ಹಾನಗಲ್ಲ: ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ವೀರಶೈವ ಲಿಂಗಾಯತ ಸಮುದಾಯದ ಬೇಡಿಕೆ ಇದ್ದು, ಸಂಸದನಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ಪಡೆದು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಹಾನಗಲ್ ಪಟ್ಟಣದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಏರ್ಪಡಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನಾಗೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಹತ್ತು ಹನ್ನೆರಡು ವರ್ಷಗಳ ಹಿಂದೆ ಮಾಡಿದ್ದೇವು. ನಮ್ಮ ನಾಯಕರಾಗಿದ್ದ ಸಿ.ಎಂ. ಉದಾಸಿಯವರು ಏತ ನೀರಾವರಿ ಯೋಜನೆಗಳನ್ನು ಮಾಡಬೇಕೆಂದು ಹೇಳಿದಾಗ ಹಾನಗಲ್ನಲ್ಲಿ ಮೂರು ಏತನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಿಎಂ ಉದಾಸಿಯವರ ಪ್ರಯತ್ನ, ಶ್ರದ್ಧೆಯಿಂದ ಮಾಡಿದ್ದೇವೆ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ಇತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದ ಇತ್ತು. ಹೀಗಾಗಿ ಹಾನಗಲ್ ತಾಲೂಕಿನ ಬಹುತೇಕ ಕೆರೆಗಳು ತುಂಬುವಂತಾಗಿದೆ. ಅದೇ ರೀತಿ ಧರ್ಮಾ ಕಾಲುವೆ ಆಧುನೀಕರಣಕ್ಕೆ ನಾನು ನೀರಾವರಿ ಸಚಿವನಾಗಿದ್ದಾಗ ೪೯ಕೋಟಿ ರು. ಕೊಟ್ಟಿದ್ದೇನೆ. ಕಳಸಾಪುರ ಎರಡನೇ ಹಂತದ ಏತ ನೀರಾವರಿ ಯೋಜನೆಗೆ ಹಣ ಕೊಟ್ಟು ಪ್ರಾರಂಭ ಮಾಡಿದ್ದೇವೆ. ತಿಳುವಳ್ಳಿ ಏತ ನೀರಾವರಿ ಯೋಜನೆ ಆರಂಭ ಮಾಡಿದ್ದೇವೆ. ಇದೇ ರೀತಿ ಎಲ್ಲರೂ ಸೇರಿ ಕೆಲಸ ಮಾಡಿದರೆ ರೈತನ ಬಾಳು ಹಸನಾಗುತ್ತದೆ. ಭೂಮಿ ತಾಯಿ ಹಸಿರು ಸೀರೆ ಉಟ್ಟು ಕಂಗೊಳಿಸುತ್ತಾಳೆ ಎಂದು ಹೇಳಿದರು.ಗುರುಗಳು ಆಜ್ಞೆ ಮಾಡಿದಂತೆ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ೨೫ ಲಕ್ಷ ರು. ಅನುದಾನ ನೀಡಲಾಗುವುದು. ಅಲ್ಲದೇ ನಮ್ಮ ಸ್ವಂತ ಟ್ರಸ್ಟ್ನಿಂದ ತಾವು ಮಾಡುವ ಕೆಲಸಕ್ಕೆ ಹಾವೇರಿ ಜಿಲ್ಲೆಯ ಪ್ರತಿ ತಾಲೂಕಿನ ಗ್ರಾಮೀಣಾಭಿವೃದ್ಧಿ ಸಂಘಗಳಿಗೆ ೧೦ ಲಕ್ಷ ರು. ನೀಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಪುಷ್ಪಗಿರಿ ಸಂಸ್ಥಾನ ಮಠದ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಹೋತನಹಳ್ಳಿಯ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ, ಹರಿಹರ ತಾಲೂಕಿನ ಸಿದ್ದಾಶ್ರಮದ ಯೋಗಾನಂದ ಸ್ವಾಮೀಜಿ, ಮಾಜಿ ಶಾಸಕ ಶಿವರಾಜ ಸಜ್ಜನ, ಮುಖಂಡರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ರಾಜಶೇಖರ ಕಟ್ಟೇಗೌಡ್ರ, ಶಿವಲಿಂಗಪ್ಪ ತಲ್ಲೂರ ಬಿ.ಎಸ್.ದಳವಾಯಿ ಸೇರಿದಂತೆ ಅನೇಕ ಮುಖಂಡರು ತಾಯಂದಿರು ಸೇರಿದಂತೆ ಹಲವರು ಇದ್ದರು.