ಕನ್ನಡಪ್ರಭವಾರ್ತೆ ಸೋಮವಾರಪೇಟೆ
ವರ್ಷಪೂರ್ತಿ ಕೆಲಸ ಮಾಡುವ ರೈತರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಭಿಪ್ರಾಯಿಸಿದರು.ರೈತ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಸೋಮವಾರ ಇಲ್ಲಿನ ಒಕ್ಕಲಿಗರ ಸಮುದಾಯಭವನದ ಶ್ರೀಗಂಧ ಸಭಾಂಗಣದಲ್ಲಿ ಇತ್ತೀಚೆಗೆ ಅಗಲಿದ ರೈತ ಮುಖಂಡರಿಗೆ ಆಯೋಜಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೋರಾಟಗಾರರು, ಚಳುವಳಿಗಾರರು ಯಾರಿಂದಲೂ ಯಾವುದನ್ನೂ ಬಯಸುವುದಿಲ್ಲ. ಸ್ವಾಭಿಮಾನಿಗಳಾಗಿರುವ ರೈತರು ಕೇವಲ ಮದುವೆ ಮತ್ತಿತರ ಶುಭ ಸಮಾರಂಭಗಳು, ಹಬ್ಬ ಹರಿದಿನಗಳು, ವಾರದ ಸಂತೆ ಇಂತಹ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಬಾರದು. ಸರ್ಕಾರಗಳು ರೈತರ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ಸಂಘಟಿತ ಹೋರಾಟ ಅಗತ್ಯ. ಪಕ್ಷ ರಾಜಕೀಯವನ್ನು ಕೈಬಿಟ್ಟು ರೈತರ ಏಳಿಗೆಗಾಗಿ ಹೋರಾಟ ರೂಪಿಸಬೇಕು.ಆಗ ಮಾತ್ರ ಪ್ರತಿಫಲ ಪಡೆಯಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಇಂದಿಗೂ ಸಿ ಮತ್ತು ಡಿ ಲ್ಯಾಂಡ್, ಪೌತಿ ಖಾತೆ ಸೇರಿದಂತೆ ರೈತರ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಾಗಿಲ್ಲ. ಕೊಡಗು ಜಿಲ್ಲೆಯು ರಾಜ್ಯ ಸರಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದರೂ ಜಿಲ್ಲೆಯ ಬೆಳೆಗಾರರು ಹಾಗೂ ರೈತರ ಬಗ್ಗೆ ಯಾವುದೇ ಸರಕಾರಗಳಿಗೂ ಕಾಳಜಿ ಇರುವಂತೆ ತೋರುತ್ತಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಬೇಕಾದರೆ ರೈತ ಸಂಘಟನೆ ಇನ್ನಷ್ಟು ಬಲಯುತವಾಗಬೇಕೆಂದರು.
ಇದೇ ಸಂದರ್ಭ ಅಗಲಿದ ರೈತ ಮುಖಂಡರಾದ ಪೊನ್ನಚಂಡ ವಿಷ್ಣು, ಪುರುಷೋತ್ತಮ, ಚಿಣ್ಣಪ್ಪ, ನೀರುಗುಂದ ಸೋಮಪ್ಪ, ಹೊಸಗುತ್ತಿ ಶಂಕರಪ್ಪ, ಐ.ಪಿ.ಭವೇರಪ್ಪ ಅವರ ಸೇವೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.ವೇದಿಕೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಸುಭಾಶ್ ಸುಬ್ಬಯ್ಯ, ರೈತ ಹೋರಾಟ ಸಮಿತಿಯ ಸಂಚಾಲಕ ಕೆ.ಬಿ.ಸುರೇಶ್, ತಾಲೂಕು ಘಟಕದ ಪ್ರಮುಖರಾದ ಹೂವಯ್ಯ ಮಾಸ್ಟರ್, ಟಿ.ಕೆ.ಮಾಚಯ್ಯ ಮತ್ತಿತರರು ಇದ್ದರು.
ಇದೇ ಸಂದರ್ಭ ಸಂಘಕ್ಕೆ ಹಲವು ವರ್ಷಗಳಿಂದ ದುಡಿದ ಹಿರಿಯ ರೈತ ಮುಖಂಡರನ್ನು ಸನ್ಮಾನಿಸಲಾಯಿತು.