ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಚಾಲಕರಿಗೆ ಸರ್ಕಾರಿ ಸೌಲಭ್ಯ ದೊರಕಿಸಲು ಪ್ರಯತ್ನ: ಶಿವರಾಮ ಹೆಬ್ಬಾರ್

KannadaprabhaNewsNetwork | Published : Feb 9, 2025 1:16 AM

ಯಲ್ಲಾಪುರ ತಾಲೂಕಿನ ರಿಕ್ಷಾ ಚಾಲಕರಿಗೆ ವಿಶೇಷವಾದ ಗೌರವವಿದ್ದು, ಯಾರೊಡನೆಯೂ ಅಸಭ್ಯವಾಗಿ ವರ್ತಿಸದೇ, ಹೆಚ್ಚಿನ ಬೆಲೆ ಕೇಳದೇ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗುತ್ತಿರುವುದು ಶ್ಲಾಘನೀಯ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.

ಯಲ್ಲಾಪುರ: ರಾಜಕೀಯ ಜೀವನಕ್ಕೂ ಮುಂಚಿತವಾಗಿ ಲಾರಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಚಾಲಕರ ಕಷ್ಟ ನಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಅದಕ್ಕಾಗಿ ರಾಜಕೀಯ ಜೀವನಕ್ಕೆ ಬಂದ ನಂತರ ಚಾಲಕರಿಗೆ ಕೈಲಾದ ಸಹಾಯ ಮಾಡುತ್ತಾ ಸರ್ಕಾರದ ಸೌಲಭ್ಯಗಳು ಸಿಗುವಂತೆ ಪ್ರಯತ್ನಿಸಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.

ಭಗತ್‌ಸಿಂಗ್ ಆಟೋ ಮಾಲೀಕ ಚಾಲಕರ ಸಂಘದ ಗೌರವಾಧ್ಯಕ್ಷ, ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ನಿಮ್ಮದು ಆಟೋ ರಿಕ್ಷಾ ಚಾಲಕ ವೃತ್ತಿ. ತಾಲೂಕಿನ ರಿಕ್ಷಾ ಚಾಲಕರಿಗೆ ವಿಶೇಷವಾದ ಗೌರವವಿದ್ದು, ಯಾರೊಡನೆಯೂ ಅಸಭ್ಯವಾಗಿ ವರ್ತಿಸದೇ, ಹೆಚ್ಚಿನ ಬೆಲೆ ಕೇಳದೇ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗುತ್ತಿರುವುದು ಶ್ಲಾಘನೀಯ ಎಂದರು.

ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಮಾತನಾಡಿ, ಆಟೋ ರಿಕ್ಷಾ ಎಂದರೆ ಬಡವರ ಪಾಲಿನ ಐರಾವತದಂತೆ. ಸುರಕ್ಷಿತವಾಗಿ ಮನೆ ತಲುಪಲು ಒಂದು ಸ್ಥಳದಿಂದ ಮತ್ತೊಂದೆಡೆ ಪಯಣಿಸಲು ಕುಟುಂಬದ ಸದಸ್ಯರಂತೆ ಆತ್ಮೀಯ ಭಾವದಲ್ಲಿ ಸಹಕರಿಸುವ ನಿಮ್ಮ ಸೇವೆ ಶ್ಲಾಘನೀಯ ಎಂದರು.

ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳೀ ಹೆಗಡೆ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಭಗತ್ ಆಟೋ ಮಾಲೀಕ- ಚಾಲಕ ಸಂಘದ ನೂತನ ಅಧ್ಯಕ್ಷ ವಿಜಯ್ ಮಿರಾಶಿ, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ಮಾಜಿ ಅಧ್ಯಕ್ಷರಾದ ಎಂಡಿ ಮುಲ್ಲಾ, ಮಂಜುನಾಥ ರಾಯ್ಕರ್, ಕಿರವತ್ತಿಯ ಪ್ರಮುಖ ರಾಘವೇಂದ್ರ ಗೋಂದಿ, ಪಪಂ ಸದಸ್ಯ ಮತ್ತು ಆಟೋ ಚಾಲಕ ರಾಜು ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕೇಬಲ್ ನಾಗೇಶ್ ಸ್ವಾಗತಿಸಿ, ನಿರ್ವಹಿಸಿ ವಂದಿಸಿದರು.

ನೆಲ್ಲಿಕೇರಿ ಪಿಯು ಕಾಲೇಜಿನಲ್ಲಿ ಕಂಪ್ಯೂಟರ್‌ಗಳ ಉದ್ಘಾಟನೆ

ಕುಮಟಾ: ಪಟ್ಟಣದ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಜೂರಾಗಿದ್ದ ೧೨ ನೂತನ ಕಂಪ್ಯೂಟರ್‌ಗಳನ್ನು ಕಂಪ್ಯೂಟರ್ ವಿಭಾಗದ ಸುಸಜ್ಜಿತ ಕಲಿಕಾ ಕೊಠಡಿಯೊಂದಿಗೆ ಶಾಸಕ ದಿನಕರ ಶೆಟ್ಟಿ ಶನಿವಾರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಶಾಸಕ ದಿನರ ಶೆಟ್ಟಿ ಅವರು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಪಿಯು ಕಾಲೇಜು ನಮ್ಮ ನೆಲ್ಲಿಕೇರಿ ಹನುಮಂತ ಬೆಣ್ಣೆ ಪಿಯು ಕಾಲೇಜು ಎಂಬುದನ್ನು ಗಮನಿಸಬೇಕು. ಇಲ್ಲಿ ೧೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಈ ಕಾಲೇಜಿಗೆ ನಿವೇಶನ, ಕಟ್ಟಡ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆ.

ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕಟ್ಟಡವನ್ನು ಇನ್ನಷ್ಟು ವಿಸ್ತರಿಸುವುದು ಅಗತ್ಯವಾದ್ದರಿಂದ ಸೂಕ್ತ ಮಂಜೂರು ಪಡೆದು ವಿಸ್ತರಣೆ ಕಾರ್ಯ ನಡೆಸಲಾಗಿದೆ. ಕಾಲೇಜಿನ ಆಡಳಿತ ಹಾಗೂ ಬೋಧಕ ವರ್ಗವೂ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ತರುವುದರಲ್ಲಿ ಯಶಸ್ವಿಯಾಗುತ್ತಿರುವುದು ಸಂತಸದಾಯಕ. ಕಾಲೇಜಿಗೆ ಮಂಜೂರಿಯಾದ ಕಂಪ್ಯೂಟರ್‌ಗಳು ವಿದ್ಯಾರ್ಥಿಗಳ ಪಾಲಿಗೆ ಸದುಪಯೋಗವಾಗಬೇಕು. ಇನ್ನೂ ೪ ಹೆಚ್ಚುವರಿ ಕಂಪ್ಯೂಟರ್‌ಗಳನ್ನು ಶೀಘ್ರವೇ ಕಾಲೇಜಿಗೆ ಕೊಡಿಸುತ್ತೇನೆ ಎಂದರು.ಪ್ರಾಚಾರ್ಯ ಸತೀಶ ಬಿ. ನಾಯಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕಾಲೇಜಿಗೆ ಅತ್ಯಗತ್ಯವಾದ ಕಂಪ್ಯೂಟರ್‌ಗಳನ್ನು ಒದಗಿಸುವಂತೆ ಶಾಸಕರಲ್ಲಿ ವಿನಂತಿಸಲಾಗಿತ್ತು. ಶಾಸಕರು ಎಂದಿನಂತೆ ವಿಶೇಷ ಆದ್ಯತೆಯ ಮೇರೆಗೆ ಮುತುವರ್ಜಿ ವಹಿಸಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಶೀಘ್ರದಲ್ಲಿ ಕಂಪ್ಯೂಟರ್‌ಗಳನ್ನು ಒದಗಿಸಿರುವುದು ವಿದ್ಯಾರ್ಥಿಗಳ ಕಂಪ್ಯೂಟ್ ಕಲಿಕೆಗೆ ವರದಾನವಾಗಲಿದೆ. ಇದಕ್ಕಾಗಿ ಸದಾ ಕೃತಜ್ಞರು ಎಂದರು.ಕಾಲೇಜಿನ ಉಪನ್ಯಾಸಕ ಆರ್.ಎಚ್. ನಾಯ್ಕ. ಆರ್.ಟಿ. ನಾಯಕ, ಆನಂದ ವೈ. ನಾಯ್ಕ, ಕಾಲೇಜಿನ ಕಂಪ್ಯೂಟರ್ ಉಪನ್ಯಾಸಕಿ ಪವಿತ್ರಾ ನಾಯ್ಕ ಮತ್ತು ನಮೃತಾ ಹುಲಸ್ವಾರ, ಸಿಡಿಸಿ ಸದಸ್ಯ ನಿತ್ಯಾನಂದ ನಾಯ್ಕ ಇತರರು ಇದ್ದರು.