ಕುದೂರು: ತಿಂಗಳ ಹಿಂದೆ ಬೀಸಿದ ಬಿರುಗಾಳಿ ಮಳೆಗೆ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು, ಕಂಬ ಮತ್ತು ತಂತಿಗಳು ವಾಲಿಕೊಂಡು ಕೈಗೆಟುಕುವಂತಿದ್ದು ಜನರು ಪ್ರಾಣಭೀತಿಯಿಂದ ಓಡಾಡುವಂತಾಗಿದೆ.
ಕಳೆದ ತಿಂಗಳು ಬೀಸಿದ ಗಾಳಿ ಹಾಗೂ ಮಳೆಗೆ ಮರದ ರೆಂಬೆಮುರಿದು ವಿದ್ಯುತ್ ಲೈನ್ ಮೇಲೆ ಬಿದ್ದು ತಂತಿಗಳು ಇಳಿಬಿದ್ದು ವಿದ್ಯುತ್ ಕಂಬ ವಾಲಿಕೊಂಡಿದೆ. ರೆಂಬೆ ತೆಗೆದು ಹೋದವರು ಕಂಬವನ್ನು ಸರಿಯಾಗಿ ನಿಲ್ಲಿಸಿ ಕೈಗೆಟುಕುತ್ತಿರುವ ತಂತಿಗಳನ್ನು ಸರಿಪಡಿಸುವ ಕೆಲಸವನ್ನು ಬೆಸ್ಕಾಂ ಕಚೇರಿಯವರು ಮಾಡಿಲ್ಲ.
ಕಂಬ ದಿನೇ ದಿನೇ ವಾಲುತ್ತಿದೆ. ಅಪಾಯಕ್ಕೆ ಹತ್ತಿರವಾಗುತ್ತಿದೆ. ಇದು ಬೇಸಿಗೆಯಾಗಿರುವ ಕಾರಣ ಶಾಲಾ ಮಕ್ಕಳಿಗೆ ರಜೆ ಇದೆ. 11.ಕೆ.ವಿ. ವಿದ್ಯುತ್ ತಂತಿಗಳು ಜೋತುಬಿದ್ದು ಕೈಗೆಟುಕುವಂತಿದೆ. ಇದರಿಂದ ಮಕ್ಕಳು ಅರಿವಿಲ್ಲದೆ ಆಟವಾಡುವಾಗ ಮುಟ್ಟಿದರೆ ಅಪಾಯವಾಗುವ ಸಾಧ್ಯತೆಗಳಿವೆ.ಕೋಡಿಹಳ್ಳಿ ಕಾಲೂನಿ ನಿವಾಸಿ ಮೆಕಾನಿಕ್ ವಸಂತ್ಕುಮಾರ್ ಬೆಸ್ಕಾಂ 1912 ದೂರವಾಣಿಗೆ ಸಾಕಷ್ಟು ಬಾರಿ ಕರೆ ಮಾಡಿ ದೂರು ನೀಡಿದ್ದಾರೆ. ಮತ್ತು ಕುದೂರು ಕಚೇರಿಗೆ ಖುದ್ದಾಗಿ ಹೋಗಿ ಸಮಸ್ಯೆ ವಿವರಿಸಿ ಬಂದು ತಿಂಗಳಾಗಿವೆ. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ. ಇಗೋ ಬಂದೆ ಅಗೋಬಂದೆ ಎಂಬ ಉತ್ತರಗಳನ್ನು ನೀಡಿ ಕಳಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
14ಕೆಆರ್ ಎಂಎನ್ 5,6.ಜೆಪಿಜಿ
6.ಕೈಗೆಟುವಂತೆ ಜೋತುಬಿದ್ದಿರುವ ವಿದ್ಯುತ್ ತಂತಿಗಳು.