ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಅಬ್ಬರರಹಿತ ಚುನಾವಣೆ: ಮೂಡುಬಿದಿರೆ ಶೇ. 76 ಮತದಾನ ದಾಖಲೆ

KannadaprabhaNewsNetwork | Published : Apr 29, 2024 1:33 AM

ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ರೋಡ್ ಶೋಗೆ ಬಂದ ಸಂದರ್ಭ ಹೊರತು ಪಡಿಸಿದರೆ ಮೂಡುಬಿದಿರೆಲ್ಲಿ ಹೇಳಿಕೊಳ್ಳುವ ಎಲೆಕ್ಷನ್ ಅಬ್ಬರವೇ ಇರಲಿಲ್ಲ. ಆದರೆ 2019, 2023ರ ಚುನಾವಣೆಗೂ ಮೀರಿ 160767 (76.51%) ಮತದಾನ ನಡೆದಿದೆ ಎನ್ನುವುದು ವಿಶೇಷ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಳೆದ ಶುಕ್ರವಾರ ನಡೆದ 18ನೇ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿರುವ ಮೂಡುಬಿದಿರೆಯ ಮತದಾರರು ನಿರಾಳವಾಗಿದ್ದಾರೆ. ಇನ್ನೇನಿದ್ದರೂ ಫಲಿತಾಂಶಕ್ಕಾಗಿ ಕಾಯಬೇಕಾದ ಅನಿವಾರ್ಯತೆ. ನಾಯಕರು, ಅಭ್ಯರ್ಥಿಗಳು ಅವರ ಬೆಂಬಲಿಗರು ಹತ್ತು ಹಲವು ಲೆಕ್ಕಾಚಾರಗಳಿಗೆ ಮುಂದಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ರೋಡ್ ಶೋಗೆ ಬಂದ ಸಂದರ್ಭ ಹೊರತು ಪಡಿಸಿದರೆ ಮೂಡುಬಿದಿರೆಲ್ಲಿ ಹೇಳಿಕೊಳ್ಳುವ ಎಲೆಕ್ಷನ್ ಅಬ್ಬರವೇ ಇರಲಿಲ್ಲ. ಆದರೆ 2019, 2023ರ ಚುನಾವಣೆಗೂ ಮೀರಿ 160767 (76.51%) ಮತದಾನ ನಡೆದಿದೆ ಎನ್ನುವುದು ವಿಶೇಷ.

ಮತ್ತೆ ಈ ಬಾರಿಯಂತೂ ಅಭ್ಯರ್ಥಿಗಳು ಬಿಟ್ಟರೆ ಯಾವ ನಾಯಕರೂ ಮೂಡುಬಿದಿರೆಯತ್ತ ಮುಖ ಮಾಡಲಿಲ್ಲ.

ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಬ್ಬರೂ ಹೊಸಬರು. ಹಾಗಾಗಿ ಬಿಜೆಪಿಯ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ 6 ಬಾರಿ ಮೂಡುಬಿದಿರೆಗೆ ಭೇಟಿ ಇತ್ತರು. ಉಳಿದಂತೆ ಹಾಲಿ ಸಂಸದರು,ಬಿಜೆಪಿ ಜಿಲ್ಲಾಧ್ಯಕ್ಷರು ಇಲ್ಲಿ ಕಾಣಿಸಿಕೊಂಡದ್ದು ಒಂದೇ ಬಾರಿ!

ಇನ್ನು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ 4 ಬಾರಿ ಮೂಡುಬಿದಿರೆಗೆ ಬಂದು ಹೋದರೆ ಮಿಥುನ್ ರೈ ಮೂರು ಬಾರಿ, ಮಂಜುನಾಥ ಭಂಡಾರಿ, ರಮಾನಾಥ ರೈ ಕೂಡಾ ಒಮ್ಮೆ ಕಾಣಿಸಿಕೊಂಡರು. ಸ್ಟಾರ್ ಪ್ರಚಾರಕರಾಗಲೀ ಜನಪ್ರಿಯತೆಯ ನಾಯಕ, ನಾಯಕಿಯರು ಯಾರೂ ಮೂಡುಬಿದಿರೆಗೆ ಬಂದಿದ್ದೇ ಇಲ್ಲ.

ಮತದಾನದಲ್ಲಿ ಮೂಡುಬಿದಿರೆಯವರ ಕೊಡುಗೆ ದೊಡ್ಡದಿದೆ. ಆದರೆ ಇಲ್ಲಿನ ಮತದಾರರಿಗೆ ತಮ್ಮ ನೆಚ್ಚಿನ ಜನ ನಾಯಕ, ನಾಯಕಿಯರನ್ನು ಕಾಣುವ ಭಾಗ್ಯವೇ ಬರಲಿಲ್ಲ.

ಗಮನ ಸೆಳೆದ ಜಾತಿರಾಜಕಾರಣ:

ಈ ಬಾರಿ ಎಲೆಕ್ಷನ್ ಬಂಟ ಬಿಲ್ಲವ ಜಾತಿಯ ಬಲಾಬಲದ ಕಾರಣವಾಗಿರುವುದಕ್ಕೂ ಮೂಡುಬಿದಿರೆಯೇ ಮೂಲ. ಶಾಸಕರು ಬಿಲ್ಲವ ನಾಯಕತ್ವದ ಕುರಿತಾಗಿ ಹೇಳಿದ್ದರೆನ್ನಲಾದ ಮಾತುಗಳೇ ಸುದ್ದಿಯಾದವು. ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಮಿಥುನ್ ರೈ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರು ನಮ್ಮ ಪರವಾಗಿದ್ದಾರೆ ಎಂಬ ಹೇಳಿಕೆಯೂ ಸಾಕಷ್ಟು ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಯಿತು. ಶಾಸಕ ಕೋಟ್ಯಾನರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮಲಗಿದರೂ ಅದಕ್ಕೂ ಗಾಸಿಪ್ ಸೃಷ್ಟಿ ಆಯಿತು.!