ಶಿರಸಿ: ಪದವಿಯಲ್ಲಿ ಅಧ್ಯಯನದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅಧ್ಯಯನವನ್ನು ಒಂದು ಹಂತಕ್ಕೆ ಮುಗಿಸಿದ್ದೀರಿ. ನಿಜವಾದ ಪರೀಕ್ಷೆ ಈಗ ನಿಮಗೆ ಪ್ರಾರಂಭವಾಗುತ್ತದೆ ದಕ್ಷತೆ, ಬದ್ಧತೆ, ಜವಾಬ್ದಾರಿ ನಿಮ್ಮದಾಗಬೇಕಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ರವಿ ನಾಯಕ ಹೇಳಿದರು.
ನೀವು ಜೀವನದಲ್ಲಿ ನಾಲ್ಕು ಅಂಶ ಅಳವಡಿಸಿಕೊಳ್ಳಬೇಕು. ಈಗಾಗಲೇ ಭವಿಷ್ಯದ ಕನಸನ್ನು ಕಂಡಿದ್ದೀರಿ, ನನಸು ಮಾಡಿಕೊಳ್ಳಲು ಬದ್ಧತೆ ಬೇಕು. ನಿಮ್ಮನ್ನು ಕಷ್ಟಪಟ್ಟು ನಿಮ್ಮ ತಂದೆ ತಾಯಿ ಓದಿಸಿದ್ದಾರೆ ಅವರ ವೃದ್ಧಾಪ್ಯದಲ್ಲಿ ಉತ್ತಮವಾಗಿ ನೋಡಿಕೊಳ್ಳಬೇಕು. ಶಿಕ್ಷಕರಿಗೆ ಗೌರವ ನೀಡಬೇಕು. ಸಮಾಜದೊಟ್ಟಿಗೆ ಬದುಕುವ ನೀವು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಈ ನಾಲ್ಕು ಅಂಶಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ವಿಚಾರವಾಗಿದೆ ಎಂದರು.
ಕಾಲೇಜು ಉಪಸಮಿತಿ ಸದಸ್ಯ ಪ್ರಸಾದ ಭಟ್ ಮಾತನಾಡಿ, ಅಹಂಕಾರ ಬಿಟ್ಟು ವಿದ್ಯಾ ದೇಗುಲದ ಬಾಗಿಲನ್ನು ತಟ್ಟಿದರೆ ಭವಿಷ್ಯ ಉಜ್ವಲವಾಗುತ್ತದೆ. ನಿಮ್ಮ ಭವಿಷ್ಯವು ಉಜ್ವಲವಾಗಬೇಕು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಎಂದು ಕರೆಕೊಟ್ಟರು.ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಪ್ರಾಚಾರ್ಯ ಜಿ.ಟಿ. ಭಟ್ಟ ಮಾತನಾಡಿ, ಸಂಸ್ಕೃತದಲ್ಲಿ ಒಂದು ಸಾಲಿದೆ ಅಂತಃ ಅಸ್ತಿ ಪ್ರಾರಂಭ ಎಂದು ಅದರ ಅರ್ಥ ಎಲ್ಲಿ ಮುಕ್ತಾಯವೋ ಅಲ್ಲಿಂದಲೇ ಪ್ರಾರಂಭ ಎಂದು ಹಾಗಾಗಿ ಪದವಿ ಮುಗಿಸಿ ಹೋಗುತ್ತಿರುವ ನೀವು ಹೊಸ ಜೀವನ ಪ್ರಾರಂಭಿಸುತ್ತೀರಿ. ಅದು ನಿಮಗೆ ಎಲ್ಲ ಸೌಭಾಗ್ಯ ನೀಡಲಿ. ನಿಮ್ಮ ಶ್ರಮ ನಿಮ್ಮ ಸಮರ್ಪಣಾ ಭಾವ ಜೀವನ ಉಜ್ವಲವಾಗಿಸಲಿ ಎಂದರು.
ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಸುದೀಪ್ ಮಾಳಿ ಮತ್ತು ಪವನ್ ದೇವಾಡಿಗ ಉಪಸ್ಥಿತರಿದ್ದರು. ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಪ್ರೊ. ರಾಘವೇಂದ್ರ ಹೆಗಡೆ ವಂದಿಸಿದರು. ವಿದ್ಯಾರ್ಥಿ ದಿವ್ಯಾಗಾವ್ಕರ್ ನಿರೂಪಿಸಿದರು.