ಡಿ.7ರಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ

KannadaprabhaNewsNetwork |  
Published : Oct 21, 2025, 01:00 AM IST
20ಕೆಆರ್ ಎಂಎನ್ 8.ಜೆಪಿಜಿಬಿಡಿಸಿಸಿ ಬ್ಯಾಂಕ್  | Kannada Prabha

ಸಾರಾಂಶ

ರಾಮನಗರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಒಳಗೊಂಡಿರುವ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿ(ಬಿಡಿಸಿಸಿ)ನ 21 ನಿರ್ದೇಶಕ ಸ್ಥಾನಗಳಿಗೆ ಡಿಸೆಂಬರ್ 7ರಂದು ಚುನಾವಣೆ ನಿಗದಿಯಾಗಿದೆ.

ರಾಮನಗರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಒಳಗೊಂಡಿರುವ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿ(ಬಿಡಿಸಿಸಿ)ನ 21 ನಿರ್ದೇಶಕ ಸ್ಥಾನಗಳಿಗೆ ಡಿಸೆಂಬರ್ 7ರಂದು ಚುನಾವಣೆ ನಿಗದಿಯಾಗಿದೆ.

ಮತದಾನದ ಹಕ್ಕು ಹೊಂದಿರುವ ಪಿಎಸಿಎಸ್ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ) ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ. ಹೀಗಾಗಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ರಾಜಕೀಯ ಚಟುವಟಿಕೆ ಚುರುಕುಗೊಳ್ಳುವಂತೆ ಮಾಡಿದೆ.

ಸಹಕಾರ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಸಲುವಾಗಿ ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಗಳು ರಾಜಕೀಯ ಚುನಾವಣೆ ಗಳನ್ನೇ ಮೀರಿಸುವಂತೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇದು ಬೇರೆ ಬೇರೆ ಜಿಲ್ಲೆಗಳ ಡಿಸಿಸಿ ಚುನಾವಣೆಗಳಲ್ಲಿ ಸಾಬೀತಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣಗೊಂಡಿರುವ ರಾಮನಗರ ಜಿಲ್ಲೆಯಲ್ಲಿ 100 ಪಿಎಸಿಎಸ್‌ಗಳಿದ್ದು, ಈ ಪೈಕಿ ಕ್ಷೇತ್ರ ವಿಗಂಡಣೆಯ ಕಾರಣ ಕೆಲ ಪಿಎಸಿಎಸ್‌ಗಳ ಕಾರ್ಯಕ್ಷೇತ್ರ ಅದಲು ಬದಲಾಗಿದ್ದು, ಇದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ತಲಾ ಒಬ್ಬರು ನಿರ್ದೇಶಕರು ಆಯ್ಕೆಯಾಗಬೇಕಿದ್ದು, ಈ ಹಿಂದೆ ಗೆದ್ದ ನಿರ್ದೇಶಕರುಗಳು ಹಾಗೂ ಕಳೆದ ಬಾರಿ ಸೋತ ಸ್ಪರ್ಧಿಗಳ ಜೊತೆಗೆ ಕೆಲ ಹೊಸ ಮುಖಗಳು ಸಹ ಈ ಬಾರಿಯ ಬಿಡಿಸಿಸಿ ಬ್ಯಾಂಕ್ ಅಖಾಡಕ್ಕೆ ಧುಮುಕಿದ್ದಾರೆ.

ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದು, ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಬಹುದಾದರೂ ಜೆಡಿಎಸ್ ಜೊತೆಗಿನ ಮೈತ್ರಿ ಕಾರಣ ಇಬ್ಬರು ಬಿಡಿಸಿಸಿ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.

ಈಗಾಗಲೇ ಬಮೂಲ್ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿರುವ ಕಾಂಗ್ರೆಸ್ ಅದೇ ಫಲಿತಾಂಶವನ್ನು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಪುನಾರಾವರ್ತಿಸುವ ಇರಾದೆಯಲ್ಲಿದ್ದು, ಜೆಡಿಎಸ್ ಅದಕ್ಕೆ ಅಡ್ಡಗಾಲು ಹಾಕಲು ತಂತ್ರಗಳನ್ನು ರೂಪಿಸುತ್ತಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ತಾಲೂಕುಗಳ ಜೊತೆ ಹೊಸದಾಗಿ ಹಾರೋಹಳ್ಳಿ ಕೂಡ ತಾಲೂಕಾಗಿ ರೂಪುಗೊಂಡಿದ್ದು, ಐದು ತಾಲೂಕುಗಳಿಂದ ಐವರು ನಿರ್ದೇಶಕರುಗಳು ಆಯ್ಕೆಯಾಗಬೇಕಿದೆ.

ಕಳೆದ ಬಾರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಮೂವರು ಕಾಂಗ್ರೆಸ್ ಬೆಂಬಲಿತ ಹಾಗೂ ಒಬ್ಬರು ಜೆಡಿಎಸ್ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಕಮಾಲು ಮಾಡಿತ್ತು.

ಕೆಲ ಪಿಎಸಿಎಸ್ ಗಳ ಕಾರ್ಯಕ್ಷೇತ್ರ ಬದಲಾದ ಕಾರಣ ಚನ್ನಪಟ್ಟಣದ ಮೂರು ಪಿಎಸಿಎಸ್ ಗಳನ್ನು ರಾಮನಗರಕ್ಕೂ, ರಾಮನಗರದ ಮೂರನ್ನು ಮತ್ತೂಂದು ಕ್ಷೇತ್ರಕ್ಕೂ ಸೇರಿಸಿರುವ ಕಾರಣ ಕೆಲ ಗೊಂದಲ ಉಂಟಾಗಿದ್ದು, ಇದು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ರಾಜಕೀಯವಾಗಿ ಪ್ರತಿಷ್ಠೆಯಾಗಿದ್ದು, ಆ ಕಾರಣದಿಂದಲೇ ಕೆಲ ರಾಜಕೀಯ ಪ್ರಭಾವಿ ನಾಯಕರುಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಿಡಿಸಿಸಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದಾರೆ.

ಕಳೆದ ಅವಧಿ ಹೊರತುಪಡಿಸಿ ಕನಕಪುರದಿಂದ ಅವಿರೋಧ ಆಯ್ಕೆಯಾಗುತ್ತಿದ್ದ ವಿಧಾನ ಪರಿಷತ್ ಸದಸ್ಯ ಎಸ್. ರವಿ ಇದೀಗ ಆ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರ ಆಪ್ತ ಎಂ.ಡಿ.ವಿಜಯ್ ದೇವ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಅತ್ತ ಮಾಗಡಿಯಲ್ಲಿ ಕಳೆದ ಮೂರು ಬಾರಿಯು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗುತ್ತಿರುವ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ಸಹೋದರ ಅಶೋಕ್ ಈ ಬಾರಿಯು ಅವಿರೋಧ ಆಯ್ಕೆಯಾಗುವ ಹವಣಿಕೆಯಲ್ಲಿದ್ದಾರೆ.

ಜೆಡಿಎಸ್ ತೆಕ್ಕೆಯಲ್ಲಿದ್ದ ರಾಮನಗರವನ್ನು ಯರೇಹಳ್ಳಿ ಮಂಜು ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ತೆಕ್ಕೆಗೆ ತಂದಿದ್ದು, ಇನ್ನುಳಿದಂತೆ ಚನ್ನಪಟ್ಟಣದಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕ ಕುಕ್ಕೂರು ದೊಡ್ಡಿ ಜಯರಾಮು ರವರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಶಾಸಕ ಸಿ.ಪಿ.ಯೋಗೇಶ್ವರ್ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.

ಬಾಕ್ಸ್ ...

ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಕಾಂಗ್ರೆಸ್ ಪಕ್ಷ ಸಹಕಾರಿ ಚುನಾವಣೆಗಳಲ್ಲೂ ಅದನ್ನೇ ನಿರೀಕ್ಷಿಸುತ್ತಿದೆ. ಅದರಂತೆ ಬಮೂಲ್ ನ ನಿರ್ದೇಶಕ ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಕೈ ಪಾಳಯ ಬಿಡಿಸಿಸಿಯಲ್ಲೂ ಅದೇ ಫಲಿತಾಂಶವನ್ನು ಹೊರತರಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ರಾಜಕೀಯ ನಾಯಕರುಗಳು ಪ್ರಯತ್ನ, ಸ್ಥಳೀಯ ಮುಖಂಡರುಗಳ ಸಂಘಟಿತ ಹೋರಾಟ ಸಾಧ್ಯವಾದರೆ, ಕ್ಲಿನ್ ಸ್ವೀಪ್ ಸಾಧಿಸುವ ಕಾಂಗ್ರೆಸ್ ಕನಸು ನನಸಾಗುವುದೇ ಕಾದು ನೋಡಬೇಕಿದೆ.

20ಕೆಆರ್ ಎಂಎನ್ 8.ಜೆಪಿಜಿ

ಬಿಡಿಸಿಸಿ ಬ್ಯಾಂಕ್ .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ
ಹುಟ್ಟು ಸಾವಿನ ಮಧ್ಯೆ ಸಾಧನೆ ಮಹತ್ವದ್ದು: ಡಾ.ಮುರುಗೇಶ ನಿರಾಣಿ