ಪನೆಯಲ್ಲಿ ಪ್ರಾರಂಭವಾಗಿಲ್ಲ. ಆಧ್ಯಾತ್ಮಿಕ ಪರಂಪರೆಯ ವಿಶಿಷ್ಟ ಸಂಕಲ್ಪದಿಂದ ಆರಂಭಗೊಂಡಿದೆ. ಸ್ಟ್ಯಾನ್ ಫೋರ್ಡ್ ವಿವಿ ಸಮೀಕ್ಷೆ ಪ್ರಕಾರ ಇಲ್ಲಿನ ಕೆಲವು ಅಧ್ಯಾಪಕರು ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದು ಹೆಗ್ಗಳಿಕೆಯ ವಿಚಾರ ಎಂದು ಶ್ಲಾಘಿಸಿದರು.
ಬೆಂಗಳೂರಿನ ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ.ನಾಗಹನುಮಯ್ಯ ಮಾತನಾಡಿ, ಘಟಿಕೋತ್ಸವವು ಕೇವಲ ಪದವಿ ಸ್ವೀಕಾರ ಸಮಾರಂಭವಲ್ಲ. ಹಲವು ವರ್ಷಗಳ ಕಲಿಕೆ, ಪರಿಶ್ರಮ, ಬೆಳವಣಿಗೆಯ ಮಹತ್ವದ ಘಟ್ಟ. ಇಲ್ಲಿಂದ ನಿಮ್ಮ ಜೀವನದ ಹೊಸ ಪಯಣ, ಅಧ್ಯಾಯ ಆರಂಭವಾಗುತ್ತಿದೆ. ತರಗತಿ ಕೊಠಡಿ, ಪ್ರಯೋಗಾಲಯಗಳನ್ನು ದಾಟಿ ಹೊರ ಜಗತ್ತಿಗೆ ಕಾಲಿಟ್ಟಾಗ ಏನು ಕಲಿತಿದ್ದೀರಿ ಎಂಬುದಕ್ಕಿಂತ ಕಲಿತ ಜ್ಞಾನವನ್ನು ಎಷ್ಟು ಬಳಸಿಕೊಳ್ಳುತ್ತೀರಿ ಎಂಬುದೇ ಶಿಕ್ಷಣದ ನಿಜವಾದ ಪರಿಕಲ್ಪನೆಯಾಗಿದೆ ಎಂದರು.
ಸಮಾರಂಭದಲ್ಲಿ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ, ಮೌಲ್ಯಮಾಪನ ಕುಲಸಚಿವ ಡಾ.ನಾಗರಾಜ್, ವಿವಿಧ ವಿಭಾಗಗಳ ಡೀನ್ಗಳಾದ ಡಾ.ಬಿ.ರಮೇಶ್, ಡಾ.ಕೆ.ಎಸ್.ಗಂಗಾಧರ, ಡಾ.ಎ.ಟಿ.ಶಿವರಾಮು, ಡಾ.ಬಿ.ಎಂ.ಶೋಭಾ, ಡಾ.ಎಂ.ಜಗದೀಶ್, ಡಾ.ಪ್ರಶಾಂತ್ ಕಾಳಪ್ಪ, ಡಾ.ಎಚ್.ಕೋಮಲ, ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮತ್ತು ಶೈಕ್ಷಣಿಕ ಮಂಡಳಿಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಪೋಷಕರು ಇದ್ದರು.