ನರೇಗಾ ಯೋಜನೆಯಡಿ ನಿರ್ಮಿಸಿದ ಸಭಾಭವನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಬ್ಯಾಡಗಿಅಶಿಕ್ಷಿತರ ಗುಂಪಿನಲ್ಲಿ ವಿದ್ಯಾವಂತ ವ್ಯಕ್ತಿ ಯಾವಾಗಲೂ ಎದ್ದು ಕಾಣುತ್ತಾನೆ. ಶಿಕ್ಷಣದೊಂದಿಗೆ ಜ್ಞಾನಪ್ರಾಪ್ತಿ ಆಗಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಪ್ರಗತಿ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದು, ಶಿಕ್ಷಣವು ಇಂದಿಗೂ ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಹಿರೇಅಣಜಿ ಗ್ರಾಮದ ಪ್ರೌಢಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಸಭಾಭವನ ಉದ್ಘಾಟಿಸಿ ಅವರು ಮಾತನಾಡಿದರು. ವ್ಯಕ್ತಿಯನ್ನು ಜ್ಞಾನವುಳ್ಳ ನಾಗರಿಕನನ್ನಾಗಿ ಮಾಡುವುದಷ್ಟೇ ಅಲ್ಲ, ಸ್ವಾವಲಂಬಿಯನ್ನಾಗಿಸಲು ಶಿಕ್ಷಣದಿಂದ ಸಾಧ್ಯ, ಪ್ರತಿಯೊಬ್ಬ ಯುವಕರು ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು, ಕಡ್ಡಾಯ ಶಿಕ್ಷಣವನ್ನು ನಾವೆಲ್ಲರೂ ಮುಕ್ತವಾಗಿ ಸ್ವಾಗತಿಸೋಣ ಎಂದರು.ಪರೀಕ್ಷೆಗಳ ಫಲಿತಾಂಶವಲ್ಲ: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪರೀಕ್ಷೆಗಳ ಫಲಿತಾಂಶವಲ್ಲ, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಂದು ಹಂತದಲ್ಲಿ ನಮಗೆ ನೆರವಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ಸಮಗ್ರ ಶಿಕ್ಷಣದಿಂದ ಜ್ಞಾನ, ಕೌಶಲ್ಯ, ತಂತ್ರಜ್ಞಾನ ಇತರ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಇದರಿಂದ ರಾಷ್ಟ್ರದ ಅಭಿವೃದ್ಧಿಗೆ ತಮ್ಮನ್ನು ಕೊಡುಗೆಯಾಗಿ ಶಿಕ್ಷಣವು ನೀಡಲಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಹಿರೇಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚೆನ್ನಬಸಪ್ಪ ಹುಲ್ಲತ್ತಿ, ಎಸ್ಡಿಎಂಸಿ ಉಪಾಧ್ಯಕ್ಷ ಕರಿಬಸಪ್ಪ ಚಿಕ್ಕಮತ್ತೂರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪ್ರಭುಗೌಡ ಪಾಟೀಲ, ಮಹೇಶಗೌಡ ಪಾಟೀಲ, ಮುಖಂಡರಾದ ದಾನಪ್ಪ ಚೂರಿ, ಮಂಜನಗೌಡ ಲಿಂಗನಗೌಡ್ರ, ಬಸವರಾಜ ಕೋಣನವರ, ಚಂದ್ರಶೇಖರ ಬಿಳಕಿ, ಬಸನಗೌಡ ಪರಪ್ಪಗೌಡ್ರು, ಬಸವರಾಜಗೌಡ. ಪಿಡಿಒ ಬಸವರಾಜ ಶಿಡ್ರಳ್ಳಿ, ಗುತ್ತಿಗೆದಾರ ಗಣೇಶ ಚಿಕ್ಕಳ್ಳಿ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.