ಎಲ್‌ ನಿನೋ ಎಫೆಕ್ಟ್, ತುಂಗಭದ್ರಾ ಜಲಾಶಯಕ್ಕೆ ಶೂನ್ಯ ನೀರಿನ ಒಳಹರಿವು

KannadaprabhaNewsNetwork |  
Published : Jun 29, 2026, 02:15 AM IST
ಸಸಸಸ | Kannada Prabha

ಸಾರಾಂಶ

ಕಳೆದ 8 ದಿನಗಳಿಂದ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಅಂದರೆ ಜಲಾಶಯಕ್ಕೆ ಒಂದು ಹನಿ ನೀರು ಹರಿದು ಬರುತ್ತಿಲ್ಲ

ಎಸ್. ನಾರಾಯಣ್ ಮುನಿರಾಬಾದ್

ಎಲ್‌ ನಿನೋ ತುಂಗಭದ್ರಾ ಜಲಾಶಯದ ಮೇಲೆ ಭಾರಿ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಬರಬೇಕಾಗಿದ್ದು, ಎಲ್‌ ನಿನೋ ಪರಿಣಾಮ ಪ್ರಸಕ್ತ ಸಾಲಿನ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕುಸಿತವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 52 ಟಿಎಂಸಿಯಷ್ಟು ನೀರಿನ ಕೊರತೆ ಎದ್ದು ಕಾಣುತ್ತಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 62 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ನೀರಿನ ಒಳ ಹರಿವು 60,000 ಕ್ಯುಸೆಕ್‌ ಇತ್ತು. ಆದರೆ ಈ ವರ್ಷ ಜಲಾಶಯದಲ್ಲಿ 9.5 ಟಿಎಂಸಿಯಷ್ಟು ನೀರು ಮಾತ್ರ ಇದೆ. ಜೂನ್‌ ಮೊದಲ ವಾರವೂ ಇಷ್ಟೇ ನೀರಿತ್ತು. ಜಲಾಶಯದ ನೀರಿನ ಮಟ್ಟ 1688 ಅಡಿ ಇದ್ದು, ಜೂನ್‌ ಕೊನೆಯ ವಾರದಲ್ಲಿ ಸಹ ನೀರಿನ ಮಟ್ಟ ಅಷ್ಟೇ ಇದೆ. 1 ಅಡಿಯೂ ಏರಿಕೆ ಆಗಿಲ್ಲ.

ಶೂನ್ಯಕ್ಕೆ ತಲುಪಿದ ಒಳಹರಿವು: ಕಳೆದ 8 ದಿನಗಳಿಂದ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಅಂದರೆ ಜಲಾಶಯಕ್ಕೆ ಒಂದು ಹನಿ ನೀರು ಹರಿದು ಬರುತ್ತಿಲ್ಲ, ಇದು ಪರಿಸ್ಥಿತಿಯ ಭೀಕರತೆ ತೋರಿಸುತ್ತದೆ. ಈ ಬೆಳವಣಿಗೆ ರೈತರಲ್ಲಿ ಆತಂಕವನ್ನುಂಟು ಮಾಡಿದೆ.

ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗುತ್ತದೆ, ಆದರೆ ಪ್ರಸಕ್ತ ಜೂ. 1ರಿಂದ ಜೂ. 20ರ ವರೆಗೆ ಜಲಾಶಯಕ್ಕೆ ಪ್ರತಿನಿತ್ಯ 100ರಿಂದ 500 ಕ್ಯುಸೆಕ್‌ ನೀರು ಮಾತ್ರ ಹರಿದು ಬಂದಿದೆ. ಇದು ಅತ್ಯಂತ ಅಲ್ಪ ಪ್ರಮಾಣದ ಒಳಹರಿವು ಎನ್ನಲಾಗುತ್ತಿದೆ.

ಜಲಾನಯನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆ ಆಗದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಬರುತ್ತಿಲ್ಲ. ಇದು ಅಚ್ಚುಕಟ್ಟು ಪ್ರದೇಶದ ಅನ್ನದಾತರ ಚಿಂತೆಗೆ ಕಾರಣವಾಗಿದೆ.

ಮುಂಗಾರು ಬೆಳೆಗೆ 120 ಟಿಎಂಸಿ ನೀರು ಬೇಕು. ಅಚ್ಚುಕಟ್ಟು ಪ್ರದೇಶಗಳಾದ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಅನಂತಪುರ ಕರ್ನೂಲ್, ಕಡಪ ಜಿಲ್ಲೆಗಳ ರೈತರ ಮುಂಗಾರು ಬೆಳೆಗಳಿಗೆ ಸುಮಾರು 120 ಟಿಎಂಸಿ ನೀರು ಅಗತ್ಯವಿರುತ್ತದೆ, ಆದರೆ ಜಲಾಶಯದಲ್ಲಿ ಕೇವಲ 9.5 ಟಿಎಂಸಿ ಇದೆ. ಈ ಬಾರಿ ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರ ಮುಂಗಾರು ಬೆಳೆಗೆ ನೀರು ದೊರೆಯುವುದೇ ಎನ್ನುವ ಪ್ರಶ್ನೆಗೆ ಮಳೆರಾಯನೇ ಉತ್ತರ ನೀಡಬೇಕಾಗಿದೆ.

ಪ್ರಸಕ್ತ ಸಾಲಿನ ತುಂಗಭದ್ರಾ ಜಲಾಶಯದ ಒಳಹರಿವು ಕ್ಷೀಣಿಸಿದ್ದು ಆತಂಕದ ವಿಷಯವಾಗಿದೆ. ಸದ್ಯ ತುಂಗಭದ್ರಾ ಜಲಾಶಯದ ನೀರನ್ನು ಕೇವಲ ಕುಡಿಯಲು ಮಾತ್ರ ಉಪಯೋಗಿಸಲಾಗುತ್ತಿದೆಯೇ ಹೊರತು ಕಾರ್ಖಾನೆ ಹಾಗೂ ಗದ್ದೆಗಳಿಗೆ ಹರಿಸಲಾಗುತ್ತಿಲ್ಲ. ಶಿವಮೊಗ್ಗದ ಭದ್ರಾ ಜಲಾಶಯದಲ್ಲೂ ನೀರಿನ ಒಳಹರಿವು ಕಡಿಮೆಯಾಗಿದೆ. ಅಲ್ಲಿಯು ಪರಿಸ್ಥಿತಿ ಗಂಭೀರವಾಗಿದೆ. ಜು. 2ನೇ ವಾರದಲ್ಲಿ ಮಳೆ ಆಗುವ ಸಂಭವವಿದೆ ಎಂದು ಮುಖ್ಯ ಅಭಿಯಂತರ ಶ್ರೀನಿವಾಸ್ ಮಲ್ಲಿಗವಾಡ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾಸ್ಪತ್ರೆಗೆ ಇರುವುದು ಒಂದೇ ಆ್ಯಂಬುಲೆನ್ಸ್
ಹೊರಗುತ್ತಿಗೆ ನೌಕರರ ನೂತನ ಕನಿಷ್ಠ ವೇತನ ಆದೇಶ ತಕ್ಷಣ ಜಾರಿಗೊಳಿಸಲು ಆಗ್ರಹ