ಅಂಗನವಾಡಿ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಯತ್ನ: ಶಾಸಕ ಭೀಮಣ್ಣ ನಾಯ್ಕ ಭರವಸೆ

KannadaprabhaNewsNetwork |  
Published : Oct 22, 2024, 12:21 AM IST
ಸಿದ್ದಾಪುರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯ ದಿನಾಚರಣೆ ಕಾರ್ಯಕ್ರಮವನ್ನು ಭೀಮಣ್ಣ ನಾಯ್ಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಂಗನವಾಡಿ ಸಿಬ್ಬಂದಿಯ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತಿ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಭರವಸೆ ನೀಡಿದರು.

ಸಿದ್ದಾಪುರ: ತಾಯಿಯ ನಂತರ ಮಕ್ಕಳಿಗೆ ಸಂಸ್ಕಾರವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ಅವರನ್ನು ತರಲು ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಪಟ್ಟಣದ ಶಂಕರ ಮಠದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದವರು ಏರ್ಪಡಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲಾಖೆ ನೀಡುವ ಸೌಲಭ್ಯಗಳನ್ನು ಮಕ್ಕಳಿಗೆ ನೀಡಿ ಅವರನ್ನು ಸದೃಢರನ್ನಾಗಿ ಮಾಡುವ ಕೆಲಸದ ಜತೆ ಪಾಲಕರಿಗಿಂತ ಹೆಚ್ಚಿನ ಗಮನ ಕೊಟ್ಟು ಪಾಲನೆ ಮಾಡುತ್ತಿರುವವರು ಅಂಗನವಾಡಿ ಕಾರ್ಯಕರ್ತೆಯರು. ನಿಮ್ಮ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತಿ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಸರ್ಕಾರದ ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕಡಿಮೆ ವೇತನವನ್ನು ನೀಡಿ ಸರ್ಕಾರ ಕಣ್ಣೀರು ಹಾಕುವಂತೆ ಮಾಡಿದೆ. ಇತರೆ ಇಲಾಖೆ ಅಧಿಕಾರಿಗಳಿಗೆ ನೀಡುವ ಸಂಬಳದಂತೆ ಇವರಿಗೂ ಯಾಕೆ ನೀಡುತ್ತಿಲ್ಲ. ಇವರೇನು ಕೆಲಸ ಮಾಡುತ್ತಿಲ್ಲವಾ ಎಂದು ಪ್ರಶ್ನಿಸಿದರು. ಸಂಘಟನೆಯ ರಾಜ್ಯಾಧ್ಯಕ್ಷೆ ಜಿ. ಪ್ರೇಮಾ, ಜಿಲ್ಲಾಧ್ಯಕ್ಷೆ ಅನಿತಾ ಶೇಟ್, ಸಿಡಿಪಿಒ ಪೂರ್ಣಿಮಾ ದೊಡ್ಮನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸನ್ಮಾನಿಸಲಾಯಿತು. ಕೃಷ್ಣಮೂರ್ತಿ ಐಸೂರ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕು ಅಧ್ಯಕ್ಷೆ ಯಮುನಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಭಾರತಿ ನಾಯ್ಕ ಸ್ವಾಗತಿಸಿದರು. ರೇಖಾ ಹೆಗಡೆ ನಿರೂಪಿಸಿದರು. ಶೋಭಾ ನಾಯ್ಕ ವಂದಿಸಿದರು. ಇಂದು ವೀಳ್ಯದೆಲೆ ಕುರಿತು ಕಾರ್ಯಾಗಾರ

ಹೊನ್ನಾವರ: ಪಟ್ಟಣದ ಎಸ್‌ಡಿಎಂ ಕಾಲೇಜಿನಲ್ಲಿ ಅ. 22ರಂದು ನಮ್ಮ ಹೊನ್ನಾವರ, ಕುಮಟಾದ ಹೆಮ್ಮೆಯ ರೈತೋತ್ಪನ್ನವಾದ ರಾಣಿ ವೀಳ್ಯದ ಎಲೆಯ ಬಗ್ಗೆ ವಿಶೇಷ ಕಾರ್ಯಾಗಾರ ಜರುಗಲಿದೆ. ವೀಳ್ಯದೆಲೆಯ ಬೆಳೆಗಾರರು, ಕೃಷಿಕರು ಹಾಗೂ ಎಲೆ ವ್ಯಾಪಾರಸ್ಥರು ಭಾಗವಹಿಸಿ ವಿಚಾರಸಂಕಿರಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV