ಗಂಗಾವತಿ:
ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ದ್ರೋಹ ಬಗೆದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಎದುರು ಶ್ಯಾಮೀದ್ ಮನಿಯಾರ್ ಸೋಲಿಸಿದ್ದಾರೆಂದು ಸುಳ್ಳು ಹೇಳಿದ್ದಾರೆ. ನಾನು 25 ವರ್ಷಗಳಿಂದ ಪಕ್ಷದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಹೊಸಪೇಟೆಯಲ್ಲಿ ಜರುಗಿದ ಸರ್ಕಾರದ ಸಾಧನ ಸಮಾವೇಶದ ಗಂಗಾವತಿ ಉಸ್ತುವಾರಿಯನ್ನು ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅವರು ನನಗೆ ವಹಿಸಿದ್ದರು. ಸಮಾವೇಶ ಯಶಸ್ವಿಗೊಳಿಸಿದ್ದೇವೆ. ಆದರೆ, ಮಾಜಿ ಸಚಿವರು ತಮಗೆ ಪಾಸ್ ಇಲ್ಲ, ಪಕ್ಷದ ಸಂಘಟನೆಯೂ ಇಲ್ಲ. ಕೇವಲ ಸರ್ಕಾರದ ಯೋಜನೆ ಪಡೆಯುವ ಮಹಾನಾಯಕರು, ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ಬೇರೆ ಊರಲ್ಲಿ ಕುಳಿತ ಅವರನ್ನು ನಂಬಬೇಡಿ, ಇವರನ್ನು ನಂಬಬೇಡಿ ಎನ್ನುವ ಆಡಿಯೋ ರೀಲಿಸ್ ಮಾಡಿ ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.ಮನಿಯಾರ್ ರಾಜೀನಾಮೆ ನೀಡಲಿ:ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ದ್ರೋಹ ಬಗೆದು ಕೆಆರ್ಪಿಪಿ ಪಕ್ಷದ ಅಭ್ಯರ್ಥಿ ಜತೆ ಪ್ರಚಾರ ಮಾಡಿದ ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಕೂಡಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮುಖಂಡ ಜುಬೇರ್ ಒತ್ತಾಯಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನ್ಸಾರಿ ಅವರಿಗೆ ದ್ರೋಹ ಬಗೆದಿರುವುದು ಎಲ್ಲರಿಗೂ ತಿಳಿದಿದೆ. ಮುಂಬರುವ ಚುನಾವಣೆಯಲ್ಲಿ ಮನಿಯಾರ್ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಮೊದಲು ನಗರಸಭೆ ಸ್ಪರ್ಧಿಸಿ ಗೆಲುವು ಸಾಧಿಸಲಿ ಎಂದು ಹೇಳಿದ್ದಾರೆ. ಹೊಸಪೇಟೆಯಲ್ಲಿ ಜರುಗಿದ ಕಾಂಗ್ರೆಸ್ ಸರ್ಕಾರದ ಸಾಧನೆಗೆ ಕಾರ್ಯಕರ್ತರನ್ನು ಕಳಿಸಿಕೊಟ್ಟಿದ್ದಾರೆ. ಅನ್ಸಾರಿ ಅವರ ಸಾಮರ್ಥ್ಯ ಗ್ರಾಮೀಣ ಪ್ರದೇಶದಿಂದ ರಾಜ್ಯಮಟ್ಟದ ನಾಯಕರಿಗೆ ಗೊತ್ತಿದೆ. ಆದರೆ, ಮನಿಯಾರ್ ಅನ್ಸಾರಿ ಬಗ್ಗೆ ಟೀಕಿಸುತ್ತಿರುವುದು ಸರಿಯಲ್ಲ ಎಂದರು. ಈ ವೇಳೆ ಗ್ಯಾರಂಟಿ ಕಮಿಟಿ ಅಧ್ಯಕ್ಷ ವೆಂಕಟೇಶ ಬಾಬು, ಡಾ. ಇಲಿಯಾಸ್ ಬಾಬಾ, ಇಲಿಯಾಸ್ ಖಾದ್ರಿ, ಹುಸೇನಪ್ಪ ಹಂಚಿನಾಳ ಇದ್ದರು.