ಯುದ್ಧದ ಪರಿಣಾಮ: ಗ್ಯಾಸ್ ಬುಕ್ಕಿಂಗ್‌ಗೆ ಮುಗಿಬಿದ್ದ ಜನ..!

KannadaprabhaNewsNetwork |  
Published : Mar 12, 2026, 12:30 AM IST
೧೧ಕೆಎಂಎನ್‌ಡಿ-೧ಮಂಡ್ಯದ ಅಪೂರ್ವ ವೆಜ್ ಹೋಟೆಲ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳು ಮುಗಿಯುವ ಹಂತದಲ್ಲಿರುವ ದೃಶ್ಯ. | Kannada Prabha

ಸಾರಾಂಶ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್‌ಗೆ ಅಭಾವ ಸೃಷ್ಟಿಯಾಗಬಹುದೆಂಬ ಆತಂಕದಿಂದ ಜನರು ಬುಕ್ಕಿಂಗ್‌ಗೆ ಮುಗಿಬಿದ್ದಿದ್ದಾರೆ. ಏಕಕಾಲಕ್ಕೆ ಸಾವಿರಾರು ಮಂದಿ ಸಿಲಿಂಡರ್ ಬುಕ್ ಮಾಡಲು ದುಂಬಾಲು ಬಿದ್ದಿರುವುದರಿಂದ ಸರ್ವರ್ ಜಾಮ್ ಆಗಿದೆ. ಯಾವುದೇ ಬುಕ್ಕಿಂಗ್ ಆಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್‌ಗೆ ಅಭಾವ ಸೃಷ್ಟಿಯಾಗಬಹುದೆಂಬ ಆತಂಕದಿಂದ ಜನರು ಬುಕ್ಕಿಂಗ್‌ಗೆ ಮುಗಿಬಿದ್ದಿದ್ದಾರೆ. ಏಕಕಾಲಕ್ಕೆ ಸಾವಿರಾರು ಮಂದಿ ಸಿಲಿಂಡರ್ ಬುಕ್ ಮಾಡಲು ದುಂಬಾಲು ಬಿದ್ದಿರುವುದರಿಂದ ಸರ್ವರ್ ಜಾಮ್ ಆಗಿದೆ. ಯಾವುದೇ ಬುಕ್ಕಿಂಗ್ ಆಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ವಾಣಿಜ್ಯ ಉದ್ದೇಶಕ್ಕೆ ಸಿಲಿಂಡರ್ ನೀಡದಂತೆ ನಿರ್ಬಂಧ ವಿಧಿಸಿರುವುದರಿಂದ ಹೋಟೆಲ್ ಉದ್ಯಮ ಕೂಡ ತಲ್ಲಣಗೊಂಡಿದೆ. ಹೋಟೆಲ್‌ಗಳಲ್ಲಿ ಎರಡು-ಮೂರು ದಿನಕ್ಕಾಗುವಷ್ಟು ಸಿಲಿಂಡರ್ ಮಾತ್ರ ದಾಸ್ತಾನು ಇದೆ. ಆನಂತರ ಮುಂದೇನು ಎಂಬ ಬಗ್ಗೆ ಹೋಟೆಲ್ ಮಾಲೀಕರು ದಿಕ್ಕೆಟ್ಟಿದ್ದಾರೆ.

ಗೃಹ ಬಳಕೆಯ ಸಿಲಿಂಡರ್‌ಗೆ ಮಂಗಳವಾರದವರೆಗೆ ಬುಕ್ಕಿಂಗ್ ತೆಗೆದುಕೊಳ್ಳುತ್ತಿತ್ತು. ಆದರೆ, ಬುಧವಾರ ಬೆಳಗ್ಗೆಯಿಂದ ಸರ್ವರ್ ಸಮಸ್ಯೆ ಎದುರಾಗಿದೆ. ಹಲವೆಡೆ ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ. ಫೋನ್ ಮೂಲಕ ಗೃಹ ಬಳಕೆದಾರರು ನಿರಂತರವಾಗಿ ಬುಕ್ಕಿಂಗ್‌ಗೆ ಪ್ರಯತ್ನಿಸುತ್ತಿದ್ದರೂ ಬುಕ್ಕಿಂಗ್ ಆಗದೆ ಪೇಚಿಗೆ ಸಿಲುಕಿದ್ದಾರೆ. ಎರಡು ಸಿಲಿಂಡರ್‌ಗಳ ಪೈಕಿ ಒಂದು ಖಾಲಿ ಇದ್ದು, ಇನ್ನೊಂದನ್ನು ಉಪಯೋಗಿಸುತ್ತಿದ್ದರೂ ಅಭಾವ ಎದುರಾಗುವ ಆತಂಕದಿಂದ ಇನ್ನೊಂದು ಸಿಲಿಂಡರ್‌ನ್ನೂ ಬುಕ್ ಮಾಡಲು ಜನರು ಮುಗಿಬಿದ್ದಿದ್ದಾರೆ. ಇದರಿಂದ ಸಿಲಿಂಡರ್ ಅಗತ್ಯವಿರುವವರಿಗೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳವಳ್ಳಿ, ಶ್ರೀರಂಗಪಟ್ಟಣ, ಮಂಡ್ಯ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಜನರಿಗೆ ಗ್ಯಾಸ್ ಬುಕ್ಕಿಂಗ್ ಸಿಗದೆ ಪರದಾಡಿದ್ದಾರೆ. ಕೆಲವರು ಹೆಚ್ಚುವರಿ ಹಣಕ್ಕಾಗಿ ವಾಣಿಜ್ಯ ಬಳಕೆದಾರರಿಗೆ ಗೃಹಬಳಕೆ ಸಿಲಿಂಡರ್ ನೀಡಿ ಪೇಚಿಗೆ ಸಿಲುಕಿರುವ ನಿದರ್ಶನಗಳಿವೆ. ಹೋಟೆಲ್, ಬೇಕರಿ ಸೇರಿದಂತೆ ಇನ್ನಿತರ ವಾಣಿಜ್ಯ ಉದ್ದೇಶಕ್ಕೆ ಸಿಲಿಂಡರ್ ನೀಡದಿರುವ ಕಾರಣ ವಾಣಿಜ್ಯ ಬಳಕೆದಾರರು ಗೃಹ ಬಳಕೆದಾರರನ್ನು ಕಾಡಿ-ಬೇಡಿ ೨೦೦ ರು.ನಿಂದ ೩೦೦ ರು. ಹೆಚ್ಚುವರಿ ಹಣ ನೀಡಿ ಸಿಲಿಂಡರ್‌ಗಳನ್ನು ಪಡೆದುಕೊಂಡು ಉಪಯೋಗಿಸುತ್ತಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ಸಿಲಿಂಡರ್‌ಗಳನ್ನು ನೀಡಿರುವ ಗ್ರಾಹಕರು ಈಗ ಬುಕ್ಕಿಂಗ್ ಸಿಗದೆ ಒದ್ದಾಡುವಂತಾಗಿದೆ. ದಿಕ್ಕೆಟ್ಟ ಹೋಟೆಲ್ ಮಾಲೀಕರು

ವಾಣಿಜ್ಯ ಉದ್ದೇಶಕ್ಕೆ ಅಡುಗೆ ಅನಿಲ ನೀಡದಂತೆ ನಿರ್ಬಂಧ ವಿಧಿಸಿರುವುದರಿಂದ ಜಿಲ್ಲೆಯ ಹೋಟೆಲ್ ಮಾಲೀಕರು ದಿಕ್ಕೆಟ್ಟಿದ್ದಾರೆ. ಎರಡು-ಮೂರು ದಿನಕ್ಕೆ ಸಾಲುವಷ್ಟು ಸಿಲಿಂಡರ್‌ಗಳು ಮಾತ್ರ ಹೋಟೆಲ್‌ನವರ ಬಳಿ ದಾಸ್ತಾನಿರುವುದರಿಂದ ಶುಕ್ರವಾರದ ನಂತರ ಮುಂದೇನು ಎಂದು ಚಿಂತೆಗೀಡಾಗಿದ್ದಾರೆ.

ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿನಿಲಯಗಳಿಗೆ ಹೊರತುಪಡಿಸಿ ಉಳಿದ ವಾಣಿಜ್ಯ ಉದ್ದೇಶಗಳಿಗೆ ಸಿಲಿಂಡರ್‌ಗಳನ್ನು ನೀಡದಂತೆ ನಿರ್ಬಂಧ ವಿಧಿಸಿರುವುದರಿಂದ ಹೋಟೆಲ್ ಮಾಲೀಕರಿಗೆ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿದೆ. ಸಣ್ಣ ಪ್ರಮಾಣದ ಹೋಟೆಲ್ ನಡೆಸುವವರಿಗೆ ದಿನಕ್ಕೆ ಕನಿಷ್ಠ ಎರಡು ಹಾಗೂ ದೊಡ್ಡ ಪ್ರಮಾಣದ ಹೋಟೆಲ್ ನಡೆಸುವವರಿಗೆ ಪ್ರತಿದಿನ ಕನಿಷ್ಠ ೪ ರಿಂದ ಗರಿಷ್ಠ ೯ ಸಿಲಿಂಡರ್‌ಗಳ ಅವಶ್ಯಕತೆ ಇದೆ. ಅವರ ಬಳಿ ಶುಕ್ರವಾರದವರೆಗೆ ಸಾಲುವಷ್ಟು ಮಾತ್ರ ಅಡುಗೆ ಅನಿಲವಿದೆ. ಕೆಲವರು ೫ ಕೆಜಿ ಸಿಲಿಂಡರ್‌ಗಳನ್ನು ತಂದು ಉದ್ಯಮ ಮುನ್ನಡೆಸುತ್ತಿದ್ದಾರೆ. ಕೆಲವರು ಸೌದೆ ಒಲೆಯನ್ನು ರೆಡಿಮಾಡಿಕೊಂಡು ಸೌದೆಯನ್ನೂ ದಾಸ್ತಾನು ಮಾಡಿಕೊಳ್ಳುವುದಕ್ಕೂ ಮುಂದಾಗಿದ್ದಾರೆ.೫೪೪೬೦೫ ಸಂಪರ್ಕಕ್ಕೆ ೧೫೩೫೧ ಗೃಹ, ೧೩೪೯ ವಾಣಿಜ್ಯ ಸಿಲಿಂಡರ್ ದಾಸ್ತಾನು

ಎಚ್‌ಪಿ ಕಾರ್ಪೋರೇನ್‌ನ ಕಂಪನಿಯ ೨,೧೨,೭೨೭ ಸಂಪರ್ಕವಿದ್ದು, ೧೪.೨ ಕೆಜಿಯ ಅಡುಗೆ ಬಳಕೆಯ ಸಿಲಿಂಡರ್‌ಗಳು ೭೬೯೪ ದಾಸ್ತಾನಿದೆ. ವಾಣಿಜ್ಯ ಉದ್ದೇಶದ ೧೧೪ ಸಿಲಿಂಡರ್‌ಗಳು ದಾಸ್ತಾನಿದ್ದು, ೫ ಕೆಜಿ ಗೃಹ ಬಳಕೆ ಹಾಗೂ ವಾಣಿಜ್ಯ ಉದ್ದೇಶದ ೮೦೬ ಸಿಲಿಂಡರ್‌ಗಳು ದಾಸ್ತಾನಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ೧೬ ಏಜೆನ್ಸಿಗಳಲ್ಲಿ ೧,೯೩,೪೬೮ ಸಂಪರ್ಕವಿದ್ದು, ೫೯೩೪ ಗೃಹಬಳಕೆ ಸಿಲಿಂಡರ್‌ಗಳು, ವಾಣಿಜ್ಯ ಉದ್ದೇಶದ ೩೦೩ ಹಾಗೂ ೫ ಕೆಜಿಯ ೫೭೧ ಸಿಲಿಂಡರ್‌ಗಳು ದಾಸ್ತಾನಿದೆ. ಬಿಪಿಸಿಯ ೯ ಏಜೆನ್ಸಿಗಳಲ್ಲಿ ೧,೩೮,೪೧೦ ಸಂಪರ್ಕವಿದ್ದು ಗೃಹ ಬಳಕೆಯ ೧೭೨೩, ವಾಣಿಜ್ಯ ಉದ್ದೇಶದ ೭೦೧ ಹಾಗೂ ೫ ಕೆಜಿಯ ೯೦೦ ಸಿಲಿಂಡರ್‌ಗಳು ದಾಸ್ತಾನಿದೆ. ಒಟ್ಟು ೩೯ ಏಜೆನ್ಸಿಗಳಿಂದ ೫,೪೪,೬೦೫ ಸಂಪರ್ಕಗಳಿದ್ದು ೧೫೩೫೧ ಗೃಹಬಳಕೆ, ೧೩೪೯ ವಾಣಿಜ್ಯ ಹಾಗೂ ೫ ಕೆಜಿ ಸಾಮರ್ಥ್ಯದ ೨೨೭೭ ಅಡುಗೆ ಅನಿಲ ದಾಸ್ತಾನಿರುವುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯವಸ್ಥಾಪಕಿ ಎಂ.ರೇಣುಕಾ ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದರು.

ಗ್ಯಾಸ್ ಬೆಲೆ ಹೆಚ್ಚು ಮಾಡಿ ಸಪ್ಲೈ ಕೊಡ್ತೀವಿ ಎಂದಿದ್ದರು. ಈಗ ಸ್ಟಾಕ್ ಇಲ್ಲ ಅಂತಿದ್ದಾರೆ. ಹೀಗಾದರೆ ಹೋಟೆಲ್ ಉದ್ಯಮ ನಡೆಸೋದು ಹೇಗೆ. ನಮಗೆ ನಿತ್ಯ ೭ ರಿಂದ ೮ ಸಿಲಿಂಡರ್ ಬೇಕು. ಇನ್ನೆರಡು ದಿನಕ್ಕೆ ಗ್ಯಾಸ್ ಖಾಲಿಯಾಗಲಿದೆ. ಆನಂತರ ಏನು ಮಾಡೋದು ಎಂಬುದೇ ಚಿಂತೆಯಾಗಿದೆ.

- ಅನಿಲ್, ಅಪೂರ್ವ ವೆಜ್

ಸಿಲಿಂಡರ್ ಸಿಗದೆ ೫ ಕೆಜಿ ಸಿಲಿಂಡರ್‌ಗಳನ್ನು ತಂದು ಹೋಟೆಲ್ ನಡೆಸುತ್ತಿದ್ದೇವೆ. ಬುಕ್ಕಿಂಗ್, ಬಿಲ್ಲಿಂಗ್ ಎರಡೂ ಆಗುತ್ತಿಲ್ಲ. ಬುಕ್ಕಿಂಗ್‌ನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿದ್ದಾರೆ. ಆದರೂ ಹೋಟೆಲ್ ಉದ್ಯಮ ನಡೆಸುವುದು ಅನಿವಾರ್ಯ, ೫ ಕೆಜಿ ಸಿಲಿಂಡರ್‌ಗಳಲ್ಲಿ ನಿರ್ವಹಣೆ ಮಾಡುತ್ತಿದ್ದೇವೆ.

- ಗೋಪಿ, ಹರ್ಷ ಕೆಫೆ

ನಮಗೆ ದಿನಕ್ಕೆ ೧ರಿಂದ ೨ ಸಿಲಿಂಡರ್ ಬೇಕು. ನಮ್ಮ ಬಳಿ ೪ ರಿಂದ ೫ ಸಿಲಿಂಡರ್‌ಗಳಿವೆ. ಶುಕ್ರವಾರದವರೆಗೆ ಹೇಗೋ ನಿರ್ವಹಣೆ ಮಾಡಬಹುದು. ವೀಕೆಂಡ್‌ನಲ್ಲಿ ಸಮಸ್ಯೆ ಎದುರಾಗಲಿದೆ. ಹೋಟೆಲ್ ಮುನ್ನಡೆಸದೇ ವಿಧಿಯಿಲ್ಲ. ಮುಂದೇನು ಮಾಡಬೇಕೋ ಗೊತ್ತಾಗುತ್ತಿಲ್ಲ.

- ಕಿರಣ್ ಪ್ರಶಾಂತ್, ಮಂಡ್ಯ ಟಿಫಾನೀಸ್

ಗೃಹಬಳಕೆ ಅಡುಗೆ ಅನಿಲಕ್ಕೆ ನಿಜವಾಗಿಯೂ ಅಭಾವ ಎದುರಾಗಿಲ್ಲ. ಸಾಕಷ್ಟು ದಾಸ್ತಾನಿದೆ. ಜನರು ಅಭಾವ ಎದುರಾಗಬಹುದೆಂಬ ಆತಂಕದಿಂದ ಒಮ್ಮೆಲೆ ಬುಕ್ಕಿಂಗ್‌ಗೆ ಮುಗಿಬಿದ್ದಿದ್ದಾರೆ. ಇದರಿಂದ ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ. ಸರ್ವರ್ ಜಾಮ್ ಆಗಿದೆ. ಜನರು ಭಯ-ಆತಂಕಗೊಳ್ಳುವುದು ಬೇಡ. ಸಮಾಧಾನದಿಂದ ಬುಕ್ಕಿಂಗ್ ಮಾಡಿದರೆ ಸಿಲಿಂಡರ್ ಸಿಗಲಿದೆ.

- ಪ್ರತೀಕ್ ಹೆಗ್ಡೆ, ಉಪ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ನಿಗಮ

ನಿನ್ನೆಯವರೆಗೂ ಗೃಹಬಳಕೆ ಸಿಲಿಂಡರ್‌ಗಳ ಬುಕ್ಕಿಂಗ್ ತೆಗೆದುಕೊಳ್ಳುತ್ತಿತ್ತು. ಆದರೆ, ಇವತ್ತು ಬೆಳಗ್ಗೆಯಿಂದ ಸರ್ವರ್ ಸಮಸ್ಯೆಯಾಗಿದೆ. ಒಂದೇ ಒಂದು ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ. ಬುಕ್ಕಿಂಗ್‌ಗೆ ಹೆಚ್ಚು ಜನರು ಏಕಕಾಲಕ್ಕೆ ಮುಗಿಬಿದ್ದಿರುವುದೇ ಇದಕ್ಕೆ ಕಾರಣ.

- ಗುರು ನರಸಿಂಹ ಗ್ಯಾಸ್ ಏಜೆನ್ಸಿ, ಶ್ರೀರಂಗಪಟ್ಟಣ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ