ಸಂಡೂರು: ಜೀವನದಲ್ಲಿ ಅಹಂ ಮತ್ತು ಆಸೆ ನಮ್ಮನ್ನು ಕೆಳಮಟ್ಟಕ್ಕೆ ತಳ್ಳುತ್ತದೆ. ಬೇಕು ಎನ್ನುವವರ ಬಡವ. ಆದರೆ ಸಾಕು ಎನ್ನುವವರ ಶ್ರೀಮಂತ ಎಂದು ಬೆಂಗಳೂರಿನ ಬಸವ ಯೋಗಾಶ್ರಮದ ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
೧೨ನೇ ಶತಮಾನದ ಶಿವಶರಣರ ವಚನ ಉದಾಹರಿಸುವ ಮೂಲಕ ಆಸೆಯೇ ದಾಸ್ಯತ್ವ, ಆಸೆಯಿಂದ ಮುಕ್ತನಾಗಿರುವುದೇ ಈಶತ್ವ. ಇಂದ್ರಿಯಗಳನ್ನು ನಾವು ನಿಯಂತ್ರಿಸಬೇಕು. ಆಸೆಪಟ್ಟು ಕೊಂಡುಕೊಳ್ಳಬಾರದು. ಅಗತ್ಯವಿರುವುದನ್ನು ಬಿಡಬಾರದು. ಶರಣರು ತಮ್ಮ ವಚನ ಹಾಗೂ ನಡೆನುಡಿಯ ಮೂಲಕ ನಮ್ಮನ್ನು ತಿದ್ದಿದರು. ಅವರ ವಚನಗಳ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ದುಶ್ಚಟ, ದುರ್ಗುಣ ಹಾಗೂ ದುರ್ಭಾವ ಕಳೆದುಕೊಳ್ಳಬೇಕು ಎಂದರು.
ನಮ್ಮ ಜೀವನ ಕ್ಷಣಿಕ. ಅದು ದೀಪದಂತೆ. ಯಾವಾಗ ಆರುತ್ತದೆಯೋ ಗೊತ್ತಿಲ್ಲ. ಜೀವನ ಸದುಪಯೋಗಪಡಿಸಿಕೊಳ್ಳಬೇಕು. ಜೀವನ ಮುಗಿಯುವುದರೊಳಗೆ ಸಾಧನೆ ಮಾಡಬೇಕು. ಆಧ್ಯಾತ್ಮ ಇಲ್ಲದಿದ್ದರೆ ಬದುಕನ್ನು ಬದಲಾವಣೆ ಮಾಡಿಕೊಳ್ಳಲಾಗಲ್ಲ. ಶಿವನನ್ನು ನೆನೆಯಬೇಕು. ಇದರಿಂದ ಜ್ಞಾನವೃದ್ಧಿಯಾಗುತ್ತದೆ ಎಂಬುದನ್ನು ದೃಷ್ಟಾಂತಗಳ ಮೂಲಕ ವಿವರಿಸಿದರು.ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನರಿ ಬಸವರಾಜ ಸಂಗೀತ ಕಾರ್ಯಕ್ರಮ ನೀಡಿದರು. ಮುಖಂಡರಾದ ಹಗರಿ ಬಸವರಾಜಪ್ಪ, ಜಿ.ಕೆ. ನಾಗರಾಜ, ಕೆ.ಎಸ್. ಚನ್ನಬಸಪ್ಪ, ಹಟ್ಟಿ ಕೊಟ್ರೇಶ್, ಅರಳಿ ಕುಮಾರಸ್ವಾಮಿ, ತಿಪ್ಪೇರುದ್ರಯ್ಯ, ಮಂಗಾಪುರದ ಈರಣ್ಣ, ಅಕ್ಕನಬಳಗ, ಬಸವ ಬಳಗ, ಬಸವಪರ ಸಂಘಟನೆಗಳು ಹಾಗೂ ವಿರಕ್ತಮಠದ ಸೇವಾ ಸಮಿತಿಯ ಸದಸ್ಯರು, ಹಲವು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.