ತುರುವೇಕೆರೆ: ಇಲ್ಲಿಯ ತಿಪಟೂರು ರಸ್ತೆಯಲ್ಲಿನ ಜೆಮೊಪೈ ಎಲೆಕ್ಟ್ರಿಕ್ ದ್ವಿಚಕ್ರವಾಹನದ ಶೋರೂಮ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಎರಡು ಬೈಕ್ ಗಳು ಸುಟ್ಟು ಹೋಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ತುರುವೇಕೆರೆ: ಇಲ್ಲಿಯ ತಿಪಟೂರು ರಸ್ತೆಯಲ್ಲಿನ ಜೆಮೊಪೈ ಎಲೆಕ್ಟ್ರಿಕ್ ದ್ವಿಚಕ್ರವಾಹನದ ಶೋರೂಮ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಎರಡು ಬೈಕ್ ಗಳು ಸುಟ್ಟು ಹೋಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಅರಳೀಕೆರೆ ಗ್ರಾಮದ ಎ.ಎಸ್.ಮೋಹನ್ ಎಂಬುವರಿಗೆ ಸೇರಿದ ಜೆಮೊಪೈ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಶೋರೂಮ್ನ್ನು ಸೋಮವಾರ ಮಳೆಯ ಕಾರಣ ಬೇಗನೆ ಬಾಗಿಲು ಹಾಕಲಾಗಿತ್ತು. ಬಾಗಿಲು ಹಾಕಿದ ಸ್ವಲ್ಪ ಸಮಯದ ನಂತರ ರಾತ್ರಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕೀಟ್ ಆದ ಪರಿಣಾಮ ಅಂಗಡಿ ಒಳಗಿನಿಂದಲೇ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಅಕ್ಕಪಕ್ಕದ ಅಂಗಡಿಯವರು ಅಗ್ನಿಶಾಮಕ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳು ಶೋರೂಮ್ ನ ಶಟರ್ ತೆರೆದು ಬೆಂಕಿ ನಂದಿಸಿದ್ದಾರೆ. ಅಷ್ಟರೊಳಗೆ ಅಂಗಡಿಯಲ್ಲಿದ್ದ ೧೮ ದ್ವಿಚಕ್ರ ವಾಹನಗಳ ಪೈಕಿ ಎರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ಜ್ವಾಲೆಗೆ ಬ್ಯಾಟರಿಗಳು, ಅಂಗಡಿಗೆ ಅಳವಡಿಸಲಾಗಿದ್ದ ಗಾಜಿನ ಬಾಗಿಲು ಒಡೆದು ಹೋಗಿವೆ. ಕಂಪ್ಯೂಟರ್ ಹಾನಿಗೊಳಗಾಗಿದೆ. ಬೆಂಕಿ ಅಂಗಡಿ ಒಳಗೆ ಹರಡಿದ್ದರಿಂದ ಎಲ್ಲ ದ್ವಿಚಕ್ರ ವಾಹನಗಳ ರಕ್ಷಾ ಕವಚಗಳು ಸುಟ್ಟಿವೆ ಎಂದು ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳು ತಿಳಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳಾದ ನವೀನ್ ಕುಮಾರ್, ಶಿವಕುಮಾರ್, ರಾಹುಲ್, ಸುನಿಲ್ ಹಿರೇಮಠ್, ತೌಸಿಫ್ ಭಾಗವಾನ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.