ಹರಪನಹಳ್ಳಿ: ಭಾರತೀಯತೆಯ ಶಿಕ್ಷಣ ಇಂದು ಮಕ್ಕಳಿಗೆ ಅತ್ಯಗತ್ಯವಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ ಹನುಮಕ್ಕನವರ್ ಅಭಿಪ್ರಾಯಪಟ್ಟರು.ಪಟ್ಟಣದ ಹೊರವಲಯದ ಅಡವಿಹಳ್ಳಿ ಬಳಿ ಇರುವ ವಿದ್ಯಾನಿಧಿ ಶಿಕ್ಷಣ ಅಕಾಡೆಮಿಯ 5ನೇ ವಾರ್ಷಿಕೋತ್ಸವ ಹಾಗೂ ಸಿಬಿಎಸ್ಸಿ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯಕ್ಕಿಂತ ಹೆಚ್ಚು ಪಠ್ಯೇತರ ವಿಷಯಗಳನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದ ಅವರು ಇಂಗ್ಲಿಷ್ ಒಂದು ಭಾಷೆಯಾಗಿದ್ದು, ಅದರ ಮೋಹಕ್ಕೆ ಒಳಗಾಗಬಾರದು ಎಂದರು.
ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಜೀವನದಲ್ಲಿ ಮಕ್ಕಳನ್ನು ದೇಶಪ್ರೇಮಿಯಾಗಿ ಬೆಳೆಸಬೇಕಿದೆ. ಜೀವನದಲ್ಲಿ ತತ್ವ, ಸಿದ್ಧಾಂತಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವ ಜ್ಞಾವನ್ನು ಕಲಿಸಬೇಕಿದೆ ಎಂದರು.ಮಕ್ಕಳಿಗೆ ಕಷ್ಟದ ಅರಿವು ಮಾಡಿಸದಿದ್ದರೆ ಮುಂದೆ ಮಕ್ಕಳ ಜೀವನ ಕಷ್ಟವಾಗಲಿದೆ ಎಂದ ಅವರು, ವಿದ್ಯೆಯ ಜತೆಗೆ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ ಎಂದರು.ಇಲ್ಲಿರುವಂತಹ ಸಂಸ್ಕೃತಿ, ಸಂಸ್ಕಾರ, ಅಧ್ಯಾತ್ಮ, ಪರಂಪರೆ ವಿಶೇಷಗಳಿಂದ ಭಾರತ ವಿಶ್ವಕ್ಕೆ ಗುರುವಾಗಿದೆ ಎಂದ ಅವರು, ಯಾರು ಆರೋಗ್ಯ, ಸಂಸ್ಕಾರ, ಜ್ಞಾನವಂತರಾಗಿರುತ್ತಾರೆಯೋ ಅವರೇ ದೇಶದ ನಿಜವಾದ ಸಂಪತ್ತು ಎಂದು ಹೇಳಿದರು.
ಬಳ್ಳಾರಿ ವಿದ್ಯಾನಿಧಿ ಅಕಾಡೆಮಿ ಪ್ರಾಚಾರ್ಯರಾದ ಈಶ್ವರಿ ಕೃಷ್ಣ ಶರ್ಮ ಮಾತನಾಡಿದರು. ಅಧ್ಯಕ್ಷ ಚನ್ನನಗೌಡ, ಕಾರ್ಯದರ್ಶಿ ವಾಗೀಶ್, ಆಡಳಿತ ಮಂಡಳಿ ಸದಸ್ಯರಾದ ಕೃಷ್ಣ, ಪ್ರಕಾಶ ಅಂಗಡಿ, ಶಿವಕುಮಾರ, ಸಂತೋಷ ಜಟ್ಟಿ, ಚನ್ನಬಸವರಾಜ, ಮಂಜುನಾಥ, ವಾಗೀಶ ಇಟ್ಟಗಿ ಇದ್ದರು.