- ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಅಭಿಮತ । ಇಬ್ರಾಹಿಂಪೂರದ ಸಾಯಿಮಂದಿರದ 4ನೇ ವರ್ಷ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಯಾದಗಿರಿ
ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರೂ ಮೊದಲು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಅವರಲ್ಲಿ ಉನ್ನತ ಗುರಿ ಮೂಡಿಸಿ ಸೂಕ್ತ ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಪರಿಶ್ರಮದಿಂದ ಗುರಿ ತಲುಪಿ ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಾರೆ ಎಂದು ಕನ್ನಡದ ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಅಭಿಪ್ರಾಯಪಟ್ಟರು.ಶಹಾಪೂರ ತಾಲೂಕಿನ ಇಬ್ರಾಹಿಂಪೂರ ಗ್ರಾಮದಲ್ಲಿರುವ ಸಾಯಿ ಮಂದಿರದ ಆವರಣದಲ್ಲಿ 4ನೇ ವರ್ಷದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಭರತ ಭೂಮಿ ಪವಿತ್ರ ಶರಣರ, ಸೂಫಿ-ಸಂತರ ನಾಡು. ಇಲ್ಲಿ ಆಧ್ಯಾತ್ಮಿಕಕ್ಕೆ ಮೊದಲಿನಿಂದಲೂ ಜನರು ಹೆಚ್ಚು ಪ್ರಾಮುಖ್ಯತೆ ಇರುವುದನ್ನು ಕಾಣುತ್ತೇವೆ, ಆಯಾ ಕಾಲಕ್ಕೆ ಆಧ್ಯಾತ್ಮಿಕ ಸಾಧಕರು ತಮ್ಮ ಬದುಕನ್ನೆ ಸಮಾಜದ ಪ್ರಗತಿಗೆ ಅರ್ಪಿಸಿದ್ದಾರೆ, ಅವರ ಸಾಲಿನಲ್ಲಿ ಶಿರಡಿ ಸಾಯಿಬಾಬಾ ಒಬ್ಬರು ಅವರು ನೀಡಿರುವ ಮಾನವೀಯ ಸಂದೇಶ ಎಲ್ಲರೂ ಅಳವಡಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸುವುದು ಅವಶ್ಯಕ ಎಂದು ಹೇಳಿದರು.ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಜನರು ಬಹಳ ಮುಗ್ಧರು, ಕನ್ನಡ ಚಲನಚಿತ್ರಗಳನ್ನು ಸದಾ ವೀಕ್ಷಿಸಿ, ಕಲಾವಿದರನ್ನು ಪ್ರೋತ್ಸಾಹಿಸಿದ ಪರಿಣಾಮ ಇನ್ನೂ ಕನ್ನಡ ಭಾಷೆ, ಸಂಸ್ಕೃತಿ ಗಟ್ಟಿಯಾಗಿ ಉಳಿದಿದೆ. ಈ ಭಾಗದಲ್ಲಿ ಕೂಡ ಹಲವಾರು ಪ್ರತಿಭೆಗಳಿವೆ ನಾವೆಲ್ಲರೂ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿ, ಬೆಂಬಲಿಸಬೇಕು. ಇದರಿಂದ ಅವರ ಪ್ರತಿಭೆ ಸಾರ್ವಜನಿಕವಾಗಿ ಅನಾವರಣಗೊಂಡು ನಾಡಿಗೆ ಪರಿಚಯಿಸಲು ಸಹಕಾರಿ ಯಾಗುತ್ತದೆ ಎಂದು ಸಲಹೆ ನೀಡಿದರು.
ಗಡಿ ಜಿಲ್ಲೆಯ ಜನರಲ್ಲಿ ಬಸವಾದಿ ಶರಣರ ವೈಚಾರಿಕೆ ಚಿಂತನೆ ತಲುಪಿಸುವ ಮೂಲಕ ಸಾಮಾಜಿಕವಾಗಿ ಪರಿವರ್ತನೆಗೆ ಎಲ್ಲರೂ ಶ್ರಮಿಸುವುದು ಅವಶ್ಯಕ. ಈ ಕ್ಷೇತ್ರ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕಾಣುವ ಮೂಲಕ ಸಮಾಜ ಮುಖಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಎಲ್ಲರ ಗಮನ ಸೆಳೆಯಲಿ ಎಂದು ತಿಳಿಸಿದರು.ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕಾರ್ಯಕ್ರಮ ಉದ್ಘಾಟಿಸಿ, ನಾವು ಇಂದು ಸದಾ ನಮ್ಮ ಚಟುವಟಿಕೆಗಳಿಗೆ ಹೆಚ್ಚು ಸಮಯ ನೀಡುತ್ತಿರುವುದರಿಂದ ಶಾಂತಿ, ನೆಮ್ಮದಿಯಿಂದ ದೂರವಾಗುತ್ತಿದ್ದೇವೆ ಎಂಬ ಅರಿವು ಇದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಎಲ್ಲಾ ವರ್ಗದ ಜನರೊಂದಿಗೆ ಬೆರೆತು ನಿಮ್ಮ ಕಾರ್ಯಗಳಲ್ಲಿ ನಾವು ತೊಡಗಿಸಿಕೊಳ್ಳಬೇಕು ಅಂದಾಗ ಮಾತ್ರ ಎಲ್ಲರಿಗೂ ಭಾವೈಕ್ಯತೆಯ ಭಗವಂತ ಸಾಯಿಬಾಬಾರ ಆಶೀರ್ವಾದ ಎಲ್ಲರಿಗೂ ಸಿಗುತ್ತದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಇಂದು ನಾವು ಬದುಕಿನಲ್ಲಿ ದೈವದತ್ತವಾಗಿ ಒಲಿದಿರುವ ಕಾಯಕದಲ್ಲಿ ನಿಷ್ಠೆಯಿಂದ ಕೆಲಸ ಮಾಡಬೇಕು, ಆದಷ್ಟು ಕಡಿಮೆ ಆಸೆಗಳನ್ನು ಇಟ್ಟುಕೊಳ್ಳಬೇಕು. ಅಂದಾಗ ಮಾತ್ರ ಮನಸ್ಸಿಗೆ ಹೊಸ ಚೈತನ್ಯ ಶಕ್ತಿ ಪ್ರಾಪ್ತಿಯಾಗುತ್ತದೆ ಎಂದರು.ಸಮಾರಂಭದಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಈ ಭಾಗದಲ್ಲಿ ದಿಗ್ಗಿ ಪರಿವಾರದ ಯುವಕರು ಕೈಗೊಂಡಿರುವ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ಇನ್ನೂ ವಿಸ್ತಾರವಾಗಿ ಎಲ್ಲರಿಗೂ ಅದರ ಲಾಭ ಸಿಗಲಿ ಎಂದರು.
ಅರಕೇರಾ ಬಿ. ಗುರುಲಿಂಗ ಸ್ವಾಮೀಜಿ, ಶಹಾಪೂರ ಕಾಳಹಸ್ತೇಂದ್ರ ಸ್ವಾಮೀಜಿ ನಿಖಿಲ್ರಾಜ್ ಮೌರ್ಯ, ತಿಪ್ಪೇಸ್ವಾಮಿ, ನವೀನಕುಮಾರ, ವಿ. ರವಿ, ಟ್ರಸ್ಟಿನ್ ಅಧ್ಯಕ್ಷ ಮಹಾರಾಜ್ ದಿಗ್ಗಿ, ಸಿದ್ದಪ್ಪಾಜಿ, ಕು. ಲಲಿತಾ ಅನಪೂರ, ಬಸ್ಸುಗೌಡ ಬಿಳ್ಹಾರ, ಜಹೀರುದ್ದೀನ್ ಸವೇರಾ, ಜಾನಪದ ಕಲಾವಿದ ಬಾಳು ಬೆಳಗುಂದಿ, ಮಲ್ಲಣ್ಣ ಐಕೂರ, ಶ್ರೀಧರ ಸಾಹುಕಾರ, ಗೌಡಪ್ಪಗೌಡ ಆಲ್ದಾಳ, ಬಾಷುಮಿಯಾ ವಡಗೇರಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಂತರ ಬೆಂಗಳೂರಿನ ಹಾಗೂ ಸ್ಥಳೀಯ ವಿವಿಧ ಕಲಾ ತಂಡಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.-
19ವೈಡಿಆರ್8: ಶಹಾಪೂರ ತಾಲೂಕಿನ ಇಬ್ರಾಹಿಂಪೂರ ಗ್ರಾಮದಲ್ಲಿರುವ ಸಾಯಿ ಮಂದಿರದ ಆವರಣದಲ್ಲಿ ನಡೆದ 4ನೇ ವರ್ಷದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡದ ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಮಾತನಾಡಿದರು.-
19ವೈಡಿಆರ್9 : ಶಹಾಪೂರ ತಾಲೂಕಿನ ಇಬ್ರಾಹಿಂಪೂರದ ಸಾಯಿ ಮಂದಿರದಲ್ಲಿ ಆಯೋಜಿಸಿದ್ದ 4ನೇ ವರ್ಷದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಿದರು.