ಕನ್ನಡಪ್ರಭ ವಾರ್ತೆ ಕೋಲಾರಒಂದೇ ಮನೆಯಲ್ಲಿ ಸುಮಾರು ೧೦ ಸಾವಿರ ಜನರ ಇದ್ದಾರೆ ಅಂತ ವಿಳಾಸ ತೋರಿಸ್ತಿದ್ದಾರೆ. ಇದು ಹೇಗೆ ಸಾಧ್ಯ, ಮತಗಳ್ಳತನ ನಡೆದಿರುವುದು ಇದರಿಂದಲೇ ಸ್ಪಷ್ಟವಾಗುತ್ತದೆ. ಮತಗಳ್ಳತನದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಆಗ್ರಹಿಸಿದರು. ನಗರದ ಹೊಸ ಬಸ್ ನಿಲ್ದಾಣ ಬಳಿ ಚುನಾವಣಾ ಆಯೋಗದ ಮತಗಳ್ಳತನ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಆಯೋಗ ಬಿಜೆಪಿ ಸರ್ಕಾರದ ಏಜೆಂಟ್ರಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.
ಡಾ.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವನ್ನು ಬಿಜೆಪಿ ಅನುಸರಿಸುತ್ತಿಲ್ಲ. ದೇಶದಲ್ಲಿ ಬಿಜೆಪಿಯವರು ಮತಗಳ್ಳತನದ ಮೂಲಕ ಗೆದ್ದಿದ್ದಾರೆ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಮತಗಳ್ಳತನ ಆಗಿದೆ ಎಂದು ದೂರು ನೀಡಿದರೆ, ಮತಗಳ್ಳತನ ಆಗಿಲ್ಲ ಕ್ಷಮಾಪಣೆ ಕೇಳಬೇಕು ಅಂತಾರೆ. ಇಂತಹ ಅನ್ಯಾಯಗಳು ನಮ್ಮ ದೇಶದಲ್ಲಿ ನಡೆಯುತ್ತಿವೆ. ಮತಗಳ್ಳತನ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಳ್ಳಿ ಹಳ್ಳಿಗೂ ಹೋಗಿ ಮತಗಳ್ಳತನದ ಬಗ್ಗೆ ಮಾಹಿತಿ ನೀಡಬೇಕು ಎಂದರು. ಹಣ ನೀಡಿ ಮತ ಖರೀದಿ
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಒಂದು ಮತಕ್ಕೆ ೮೦ ರೂಪಾಯಿ ಕೊಟ್ಟು ೬೦೦೦ ಸಾವಿರ ಮತಗಳನ್ನು ಖರೀದಿ ಮಾಡಿರುವ ಸತ್ಯ ತನಿಖೆಯಿಂದ ಹೊರಬಂದಿದೆ. ಚುನಾವಣಾ ಆಯೋಗ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಒಂದು ಪಕ್ಷದ ಏಜೆಂಟ್ ರೀತಿ ಕೆಲಸ ಮಾಡಬಾರದು ಯಾವುದೋ ಒಂದು ಸರ್ಕಾರದ ಪರ ಕೆಲಸ ಮಾಡುವುದಲ್ಲ ಸಿಬಿಐ, ಇಡಿ, ಚುನಾವಣಾ ಆಯೋಗ ಸೇರಿ ಎಲ್ಲದರಲ್ಲೂ ರಾಜಕೀಯಕರಣಗೊಳಿಸಿದ್ದಾರೆ ಜೊತೆಗೆ ಸುಪ್ರೀಂಕೋರ್ಟ್ ಅನ್ನು ಸಹ ಬೇರೆ ದೃಷ್ಟಿಯಲ್ಲಿ ನೋಡುವ ಹಾಗೆ ಮಾಡಿದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು. ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನಗರ ಬ್ಲಾಕ್ ಅಧ್ಯಕ್ಷ ಸೈಯದ್ ಅಫ್ಸರ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತ ಇದ್ದರು.